ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 35

ಮೃತರು ಬದುಕಸಾಧ್ಯವಿದೆ!

ಮೃತರು ಬದುಕಸಾಧ್ಯವಿದೆ!

ಒಂದುವೇಳೆ ನಾವು ಮೃತಪಟ್ಟರೆ ದೇವರು ನಮ್ಮನ್ನು ಪುನರುತ್ಥಾನಗೊಳಿಸಲು ಅಥವಾ ಮತ್ತೆ ಬದುಕಿಸಲು ಇಷ್ಟಪಡುತ್ತಾನಾ?— ಇಷ್ಟಪಡುತ್ತಾನೆಂಬ ನಂಬಿಕೆ ಯೋಬನೆಂಬ ಸತ್ಪುರುಷನಿಗಿತ್ತು. ಸಾವು ಸಮೀಪವಾಗಿದೆ ಎಂದು ಅವನಿಗೆ ಅನಿಸಿದಾಗ, “ನೀನು ಕರೆದರೆ ನಾನು ಉತ್ತರಕೊಡುವೆನು” ಅಂತ ದೇವರ ಮೇಲಿನ ಭರವಸೆಯನ್ನು ವ್ಯಕ್ತಪಡಿಸಿದನು. ಸಾವನ್ನಪ್ಪಿದರೂ ತನ್ನನ್ನು ಪುನರುತ್ಥಾನಗೊಳಿಸಲು ಯೆಹೋವನು ಹಂಬಲಿಸುತ್ತಾನೆ ಅಂತ ಯೋಬನು ಹೇಳಿದನು.—ಯೋಬ 14:14, 15.

ಯೆಹೋವನ ಅದೇ ಹಂಬಲಿಕೆ ಮಗನಾದ ಯೇಸುವಿನಲ್ಲೂ ಇದೆ. ನಮಗೆ ಸಹಾಯಮಾಡಲಿಕ್ಕಾಗಿ ಯೇಸು ಮನಸ್ಸಾರೆ ಇಷ್ಟಪಡುತ್ತಾನೆ. ಒಮ್ಮೆ ಒಬ್ಬ ಕುಷ್ಠರೋಗಿ, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂತ ಯೇಸುವನ್ನು ಬೇಡಿಕೊಂಡ. ಯೇಸು “ನನಗೆ ಮನಸ್ಸುಂಟು” ಅಂತ ಹೇಳಿ ಅವನ ಕುಷ್ಠರೋಗವನ್ನು ವಾಸಿಮಾಡಿದನು.—ಮಾರ್ಕ 1:40-42.

ಚಿಕ್ಕ ಮಕ್ಕಳ ಮೇಲೆ ತನಗಿರುವ ಪ್ರೀತಿಯನ್ನು ಯೆಹೋವನು ಹೇಗೆ ತೋರಿಸಿದನು?

ಮಕ್ಕಳೆಡೆಗೆ ಹೇಗೆ ಪ್ರೀತಿ ತೋರಿಸುವುದೆಂದು ಯೇಸು ತನ್ನ ತಂದೆಯಿಂದ ಕಲಿತಿದ್ದನು. ಬಹಳ ವರ್ಷಗಳ ಹಿಂದೆ ಯೆಹೋವನು ಬೇರೆ ಬೇರೆ ಸಂದರ್ಭಗಳಲ್ಲಿ ಇಬ್ಬರು ಬಾಲಕರನ್ನು ಪುನರುತ್ಥಾನಗೊಳಿಸಿದನು. ತನ್ನ ಸೇವಕರ ಮೂಲಕ ಆ ಅದ್ಭುತಗಳನ್ನು ಮಾಡಿಸಿದನು. ಒಂದ್ಸಲ, ಎಲೀಯನೆಂಬ ದೇವರ ಸೇವಕನು ಒಬ್ಬ ಚಿಕ್ಕ ಹುಡುಗನನ್ನು ಪುನರುತ್ಥಾನಗೊಳಿಸುವಂತೆ ಯೆಹೋವನನ್ನು ಬೇಡಿಕೊಂಡನು. ಆ ಚಿಕ್ಕ ಹುಡುಗನ ತಾಯಿಯು ಎಲೀಯನಿಗೆ ತುಂಬಾ ಉಪಕಾರ ಮಾಡಿದ್ದಳು. ಎಲೀಯನು ಬೇಡಿಕೊಂಡಾಗ ಯೆಹೋವನು ಆ ಹುಡುಗನನ್ನು ಪುನರುತ್ಥಾನಗೊಳಿಸಿದನು. ಇನ್ನೊಂದು ಸಲ, ಎಲೀಷನೆಂಬ ಮತ್ತೊಬ್ಬ ಸೇವಕನನ್ನು ಉಪಯೋಗಿಸಿ ಇನ್ನೊಬ್ಬ ಚಿಕ್ಕ ಹುಡುಗನನ್ನು ಯೆಹೋವನು ಪುನರುತ್ಥಾನಗೊಳಿಸಿದನು.—1 ಅರಸುಗಳು 17:17-24; 2 ಅರಸುಗಳು 4:32-37.

ಯೆಹೋವನು ನಮ್ಮ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನಲ್ವಾ?— ನಾವು ಬದುಕಿರುವಾಗ ಮಾತ್ರವಲ್ಲ ಮೃತಪಟ್ಟ ಮೇಲೂ ನಮ್ಮನ್ನು ನೆನಪಿಸಿಕೊಳ್ಳುತ್ತಾನೆ. ತನ್ನ ಮೃತಪಟ್ಟ ಪ್ರಿಯ ಸೇವಕರನ್ನು ಯೆಹೋವನು ಬದುಕಿರುವವರಂತೆ ಎಣಿಸುತ್ತಾನೆಂದು ಯೇಸು ಹೇಳಿದನು. (ಲೂಕ 20:38) ಬೈಬಲ್‌ ಹೇಳುವುದನ್ನೂ ಗಮನಿಸು: ‘ಮರಣವಾಗಲಿ ಜೀವವಾಗಲಿ ಇಂದಿನ ಸಂಗತಿಗಳಾಗಲಿ ಮುಂದೆ ಬರಲಿರುವ ಸಂಗತಿಗಳಾಗಲಿ ಯಾವುದೂ ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಲಾರವು.’—ರೋಮನ್ನರಿಗೆ 8:38, 39.

ಯೆಹೋವನು ಚಿಕ್ಕ ಮಕ್ಕಳ ಕುರಿತು ಬಹಳ ಕಾಳಜಿವಹಿಸುತ್ತಾನೆಂದು ಯೇಸು ಭೂಮಿಯಲ್ಲಿದ್ದಾಗ ತೋರಿಸಿಕೊಟ್ಟನು. ಮಕ್ಕಳಿಗೆ ದೇವರ ಕುರಿತು ಕಲಿಸಲು ಯೇಸು ಸಮಯ ಮಾಡಿಕೊಂಡ ವಿಷಯ ನಿನಗೆ ನೆನಪಿರಬಹುದು. ಆದರೆ, ಚಿಕ್ಕ ಮಕ್ಕಳನ್ನು ಪುನರುತ್ಥಾನಗೊಳಿಸುವ ಶಕ್ತಿಯನ್ನು ದೇವರು ಯೇಸುವಿಗೆ ಕೊಟ್ಟಿದ್ದನು ಅಂತ ನಿನಗೆ ಗೊತ್ತಿತ್ತಾ?— ಸರಿ, ನಾವೀಗ 12 ವರ್ಷದ ಹುಡುಗಿಯನ್ನು ಯೇಸು ಪುನರುತ್ಥಾನಗೊಳಿಸಿದ ಘಟನೆ ಕುರಿತು ನೋಡೋಣ. ಆಕೆ ಯಾಯೀರ ಎಂಬವನ ಮಗಳು.

ಯಾಯೀರನ ಮನೆ ಗಲಿಲಾಯ ಸಮುದ್ರದ ಹತ್ತಿರವಿತ್ತು. ಅವನು ತನ್ನ ಹೆಂಡತಿ ಹಾಗೂ ಒಬ್ಬಳೇ ಮಗಳೊಂದಿಗೆ ಸುಖವಾಗಿದ್ದನು. ಒಂದು ದಿನ ಅವನ ಮಗಳು ಬಹಳವಾಗಿ ಅಸ್ವಸ್ಥಳಾಗುತ್ತಾಳೆ. ಅವಳಿನ್ನು ಬದುಕುವುದಿಲ್ಲ ಅಂತ ಯಾಯೀರನಿಗೆ ಗೊತ್ತಾಗುತ್ತೆ. ಆಗ ಅವನಿಗೆ ಯೇಸುವಿನ ನೆನಪಾಗುತ್ತದೆ. ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೇಸುವಿಗಿದೆ ಅಂತ ಯಾಯೀರನು ಜನರಿಂದ ಕೇಳಿಸಿಕೊಂಡಿದ್ದನು. ಅವನು ಯೇಸುವನ್ನು ಕಾಣಲು ಹೋಗುತ್ತಾನೆ. ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ಜನರಿಗೆ ಬೋಧನೆ ಮಾಡುತ್ತಿದ್ದನು.

ಅಲ್ಲಿ ಯಾಯೀರನು ಜನರ ಗುಂಪಿನ ನಡುವೆ ದಾರಿಮಾಡಿಕೊಂಡು ಬಂದು ಯೇಸುವಿನ ಪಾದಗಳಿಗೆ ಬಿದ್ದು, ‘ನನ್ನ ಒಬ್ಬಳೇ ಮಗಳು ತುಂಬಾ ಅಸ್ವಸ್ಥಳಾಗಿದ್ದಾಳೆ. ನೀನು ದಯವಿಟ್ಟು ಬಂದು ಅವಳನ್ನು ಗುಣಪಡಿಸು. ನಿನ್ನನ್ನು ಬೇಡಿಕೊಳ್ಳುತ್ತೇನೆ’ ಎನ್ನುತ್ತಾನೆ. ಕೂಡಲೆ ಯೇಸು ಯಾಯೀರನೊಂದಿಗೆ ಹೊರಡುತ್ತಾನೆ. ಮಹಾ ಬೋಧಕನನ್ನು ನೋಡಲು ಬಂದಿದ್ದ ಜನರು ಸಹ ಅವನ ಹಿಂದೆಯೇ ಹೋಗುತ್ತಾರೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಯಾಯೀರನ ಮನೆಯಿಂದ ಕೆಲವರು ಬಂದು, “ನಿನ್ನ ಮಗಳು ತೀರಿಹೋದಳು! ಇನ್ನು ಬೋಧಕನಿಗೆ ತೊಂದರೆ ಕೊಡುವುದೇಕೆ?” ಎಂದು ಯಾಯೀರನಿಗೆ ವಿಷಯ ಮುಟ್ಟಿಸುತ್ತಾರೆ.

ಅವರ ಮಾತು ಯೇಸುವಿನ ಕಿವಿಗೆ ಬೀಳುತ್ತದೆ. ಮುದ್ದಾಗಿ ಸಾಕಿದ ಒಬ್ಬಳೇ ಮಗಳ ಮರಣವಾರ್ತೆ ಯಾಯೀರನಿಗೆ ಅಗಾಧ ದುಃಖ ಉಂಟುಮಾಡಬಲ್ಲದೆಂದು ಯೇಸುವಿಗೆ ಗೊತ್ತು. ಆದ್ದರಿಂದ ಅವನು ಯಾಯೀರನಿಗೆ, ‘ಭಯಪಡಬೇಡ. ದೇವರಲ್ಲಿ ನಂಬಿಕೆಯಿಡು. ನಿನ್ನ ಮಗಳು ಗುಣವಾಗುವಳು’ ಅಂತ ಹೇಳುತ್ತಾನೆ. ಅವರೆಲ್ಲರೂ ಯಾಯೀರನ ಮನೆಗೆ ಹೋಗುತ್ತಾರೆ. ನೆರೆದಿದ್ದ ಬಂಧುಮಿತ್ರರೆಲ್ಲ ಅಲ್ಲಿ ಅಳುತ್ತಿದ್ದರು. ತಮ್ಮೆಲ್ಲರ ಕಣ್ಮಣಿಯಾಗಿದ್ದ ಮುದ್ದು ಬಾಲೆ ಈಗ ತೀರಿಕೊಂಡಿರುವುದು ಅವರಿಂದ ತಾಳಲಾಗಲಿಲ್ಲ. ಯೇಸು ಅವರನ್ನು ನೋಡಿ, “ಅಳುವುದನ್ನು ನಿಲ್ಲಿಸಿ. ಅವಳು ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಅಂತ ಹೇಳಿದನು.

ಯೇಸುವಿನ ಮಾತು ಕೇಳಿ ಜನರ ಮುಖದಲ್ಲಿ ಕುಹಕ ನಗೆ ಮೂಡುತ್ತದೆ. ಯಾಕೆಂದರೆ ಆ ಹುಡುಗಿ ಸತ್ತಿರೋದು ಅವರೆಲ್ಲರಿಗೆ ಗೊತ್ತಿದೆ. ಅಂದಮೇಲೆ ನಿದ್ರೆಮಾಡುತ್ತಿದ್ದಾಳೆ ಅಂತ ಯೇಸು ಏಕೆ ಹೇಳಿದನೆಂದು ನಿನಗೆ ಗೊತ್ತಾ?— ಹಾಗಾದರೆ ಅವನು ಜನರಿಗೆ ಯಾವ ಪಾಠ ಕಲಿಸಲು ಬಯಸಿದನು?— ಮರಣವು ಗಾಢ ನಿದ್ರೆಯಂತೆ ಎಂದು ಜನರು ತಿಳಿದುಕೊಳ್ಳಬೇಕೆಂದು ಯೇಸು ಬಯಸಿದನು. ನಿದ್ರೆ ಮಾಡುತ್ತಿರುವ ಒಬ್ಬ ವ್ಯಕ್ತಿಯನ್ನು ನಾವೆಷ್ಟು ಸುಲಭವಾಗಿ ಎಬ್ಬಿಸ ಸಾಧ್ಯನೋ ಅಷ್ಟೇ ಸುಲಭವಾಗಿ ದೇವರ ಶಕ್ತಿಯ ಸಹಾಯದಿಂದ ತಾನು ಸತ್ತವರನ್ನು ಎಬ್ಬಿಸಬಲ್ಲೆ ಅಂತ ಯೇಸು ತೋರಿಸಲು ಬಯಸಿದನು.

ಯೇಸು ಯಾಯೀರನ ಮಗಳನ್ನು ಪುನರುತ್ಥಾನಗೊಳಿಸಿದ ಘಟನೆಯಿಂದ ನಾವೇನನ್ನು ಕಲಿಯುತ್ತೇವೆ?

ಮುಂದೇನಾಯಿತು ಗೊತ್ತಾ? ಯೇಸು ಆ ಹುಡುಗಿಯ ಅಪ್ಪಅಮ್ಮ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಬಿಟ್ಟು ಉಳಿದೆಲ್ಲರನ್ನೂ ಮನೆಯಿಂದ ಹೊರಗೆ ಕಳುಹಿಸುತ್ತಾನೆ. ನಂತರ ಅವನು ಆ ಚಿಕ್ಕ ಹುಡುಗಿಯನ್ನು ಮಲಗಿಸಿದ್ದಲ್ಲಿಗೆ ಹೋಗಿ ಅವಳ ಕೈಹಿಡಿದು, ‘ಅಮ್ಮಣ್ಣೀ ಎದ್ದೇಳು!’ ಅಂತ ಹೇಳಿ ಎಬ್ಬಿಸಿದನು. ಕೂಡಲೇ ಅವಳು ಎದ್ದು ನಡೆದಾಡತೊಡಗಿದಳು. ಮಗಳು ಪುನಃ ಬದುಕಿದ್ದನ್ನು ನೋಡಿದ ಅಪ್ಪಅಮ್ಮನಿಗಾದ ಆನಂದಕ್ಕೆ ಪಾರವೇ ಇರಲಿಲ್ಲ.—ಮಾರ್ಕ 5:21-24, 35-43; ಲೂಕ 8:40-42, 49-56.

ಈಗ ಸ್ವಲ್ಪ ಯೋಚಿಸು. ಯೇಸು ಆ ಚಿಕ್ಕ ಹುಡುಗಿಯನ್ನು ಪುನಃ ಬದುಕಿಸಿರುವಾಗ ಬೇರೆಯವರನ್ನೂ ಬದುಕಿಸಬಲ್ಲನಲ್ವಾ?— ಬದುಕಿಸುವನೆಂಬ ನಂಬಿಕೆ ನಿನಗಿದೆಯಾ?— ಹೌದು, ಖಂಡಿತ. ಏಕೆಂದರೆ, “ಸಮಾಧಿಗಳಲ್ಲಿ ಇರುವವರೆಲ್ಲರೂ [ನನ್ನ] ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ” ಅಂತ ಯೇಸು ಮಾತು ಕೊಟ್ಟಿದ್ದಾನೆ.—ಯೋಹಾನ 5:28, 29.

ನಿನಗೇನು ಅನಿಸುತ್ತೆ, ಯೇಸು ಜನರನ್ನು ಪುನರುತ್ಥಾನಗೊಳಿಸಲು ಹಂಬಲಿಸುತ್ತಾನಾ?— ಈ ಪ್ರಶ್ನೆಗೆ ಉತ್ತರವಾಗಿ ಬೈಬಲಿನ ಮತ್ತೊಂದು ಉದಾಹರಣೆ ನೋಡೋಣ. ಮೃತರ ಆಪ್ತರ ರೋಧನದ ಕುರಿತು ಯೇಸುವಿಗೆ ಹೇಗನಿಸುತ್ತದೆ ಅಂತ ಈ ಉದಾಹರಣೆ ತೋರಿಸುತ್ತದೆ. ಅದು ನಾಯಿನೆಂಬ ಊರಿನ ಹತ್ತಿರ ನಡೆದ ಘಟನೆ.

ಒಬ್ಬ ಯುವಕನ ಶವವನ್ನು ಹೊತ್ತುಕೊಂಡು ಜನರ ಗುಂಪೊಂದು ಆ ಊರಿನಿಂದ ಹೊರಗೆ ಬರುತಿತ್ತು. ಆ ಗುಂಪಿನಲ್ಲಿ ಆ ಹುಡುಗನ ತಾಯಿಯೂ ಗೋಳಾಡುತ್ತಾ ಬರುತ್ತಿದ್ದಳು. ಕೆಲವು ವರ್ಷಗಳ ಹಿಂದೆಯಷ್ಟೆ ಅವಳ ಗಂಡ ತೀರಿಕೊಂಡಿದ್ದನು. ಈಗ ಇದ್ದ ಒಬ್ಬನೇ ಒಬ್ಬ ಮಗನೂ ತೀರಿಕೊಂಡಿದ್ದಾನೆ. ಅವಳಿಗಾದ ದುಃಖವನ್ನು ಊಹಿಸಲೂ ಸಾಧ್ಯವಿಲ್ಲ. ಯುವಕನ ಶವವನ್ನು ಊರ ಹೊರಗೆ ಹೊತ್ತುಕೊಂಡು ಹೋಗುತ್ತಿರುವಾಗ ಆ ಊರಿನ ಅನೇಕ ಜನರು ಹಿಂಬಾಲಿಸಿದರು. ಅವನ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಜನರು ಎಷ್ಟು ಸಮಾಧಾನ ಹೇಳಿದರೂ ಅವಳ ರೋಧನ ಕಡಿಮೆಯಾಗಲಿಲ್ಲ.

ಅದೇ ದಿನದಂದು ಯೇಸು ಮತ್ತು ಅವನ ಶಿಷ್ಯರು ನಾಯಿನ್‌ ಊರಿನ ಕಡೆ ಹೋಗುತ್ತಿದ್ದರು. ಊರ ಬಾಗಿಲ ಹತ್ತಿರ ಆ ತರುಣನ ಶವವನ್ನು ಹೊತ್ತು ಸಮಾಧಿಮಾಡಲು ಹೋಗುತ್ತಿದ್ದ ಗುಂಪು ಅವರ ಕಣ್ಣಿಗೆ ಬಿತ್ತು. ಜೋರಾಗಿ ಗೋಳಾಡುತ್ತಿರುವ ಆ ಮಹಿಳೆಯನ್ನು ನೋಡಿದಾಗ ಯೇಸುವಿನ ಹೃದಯ ಮಮ್ಮಲಮರುಗಿತು. ಅವಳಿಗೆ ಸಹಾಯಮಾಡಲು ಹಂಬಲಿಸಿದನು.

ಕೋಮಲ ಹಾಗೂ ಭರವಸೆ ಮೂಡಿಸುವ ಧ್ವನಿಯಲ್ಲಿ ಯೇಸು ಅವಳಿಗೆ, “ಅಳಬೇಡ” ಅಂತ ಹೇಳಿದನು. ಇದನ್ನು ಗಮನಿಸಿದ ಜನರು ಅವನೆಡೆಗೆ ಕುತೂಹಲದಿಂದ ನೋಡಿದರು. ಯೇಸು ಶವದ ಹತ್ತಿರ ಹೋದಾಗ ಎಲ್ಲರ ದೃಷ್ಟಿ ಅವನ ಮೇಲೆಯೇ ನಾಟಿತ್ತು. ಯೇಸು “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ!” ಎಂದು ಅಪ್ಪಣೆಕೊಟ್ಟನು. ಕೂಡಲೇ ಅವನೆದ್ದು ಕುಳಿತುಕೊಂಡನು. ಎಲ್ಲರೊಂದಿಗೆ ಮಾತಾಡತೊಡಗಿದನು.—ಲೂಕ 7:11-17.

ತಾಯಿಗೆ ಹೇಗನಿಸಿರಬೇಕು ಅಂತ ನೆನಸು! ಮೃತಪಟ್ಟಿರುವ ಒಬ್ಬ ಪ್ರಿಯ ವ್ಯಕ್ತಿ ತಿರುಗಿ ಬಂದರೆ ನಿನಗೆ ಹೇಗನಿಸುತ್ತದೆ?— ಯೇಸು ಜನರನ್ನು ಪ್ರೀತಿಸುತ್ತಾನೆ ಅವರಿಗೆ ಸಹಾಯಮಾಡಲು ಇಷ್ಟಪಡುತ್ತಾನೆಂದು ಆ ಅದ್ಭುತದಿಂದ ತಿಳಿದುಬರುತ್ತೆ ಅಲ್ವಾ?— ಸ್ವಲ್ಪ ಯೋಚಿಸಿ ನೋಡು! ದೇವರ ನೂತನ ಲೋಕದಲ್ಲಿ ಪುನರುತ್ಥಾನಗೊಂಡು ಬರುವ ಜನರನ್ನು ಸ್ವಾಗತಿಸುವುದು ಎಷ್ಟು ಹರ್ಷೊಲ್ಲಾಸವಾಗಿರುವುದು.—2 ಪೇತ್ರ 3:13; ಪ್ರಕಟನೆ 21:3, 4.

ಈ ಸ್ತ್ರೀಯ ಒಬ್ಬನೇ ಮಗನ ಪುನರುತ್ಥಾನದಿಂದ ಯಾವ ಪಾಠ ಕಲಿಯುತ್ತೇವೆ?

ಪುನರುತ್ಥಾನಗೊಂಡು ಬರುವವರಲ್ಲಿ ನಮಗೆ ಪರಿಚಯವಿರುವ ದೊಡ್ಡವರು, ಮಕ್ಕಳು ಇರುತ್ತಾರೆ. ಪುನರುತ್ಥಾನಗೊಂಡ ತನ್ನ ಮಗಳನ್ನು ಯಾಯೀರನು ಹೇಗೆ ಗುರುತು ಹಿಡಿದನೋ ಹಾಗೆಯೇ ನಮಗೂ ನಮ್ಮ ಪರಿಚಯಸ್ಥರ ಗುರುತು ಸಿಗುವುದು. ನೂರಾರು, ಸಾವಿರಾರು ವರ್ಷಗಳ ಹಿಂದೆ ತೀರಿಕೊಂಡಿದ್ದ ಜನರೂ ಪುನರುತ್ಥಾನಗೊಳ್ಳುವರು. ಅಷ್ಟು ವರ್ಷಗಳ ಹಿಂದೆ ತೀರಿಕೊಂಡಿರುವುದಾದರೂ ದೇವರು ಅವರನ್ನು ಮರೆಯುವುದಿಲ್ಲ.

ನೋಡಿದ್ಯಾ. ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ನಮ್ಮನ್ನು ತುಂಬಾ ತುಂಬಾ ಪ್ರೀತಿಸುತ್ತಾರೆ. ಈ ವಿಷಯ ನಮ್ಮ ಮನಸ್ಸಿಗೆ ಮುದ ನೀಡುತ್ತೆ ಅಲ್ವಾ?— ಕೇವಲ ಕೆಲವು ವರ್ಷಗಳಲ್ಲ ನಾವು ಸದಾಕಾಲ ಜೀವಿಸಬೇಕೆಂದು ಅವರು ಬಯಸುತ್ತಾರೆ.

ಮೃತರಿಗಾಗಿರುವ ಭವ್ಯ ನಿರೀಕ್ಷೆಯ ಕುರಿತು ಬೈಬಲ್‌ ಏನು ಹೇಳುತ್ತದೆಂದು ಯೆಶಾಯ 25:8; ಅಪೊಸ್ತಲರ ಕಾರ್ಯಗಳು 24:15 ಮತ್ತು 1 ಕೊರಿಂಥ 15:20-22 ರಲ್ಲಿ ಓದೋಣ.