ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಿಮಗೋಸ್ಕರ ಚಿಂತಿಸುತ್ತಾನೆ

ಯೆಹೋವನು ನಿಮಗೋಸ್ಕರ ಚಿಂತಿಸುತ್ತಾನೆ

ಯೆಹೋವನು ನಿಮಗೋಸ್ಕರ ಚಿಂತಿಸುತ್ತಾನೆ

“ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”​—1 ಪೇತ್ರ 5:7.

1. ಯಾವ ಪ್ರಾಮುಖ್ಯ ವಿಷಯದಲ್ಲಿ ಯೆಹೋವನೂ ಸೈತಾನನೂ ಸಂಪೂರ್ಣವಾಗಿ ಪರಸ್ಪರ ತದ್ವಿರುದ್ಧವಾಗಿದ್ದಾರೆ?

ಯೆಹೋವನೂ ಸೈತಾನನೂ ಪರಸ್ಪರ ತದ್ವಿರುದ್ಧ ಪ್ರಕೃತಿಯ ವ್ಯಕ್ತಿಗಳು. ಯೆಹೋವನ ಪ್ರಕೃತಿಯಿಂದ ಆಕರ್ಷಿಸಲ್ಪಡುವ ಒಬ್ಬ ವ್ಯಕ್ತಿಯು ಪಿಶಾಚನ ಪ್ರಕೃತಿಯಿಂದ ಖಂಡಿತವಾಗಿ ವಿಕರ್ಷಿಸಲ್ಪಡುವನು. ಈ ವೈದೃಶ್ಯದ ಬಗ್ಗೆ ಒಂದು ಆದರ್ಶ ಪರಾಮರ್ಶೆಯ ಕೃತಿಯು ತಿಳಿಸುತ್ತದೆ. ಬೈಬಲಿನ ಯೋಬ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಸೈತಾನನ ಚಟುವಟಿಕೆಗಳ ವಿಷಯದಲ್ಲಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ (1970) ಹೇಳುವುದು: ‘ಸೈತಾನನ ಕೆಲಸವು ಭೂಮಿಯಲ್ಲಿ ಸುತ್ತಾಡಿ ಪ್ರತಿಕೂಲವಾಗಿ ವರದಿಸಬೇಕಾದ ಕಾರ್ಯಗಳನ್ನು ಅಥವಾ ವ್ಯಕ್ತಿಗಳನ್ನು ಹುಡುಕುವುದಾಗಿದೆ; ಹೀಗೆ ಅವನ ಕೆಲಸವು ಭೂಮಿಯಲ್ಲಿ ಒಳ್ಳೆಯದಾಗಿರುವ ಸಕಲವನ್ನೂ ಬಲಪಡಿಸುವ “ಯೆಹೋವನ ದೃಷ್ಟಿ”ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ (II ಪೂರ್ವಕಾಲ. xvi, 9). ನಿಸ್ವಾರ್ಥಭಾವದ ಮಾನವ ಒಳ್ಳೇತನದ ಬಗ್ಗೆ ಸೈತಾನನಿಗೆ ತಿರಸ್ಕಾರಭರಿತ ಅಪನಂಬಿಕೆಯಿದೆ ಮತ್ತು ದೇವರ ಅಧಿಕಾರ ಹಾಗೂ ನಿಯಂತ್ರಣದಲ್ಲಿ ಮತ್ತು ದೇವರು ನಿರ್ಧರಿಸಿರುವ ಪರಿಮಿತಿಯೊಳಗೆ ಅದನ್ನು ಪರೀಕ್ಷಿಸುವ ಅನುಮತಿ ಅವನಿಗಿದೆ.’ ಹೌದು, ಎಂತಹ ವೈದೃಶ್ಯ!​—ಯೋಬ 1:​6-12; 2:​1-7.

2, 3. (ಎ) “ಪಿಶಾಚನು” ಎಂಬ ಪದದ ಅರ್ಥವು, ಯೋಬನಿಗೆ ಏನು ಸಂಭವಿಸಿತೊ ಅದರಲ್ಲಿ ಹೇಗೆ ಯೋಗ್ಯವಾಗಿ ಚಿತ್ರಿತವಾಗಿದೆ? (ಬಿ) ಸೈತಾನನು ಭೂಮಿಯಲ್ಲಿರುವ ಯೆಹೋವನ ಸೇವಕರ ಮೇಲೆ ದೂರುಹೊರಿಸುತ್ತಾ ಹೋಗುತ್ತಿದ್ದಾನೆಂದು ಬೈಬಲು ಹೇಗೆ ತೋರಿಸುತ್ತದೆ?

2 “ಪಿಶಾಚನು” ಎಂಬುದರ ಗ್ರೀಕ್‌ ಪದದ ಅರ್ಥವು “ಮಿಥ್ಯಾಪಾದಕ,” “ಚಾಡಿ ಹೇಳುವವನು” ಎಂದಾಗಿದೆ. ಸೈತಾನನು ಯೆಹೋವನ ನಂಬಿಗಸ್ತ ಸೇವಕನಾಗಿದ್ದ ಯೋಬನ ಕುರಿತು, “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” ಎಂದು ಕೇಳುತ್ತಾ, ಅವನು ಸ್ವಾರ್ಥಭಾವದಿಂದ ಯೆಹೋವನ ಸೇವೆಮಾಡುತ್ತಿದ್ದಾನೆ ಎಂಬ ಆರೋಪ ಹೊರಿಸಿದನು. (ಯೋಬ 1:9) ಆದರೆ ಯೋಬನ ಪುಸ್ತಕದ ವೃತ್ತಾಂತವು ತೋರಿಸುವುದೇನಂದರೆ, ಪರೀಕ್ಷೆ ಮತ್ತು ಕಷ್ಟಗಳು ಬಂದರೂ ಯೋಬನು ಯೆಹೋವನನ್ನು ಬಿಡದೆ ಆತನಿಗೆ ಇನ್ನಷ್ಟು ನಿಕಟನಾದನು. (ಯೋಬ 10:9, 12; 12:9, 10; 19:25; 27:5; 28:28) ಅವನ ಆ ಉಗ್ರಪರೀಕ್ಷೆಯ ಬಳಿಕ ಅವನು ದೇವರಿಗೆ ಹೇಳಿದ್ದು: “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.”​—ಯೋಬ 42:5.

3 ಯೋಬನ ಸಮಯದಿಂದೀಚೆಗೆ, ಸೈತಾನನು ದೇವರ ನಂಬಿಗಸ್ತ ಸೇವಕರ ಮೇಲೆ ಆರೋಪ ಹೊರಿಸುವುದನ್ನು ನಿಲ್ಲಿಸಿದ್ದಾನೊ? ಇಲ್ಲ. ಪ್ರಕಟನೆ ಪುಸ್ತಕವು ತೋರಿಸುವಂತೆ, ಸೈತಾನನು ಈ ಅಂತ್ಯಕಾಲದಲ್ಲಿ ಕ್ರಿಸ್ತನ ಅಭಿಷಿಕ್ತ ಸಹೋದರರ ಮೇಲೆ ಮತ್ತು ನಿಶ್ಚಯವಾಗಿಯೂ ಅವರ ನಂಬಿಗಸ್ತ ಸಂಗಾತಿಗಳ ಮೇಲೆಯೂ ದೂರುಹೊರಿಸುತ್ತಿದ್ದಾನೆ. (2 ತಿಮೊಥೆಯ 3:12; ಪ್ರಕಟನೆ 12:10, 17) ಆದಕಾರಣ, ಈಗ ಸತ್ಕ್ರೈಸ್ತರಾಗಿರುವ ನಮ್ಮೆಲ್ಲರಿಗಿರುವ ಮಹಾ ಆವಶ್ಯಕತೆಯು ನಮಗೋಸ್ಕರ ಚಿಂತಿಸುವ ಯೆಹೋವ ದೇವರಿಗೆ ಅಧೀನತೆಯನ್ನು ತೋರಿಸಿ, ಗಾಢವಾದ ಪ್ರೀತಿಯಿಂದ ಆತನನ್ನು ಸೇವಿಸಿ, ಹೀಗೆ ಸೈತಾನನ ಆರೋಪವು ಸುಳ್ಳೆಂದು ರುಜುಪಡಿಸುವುದೇ ಆಗಿದೆ. ಹಾಗೆ ಮಾಡುವ ಮೂಲಕ ನಾವು ಯೆಹೋವನ ಹೃದಯವನ್ನು ಸಂತಸಗೊಳಿಸುವೆವು.​—ಜ್ಞಾನೋಕ್ತಿ 27:11.

ಯೆಹೋವನು ನಮಗೆ ಸಹಾಯಮಾಡಲು ಮಾರ್ಗಗಳನ್ನು ಹುಡುಕುತ್ತಾನೆ

4, 5. (ಎ) ಸೈತಾನನಿಗೆ ವೈದೃಶ್ಯವಾಗಿ, ಯೆಹೋವನು ಭೂಮಿಯ ಮೇಲೆ ಯಾರಿಗಾಗಿ ನೋಡುತ್ತಿದ್ದಾನೆ? (ಬಿ) ನಾವು ಯೆಹೋವನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ನಮ್ಮಿಂದ ಏನು ಆವಶ್ಯಕ?

4 ಪಿಶಾಚನು ಭೂಮಿಯಲ್ಲಿ ಸುತ್ತಾಡುತ್ತಾ, ಯಾರ ಮೇಲೆ ದೂರುಹೊರಿಸಲಿ, ಯಾರನ್ನು ನುಂಗಲಿ ಎಂದು ಹುಡುಕುತ್ತಾ ಇದ್ದಾನೆ. (ಯೋಬ 1:7, 9; 1 ಪೇತ್ರ 5:8) ಇದಕ್ಕೆ ವ್ಯತಿರಿಕ್ತವಾಗಿ ತನ್ನ ಬಲದ ಆವಶ್ಯಕತೆಯಿರುವವರಿಗೆ ಯೆಹೋವನು ಸಹಾಯಮಾಡಲು ದಾರಿಯನ್ನು ಹುಡುಕುತ್ತಾನೆ. ಪ್ರವಾದಿಯಾದ ಹನಾನಿಯು ರಾಜನಾದ ಆಸನಿಗೆ ಹೇಳಿದ್ದು: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ಸೈತಾನನ ದ್ವೇಷಪೂರ್ಣವಾದ ವಿಮರ್ಶಕ ದೃಷ್ಟಿ ಮತ್ತು ಯೆಹೋವನ ಪ್ರೀತಿಯ ಚಿಂತೆಯಲ್ಲಿ ಎಷ್ಟೊಂದು ವ್ಯತ್ಯಾಸವಿದೆ!

5 ನಮ್ಮ ಪ್ರತಿಯೊಂದು ಲೋಪದೋಷವನ್ನು ಕಂಡುಹಿಡಿಯಲಿಕ್ಕಾಗಿ ಯೆಹೋವನು ನಮ್ಮನ್ನು ಹೊಂಚುಹಾಕಿ ನೋಡುತ್ತಾ ಇರುವುದಿಲ್ಲ. ಕೀರ್ತನೆಗಾರನು ಬರೆದುದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ಇದಕ್ಕೆ ಸತ್ಯಸೂಚಕ ಉತ್ತರವು: ಯಾರೂ ನಿಲ್ಲಲಾರರು. (ಪ್ರಸಂಗಿ 7:20) ನಾವು ಪೂರ್ಣ ಹೃದಯಗಳಿಂದ ಯೆಹೋವನ ಬಳಿಗೆ ಬರುವುದಾದರೆ, ಆತನ ದೃಷ್ಟಿಯು ನಮ್ಮ ಮೇಲಿರುವುದು; ನಮ್ಮನ್ನು ಖಂಡಿಸಲಿಕ್ಕಾಗಿ ಅಲ್ಲ, ಬದಲಿಗೆ ನಮ್ಮ ಪ್ರಯತ್ನಗಳನ್ನು ಅವಲೋಕಿಸಿ, ಸಹಾಯ ಮತ್ತು ಕ್ಷಮಾಪಣೆಗಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಕೇಳಿ ಉತ್ತರಿಸಲಿಕ್ಕಾಗಿಯೇ. ಅಪೊಸ್ತಲ ಪೇತ್ರನು ಬರೆದುದು: “ಕರ್ತನು [“ಯೆಹೋವನು,” NW] ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಕೆಡುಕರಿಗೋ ಕರ್ತನು [“ಯೆಹೋವನು,” NW] ಕೋಪದ ಮುಖವುಳ್ಳವನಾಗಿರುತ್ತಾನೆ.”​—1 ಪೇತ್ರ 3:12.

6. ದಾವೀದನ ಅನುಭವವು ನಮಗೆ ಸಾಂತ್ವನದಾಯಕವೂ ಎಚ್ಚರಿಕೆಯ ವಿಷಯವೂ ಆಗಿರುವುದು ಹೇಗೆ?

6 ದಾವೀದನು ಅಪರಿಪೂರ್ಣನಾಗಿದ್ದು ಘೋರ ಪಾಪಗಳನ್ನು ಮಾಡಿದನು. (2 ಸಮುವೇಲ 12:​7-9) ಆದರೆ ಅವನು ಯೆಹೋವನ ಮುಂದೆ ತನ್ನ ಹೃದಯವನ್ನು ಬಿಚ್ಚಿ ಶ್ರದ್ಧಾಪೂರ್ವಕವಾದ ಪ್ರಾರ್ಥನೆಯಲ್ಲಿ ಆತನನ್ನು ಸಮೀಪಿಸಿದನು. (ಕೀರ್ತನೆ 51:​1-12, ಮೇಲ್ಬರಹ) ಆ ಪಾಪದ ಅಹಿತಕರವಾದ ಪರಿಣಾಮಗಳನ್ನು ದಾವೀದನು ಅನುಭವಿಸಬೇಕಾಯಿತಾದರೂ, ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿ ಅವನನ್ನು ಕ್ಷಮಿಸಿದನು. (2 ಸಮುವೇಲ 12:​10-14) ಇದು ನಮಗೆ ಸಾಂತ್ವನವನ್ನೂ ಅದೇ ಸಮಯದಲ್ಲಿ ಎಚ್ಚರಿಕೆಯನ್ನೂ ಕೊಡಬೇಕು. ನಾವು ನಿಜವಾಗಿಯೂ ಪಶ್ಚಾತ್ತಾಪಪಡುವಲ್ಲಿ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸಲು ಸಿದ್ಧನಿದ್ದಾನೆಂದು ತಿಳಿಯುವುದು ಸಾಂತ್ವನದಾಯಕವಾಗಿದ್ದರೂ, ನಮ್ಮ ಪಾಪಗಳು ಅನೇಕವೇಳೆ ಗಂಭೀರವಾದ ಪರಿಣಾಮಗಳನ್ನು ತಂದೊಡ್ಡುತ್ತವೆಂದು ತಿಳಿಯುವುದು ನಾವು ಯೋಚಿಸುವಂತೆ ಮಾಡುವ ಸಂಗತಿಯಾಗಿದೆ. (ಗಲಾತ್ಯ 6:​7-9) ನಾವು ಯೆಹೋವನ ಸಮೀಪಕ್ಕೆ ಹೋಗಬಯಸುವುದಾದರೆ, ಆತನಿಗೆ ಮೆಚ್ಚುಗೆಯಿಲ್ಲದ ಯಾವುದೇ ವಿಷಯದಿಂದ ನಾವು ಸಾಧ್ಯವಾಗುವಷ್ಟು ದೂರವಿರಬೇಕು.​—ಕೀರ್ತನೆ 97:10.

ಯೆಹೋವನು ತನ್ನ ಜನರನ್ನು ತನ್ನ ಕಡೆಗೆ ಸೆಳೆಯುತ್ತಾನೆ

7. ಯೆಹೋವನು ಯಾವ ರೀತಿಯ ಜನರಿಗಾಗಿ ನೋಡುತ್ತಾನೆ, ಮತ್ತು ಆತನು ಅವರನ್ನು ತನ್ನ ಬಳಿಗೆ ಎಳೆಯುವುದು ಹೇಗೆ?

7 ದಾವೀದನು ತನ್ನ ಕೀರ್ತನೆಗಳಲ್ಲೊಂದರಲ್ಲಿ ಬರೆದುದು: “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ.” (ಕೀರ್ತನೆ 138:6) ಅದೇ ರೀತಿಯಲ್ಲಿ ಇನ್ನೊಂದು ಕೀರ್ತನೆಯು ಹೇಳುವುದು: “ನಮ್ಮ ಯೆಹೋವದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ. ಆತನು ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.” (ಕೀರ್ತನೆ 113:5-7) ಹೌದು, ವಿಶ್ವದ ಸರ್ವಶಕ್ತನಾದ ಸೃಷ್ಟಿಕರ್ತನು ಭೂಮಿಯನ್ನು ನೋಡಲಿಕ್ಕಾಗಿ ಬಾಗುತ್ತಾನೆ ಮತ್ತು ಆತನ ಕಣ್ಣುಗಳು, “ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ” “ದೀನರನ್ನು” ಮತ್ತು “ಬಡವರನ್ನು” ಲಕ್ಷಿಸುತ್ತವೆ. (ಯೆಹೆಜ್ಕೇಲ 9:4) ಆತನು ಅಂಥವರನ್ನು ತನ್ನ ಮಗನ ಮೂಲಕ ತನ್ನ ಬಳಿಗೆ ಸೆಳೆಯುತ್ತಾನೆ. ಭೂಮಿಯಲ್ಲಿದ್ದಾಗ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು; . . . ತಂದೆಯ ಅನುಗ್ರಹವಿಲ್ಲದೆ ಯಾರೂ ನನ್ನ ಬಳಿಗೆ ಬರಲಾರರು.”​—ಯೋಹಾನ 6:44, 65.

8, 9. (ಎ) ನಾವೆಲ್ಲರೂ ಯೇಸುವಿನ ಬಳಿಗೆ ಬರುವುದು ಅಗತ್ಯವೇಕೆ? (ಬಿ) ಪ್ರಾಯಶ್ಚಿತ್ತ ಏರ್ಪಾಡಿನ ವಿಷಯದಲ್ಲಿ ಅಷ್ಟೊಂದು ಗಮನಾರ್ಹವಾದದ್ದೇನಿದೆ?

8 ಎಲ್ಲ ಮನುಷ್ಯರು ಪಾಪಿಗಳಾಗಿ ಹುಟ್ಟಿ, ದೇವರಿಂದ ಅಗಲಿರುವ ಕಾರಣ, ಅವರೆಲ್ಲರೂ ಯೇಸುವಿನ ಬಳಿ ಬಂದು ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡಬೇಕು. (ಯೋಹಾನ 3:36) ಅವರು ದೇವರೊಂದಿಗೆ ಸಮಾಧಾನವಾಗುವುದು ಅಗತ್ಯ. (2 ಕೊರಿಂಥ 5:20) ತಾವು ದೇವರೊಂದಿಗೆ ಸಮಾಧಾನದ ಸಂಬಂಧದಲ್ಲಿ ಬರುವಂತೆ ಆತನು ಯಾವುದಾದರೂ ಏರ್ಪಾಡನ್ನು ಮಾಡಬೇಕೆಂದು ಪಾಪಿಗಳು ಬೇಡಿಕೊಳ್ಳುವ ತನಕ ದೇವರು ಕಾಯಲಿಲ್ಲ. ಅಪೊಸ್ತಲ ಪೌಲನು ಬರೆದುದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. . . . ದೇವರಿಗೆ ವೈರಿಗಳಾಗಿದ್ದ ನಾವು ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿರಲಾಗಿ ಆತನ ಕೂಡ ಸಮಾಧಾನವಾದ ನಮಗೆ ಆ ಮಗನಿಗಿರುವ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.”​—ರೋಮಾಪುರ 5:8, 10.

9 ದೇವರು ಮನುಷ್ಯರನ್ನು ತನ್ನೊಂದಿಗೆ ಸಮಾಧಾನವಾಗುವಂತೆ ಮಾಡುತ್ತಾನೆಂಬ ಭವ್ಯ ಸತ್ಯವನ್ನು ಅಪೊಸ್ತಲ ಯೋಹಾನನು ಹೀಗೆ ಬರೆಯುತ್ತಾ ದೃಢೀಕರಿಸಿದನು: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.” (1 ಯೋಹಾನ 4:9, 10) ಇದಕ್ಕೆ ಆರಂಭದ ಹೆಜ್ಜೆಯನ್ನಿಟ್ಟದ್ದು ದೇವರೇ ಹೊರತು ಮನುಷ್ಯನಲ್ಲ. “ಪಾಪಿಗಳಿಗೆ,” ಅದರಲ್ಲೂ “ವೈರಿಗಳಿಗೆ” ಅಷ್ಟೊಂದು ಪ್ರೀತಿಯನ್ನು ತೋರಿಸಿದ ದೇವರ ಕಡೆಗೆ ನೀವು ಆಕರ್ಷಿತರಾಗುವುದಿಲ್ಲವೊ?​—ಯೋಹಾನ 3:16.

ಯೆಹೋವನನ್ನು ಹುಡುಕುವ ಅಗತ್ಯ

10, 11. (ಎ) ಯೆಹೋವನನ್ನು ಹುಡುಕಲು ನಾವೇನು ಮಾಡಬೇಕು? (ಬಿ) ಸೈತಾನನ ವಿಷಯಗಳ ವ್ಯವಸ್ಥೆಯನ್ನು ನಾವು ಹೇಗೆ ವೀಕ್ಷಿಸಬೇಕು?

10 ಯೆಹೋವನು ನಮ್ಮನ್ನು ತನ್ನ ಬಳಿಗೆ ಬರುವಂತೆ ಒತ್ತಾಯಿಸುವುದಿಲ್ಲವೆಂಬುದು ನಿಶ್ಚಯ. ನಾವು ಆತನಿಗಾಗಿ ಹುಡುಕಬೇಕು. ಆತನಿಗಾಗಿ ‘ತಡವಾಡಿ ಕಂಡುಕೊಳ್ಳಬೇಕು.’ ವಾಸ್ತವದಲ್ಲಿ “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ಅ. ಕೃತ್ಯಗಳು 17:27) ನಮ್ಮ ಅಧೀನತೆಯನ್ನು ಕೇಳಿಕೊಳ್ಳುವ ಹಕ್ಕು ಯೆಹೋವನಿಗಿದೆ ಎಂಬುದನ್ನು ನಾವು ಮಾನ್ಯಮಾಡಬೇಕು. ಶಿಷ್ಯ ಯಾಕೋಬನು ಬರೆದುದು: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ.” (ಯಾಕೋಬ 4:7, 8) ನಾವು ಪಿಶಾಚನ ವಿರುದ್ಧವಾಗಿ ಮತ್ತು ಯೆಹೋವನ ಪರವಾಗಿ ಸ್ಥಿರವಾದ ಸ್ಥಾನವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು.

11 ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯಿಂದ ನಾವು ನಮ್ಮನ್ನು ದೂರವಿರಿಸಿಕೊಳ್ಳಬೇಕೆಂದು ಇದರ ಅರ್ಥ. ಯಾಕೋಬನು ಹೀಗೂ ಬರೆದನು: “ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ಇದಕ್ಕೆ ವಿರುದ್ಧವಾಗಿ ನಾವು ಯೆಹೋವನ ಸ್ನೇಹಿತರಾಗಬಯಸುವುದಾದರೆ, ಸೈತಾನನ ಲೋಕವು ನಮ್ಮನ್ನು ದ್ವೇಷಿಸುವುದನ್ನು ನಾವು ಎದುರುನೋಡಬೇಕು.​—ಯೋಹಾನ 15:19; 1 ಯೋಹಾನ 3:13.

12. (ಎ) ದಾವೀದನು ಯಾವ ಸಾಂತ್ವನದ ಮಾತುಗಳನ್ನು ಬರೆದನು? (ಬಿ) ಪ್ರವಾದಿ ಅಜರ್ಯನ ಮೂಲಕ ಯೆಹೋವನು ಯಾವ ಎಚ್ಚರಿಕೆಯನ್ನು ಕೊಟ್ಟನು?

12 ಒಂದು ನಿರ್ದಿಷ್ಟ ವಿಧದಲ್ಲಿ ಸೈತಾನನ ಲೋಕವು ನಮ್ಮನ್ನು ವಿರೋಧಿಸುವಾಗ, ನಾವು ಯೆಹೋವನ ಸಹಾಯವನ್ನು ಕೇಳುತ್ತಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಆತನನ್ನು ಸಮೀಪಿಸುವುದು ಅತ್ಯಗತ್ಯ. ಯೆಹೋವನ ರಕ್ಷಣಾಹಸ್ತವನ್ನು ಎಷ್ಟೋ ಬಾರಿ ಅನುಭವಿಸಿದ್ದ ದಾವೀದನು, ನಮ್ಮ ಸಾಂತ್ವನಕ್ಕಾಗಿ ಬರೆದುದು: “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ. ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ; ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.” (ಕೀರ್ತನೆ 145:18-20) ನಾವು ಒಬ್ಬೊಬ್ಬರಾಗಿ ಪರೀಕ್ಷಿಸಲ್ಪಡುವಾಗ ಯೆಹೋವನು ನಮ್ಮನ್ನು ರಕ್ಷಿಸಬಲ್ಲನೆಂದೂ, “ಮಹಾ ಸಂಕಟ”ದ ಸಮಯದಲ್ಲಿ ಆತನು ತನ್ನ ಜನರನ್ನು ಸಾಮೂಹಿಕವಾಗಿ ರಕ್ಷಿಸುವನೆಂದೂ ಈ ಕೀರ್ತನೆಯು ತೋರಿಸುತ್ತದೆ. (ಪ್ರಕಟನೆ 7:​14, NW) ನಾವು ಯೆಹೋವನಿಗೆ ಸಮೀಪವಾಗಿ ಇರುವಲ್ಲಿ ಆತನೂ ನಮಗೆ ಸಮೀಪವಾಗಿರುವನು. “ದೇವರ ಆತ್ಮ”ದಿಂದ ನಡಿಸಲ್ಪಟ್ಟವನಾಗಿ ಪ್ರವಾದಿ ಅಜರ್ಯನು ಹೇಳಿದಂಥದ್ದನ್ನು, ನಾವು ಸಾಮಾನ್ಯವಾಗಿ ಅನ್ವಯಿಸುವ ಸತ್ಯವಾಗಿ ತೆಗೆದುಕೊಳ್ಳಬಹುದು: “ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.”​—2 ಪೂರ್ವಕಾಲವೃತ್ತಾಂತ 15:1, 2.

ಯೆಹೋವನು ನಮಗೆ ಒಬ್ಬ ನೈಜ ವ್ಯಕ್ತಿಯಾಗಿರಬೇಕು

13. ಯೆಹೋವನು ನಮಗೆ ನೈಜ ವ್ಯಕ್ತಿಯಾಗಿದ್ದಾನೆಂದು ನಾವು ಹೇಗೆ ತೋರಿಸಬಲ್ಲೆವು?

13 ಅಪೊಸ್ತಲ ಪೌಲನು ಮೋಶೆಯ ಕುರಿತು, ಅವನು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು” ಎಂದು ಬರೆದನು. (ಇಬ್ರಿಯ 11:27) ಮೋಶೆಯು ಯೆಹೋವನನ್ನು ಕಣ್ಣಾರೆ ನೋಡಲಿಲ್ಲವೆಂಬುದು ನಿಶ್ಚಯ. (ವಿಮೋಚನಕಾಂಡ 33:20) ಆದರೆ ಯೆಹೋವನು ಅವನಿಗೆ ಎಷ್ಟು ನೈಜ ವ್ಯಕ್ತಿಯಾಗಿದ್ದನೆಂದರೆ, ಮೋಶೆ ಆತನನ್ನು ನೋಡಿದ್ದನೊ ಎಂಬಂತೆ ಅವನಿಗನಿಸಿತ್ತು. ಅದೇ ರೀತಿ, ಯೋಬನ ಪರೀಕ್ಷೆಗಳ ಬಳಿಕ ಅವನ ನಂಬಿಕೆಯ ಕಣ್ಣುಗಳು, ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಪರೀಕ್ಷೆಗಳಿಗೆ ಒಳಗಾಗುವಂತೆ ಬಿಟ್ಟರೂ, ಅವರನ್ನು ಆತನು ಎಂದಿಗೂ ಕೈಬಿಡನು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ನೋಡಿದವು. (ಯೋಬ 42:5) ಹನೋಕ ಮತ್ತು ನೋಹರು ‘ದೇವರೊಂದಿಗೆ ನಡೆದರು’ ಎಂದು ಹೇಳಲಾಯಿತು. ಅವರು ಹಾಗೆ ಮಾಡಿದ್ದು, ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವ ಮೂಲಕ ಮತ್ತು ಆತನಿಗೆ ವಿಧೇಯರಾಗುವ ಮೂಲಕವೇ. (ಆದಿಕಾಂಡ 5:22-24; 6:9, 22; ಇಬ್ರಿಯ 11:5, 7) ಯೆಹೋವನು ಹನೋಕ, ನೋಹ, ಯೋಬ ಮತ್ತು ಮೋಶೆ​—ಇವರಿಗೆ ನೈಜ ವ್ಯಕ್ತಿಯಾಗಿದ್ದಂತೆಯೇ ನಮಗೂ ಆಗಿರುವಲ್ಲಿ, ನಾವು ನಮ್ಮೆಲ್ಲಾ ಮಾರ್ಗಗಳಲ್ಲಿ “ಆತನ ಚಿತ್ತಕ್ಕೆ ವಿಧೇಯ”ರಾಗುವೆವು ಮತ್ತು ಆಗ ಆತನು ನಮ್ಮ “ಮಾರ್ಗಗಳನ್ನು ಸರಾಗಮಾಡುವನು.”​—ಜ್ಞಾನೋಕ್ತಿ 3:​5, 6.

14. ಯೆಹೋವನಿಗೆ ‘ಅಂಟಿಕೊಳ್ಳುವುದು’ ಎಂಬುದರ ಅರ್ಥವೇನು?

14 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವ ತುಸು ಮೊದಲು, ಮೋಶೆ ಅವರಿಗೆ ಬುದ್ಧಿಹೇಳಿದ್ದು: “ನಿಮ್ಮ ದೇವರಾದ ಯೆಹೋವನು . . . ಹೇಳುವ ಮಾರ್ಗದಲ್ಲೇ ನೀವು ನಡೆದು ಆತನಲ್ಲಿಯೇ ಭಯಭಕ್ತಿಯುಳ್ಳವರಾಗಿ ಆತನ ಆಜ್ಞೆಗಳನ್ನೇ ಅನುಸರಿಸಿ ಆತನಿಗೇ ವಿಧೇಯರಾಗಿ ಆತನನ್ನೇ ಸೇವಿಸುತ್ತಾ ಹೊಂದಿಕೊಂಡಿರಬೇಕು [“ಅಂಟಿಕೊಂಡಿರಬೇಕು,” NW].” (ಧರ್ಮೋಪದೇಶಕಾಂಡ 13:​3, 4) ಅವರು ಯೆಹೋವನನ್ನು ಅನುಸರಿಸಿ, ಆತನಿಗೆ ಭಯಪಟ್ಟು, ಆತನಿಗೆ ವಿಧೇಯರಾಗಿ, ಆತನಿಗೆ ಅಂಟಿಕೊಂಡಿರಬೇಕಾಗಿತ್ತು. ಇಲ್ಲಿ ಭಾಷಾಂತರಿಸಲ್ಪಟ್ಟಿರುವ “ಅಂಟಿಕೊಂಡು” ಎಂಬ ಪದದ ಕುರಿತು ಒಬ್ಬ ಬೈಬಲ್‌ ವಿದ್ವಾಂಸನು ಹೇಳುವುದೇನೆಂದರೆ, “[ಹೀಬ್ರು] ಭಾಷೆಯಲ್ಲಿ ಇದು ಅತಿ ನಿಕಟವಾದ ಮತ್ತು ಆಪ್ತವಾದ ಸಂಬಂಧವನ್ನು ಸೂಚಿಸುತ್ತದೆ.” ಕೀರ್ತನೆಗಾರನು ಹೇಳಿದ್ದು: “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.” (ಕೀರ್ತನೆ 25:14) ಆತನು ನಮಗೆ ಒಬ್ಬ ನೈಜ ವ್ಯಕ್ತಿಯಾಗಿರುವಲ್ಲಿ ಮತ್ತು ಆತನನ್ನು ಯಾವುದೇ ರೀತಿಯಲ್ಲಿ ಅಸಮಾಧಾನಗೊಳಿಸಲು ಭಯಪಡುವಷ್ಟು ನಾವು ಆತನನ್ನು ಪ್ರೀತಿಸುವಲ್ಲಿ, ಯೆಹೋವನೊಂದಿಗಿನ ಈ ಅಮೂಲ್ಯವಾದ ಆಪ್ತ ಸಂಬಂಧವು ನಮ್ಮದಾಗಿರುವುದು.​—ಕೀರ್ತನೆ 19:​9-14.

ಯೆಹೋವನು ನಿಮ್ಮ ಕುರಿತು ಚಿಂತಿಸುತ್ತಾನೆ ಎಂಬುದರ ಬಗ್ಗೆ ನಿಮಗೆ ಅರಿವಿದೆಯೆ?

15, 16. (ಎ) ಯೆಹೋವನು ನಮ್ಮ ವಿಷಯದಲ್ಲಿ ಚಿಂತಿಸುತ್ತಾನೆಂದು ಕೀರ್ತನೆ 34 ಹೇಗೆ ತೋರಿಸುತ್ತದೆ? (ಬಿ) ಯೆಹೋವನ ಉಪಕಾರದ ಕ್ರಿಯೆಗಳನ್ನು ನೆನಪಿಗೆ ತರುವುದು ನಮಗೆ ಕಷ್ಟವಾಗುವಲ್ಲಿ ನಾವೇನು ಮಾಡಬೇಕು?

15 ಸೈತಾನನ ಕುಟಿಲ ಕೃತ್ಯಗಳಲ್ಲಿ ಒಂದು, ನಮ್ಮ ದೇವರಾದ ಯೆಹೋವನು ನಿರಂತರವಾಗಿ ತನ್ನ ನಂಬಿಗಸ್ತ ಸೇವಕರ ಕುರಿತಾಗಿ ಚಿಂತಿಸುತ್ತಾನೆಂಬ ನಿಜತ್ವವನ್ನು ನಾವು ಮರೆತುಬಿಡುವಂತೆ ಮಾಡುವುದೇ. ಇಸ್ರಾಯೇಲಿನ ಅರಸನಾದ ದಾವೀದನಿಗೆ, ಅವನು ಅತಿ ಅಪಾಯಕರವಾದ ಸಂದರ್ಭವನ್ನು ಎದುರಿಸಿದಾಗಲೂ ಯೆಹೋವನ ರಕ್ಷಣಾಹಸ್ತ ತನ್ನೊಂದಿಗಿದೆಯೆಂಬದರ ಬಗ್ಗೆ ಚೆನ್ನಾಗಿ ಅರಿವಿತ್ತು. ಗತ್‌ ಊರಿನ ಅರಸನಾದ ಆಕೀಷನ ಮುಂದೆ ಹುಚ್ಚನಾಗಿ ನಟಿಸುವಂತೆ ನಿರ್ಬಂಧಿಸಲ್ಪಟ್ಟಾಗ, ಅವನು ಒಂದು ಗೀತವನ್ನು ರಚಿಸಿದನು. ಅದು ಈ ನಂಬಿಕೆಯ ಅಭಿವ್ಯಕ್ತಿಗಳಿಂದ ಕೂಡಿದ್ದ ಒಂದು ಸುಂದರವಾದ ಕೀರ್ತನೆಯಾಗಿತ್ತು: “ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ. ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ. ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು. ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ. ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.”​—ಕೀರ್ತನೆ 34:3, 4, 7, 8, 18, 19; 1 ಸಮುವೇಲ 21:10-15.

16 ಯೆಹೋವನಿಗಿರುವ ರಕ್ಷಣಾಸಾಮರ್ಥ್ಯವು ನಿಮಗೆ ಮನದಟ್ಟಾಗಿದೆಯೆ? ಆತನ ದೇವದೂತರಿಂದ ಬರುವ ಸಂರಕ್ಷಣೆಯ ಪ್ರಜ್ಞೆ ನಿಮಗಿದೆಯೆ? ಯೆಹೋವನು ಸರ್ವೋತ್ತಮನೆಂಬುದನ್ನು ನೀವೇ ಸ್ವತಃ ಸವಿದು ನೋಡಿದ್ದೀರೊ? ಯೆಹೋವನು ನಿಮಗೆ ಮಾಡಿದ ಉಪಕಾರವನ್ನು ನೀವು ವಿಶೇಷವಾಗಿ ಗ್ರಹಿಸಿಕೊಂಡ ಕೊನೆಯ ಸಂದರ್ಭವು ಯಾವುದು? ಅದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿರಿ. ಶುಶ್ರೂಷೆಯಲ್ಲಿ ಇದೇ ಕೊನೆಯ ಮನೆ, ನನಗೆ ಇನ್ನು ಮುಂದಿನ ಮನೆಗಳನ್ನು ಭೇಟಿಮಾಡಲು ಸಾಧ್ಯವಿಲ್ಲವೆಂದು ಅನಿಸುತ್ತಿದ್ದಾಗ ನಿಮಗೆ ಅದರ ಅರಿವಾಯಿತೊ? ಬಹುಶಃ ಆ ಮನೆಯಲ್ಲೇ ಮನೆಯವನೊಂದಿಗೆ ಉತ್ತೇಜಕ ರೀತಿಯ ಮಾತುಕತೆ ನಡೆಯಿತು. ನಿಮಗೆ ಬೇಕಾಗಿದ್ದಾಗಲೇ ಹೆಚ್ಚಿನ ಬಲವನ್ನು ಕೊಟ್ಟು ನಿಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ನೀವು ಯೆಹೋವನಿಗೆ ಉಪಕಾರ ಹೇಳಲು ನೆನಪಿಸಿಕೊಂಡಿರೊ? (2 ಕೊರಿಂಥ 4:7) ಒಂದುವೇಳೆ, ಯೆಹೋವನು ನಿಮ್ಮ ಪರವಾಗಿ ಮಾಡಿರುವಂತಹ ಒಂದು ವಿಶೇಷ ಉಪಕಾರವನ್ನು ನೆನಪಿಗೆ ತರುವುದು ನಿಮಗೆ ಕಷ್ಟವಾಗಬಹುದು. ಅದಕ್ಕಾಗಿ ನೀವು ಯೋಚಿಸುತ್ತಾ, ಒಂದು ವಾರ, ಒಂದು ತಿಂಗಳು, ಒಂದು ವರುಷ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಹಿಂದೆ ಹೋಗಬೇಕಾಗಿ ಬಂದೀತು. ಸಂಗತಿಯು ಹೀಗಿರುವುದಾದರೆ, ಯೆಹೋವನ ಹೆಚ್ಚು ಸಮೀಪಕ್ಕೆ ಬರಲು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಮಾಡಿ ಆತನು ನಿಮ್ಮನ್ನು ಹೇಗೆ ನಡೆಸಿ ಮಾರ್ಗದರ್ಶಿಸುತ್ತಾನೆಂದು ನೋಡಲು ಏಕೆ ಪ್ರಯತ್ನಿಸಬಾರದು? ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಸಲಹೆ ನೀಡಿದ್ದು: “ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; . . . ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:6, 7) ಆತನು ನಿಮ್ಮ ವಿಷಯದಲ್ಲಿ ಎಷ್ಟು ಚಿಂತಿಸುತ್ತಾನೆಂದು ತಿಳಿಯುವಾಗ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾದೀತು!​—ಕೀರ್ತನೆ 73:28.

ಯೆಹೋವನನ್ನು ಹುಡುಕುತ್ತಾ ಹೋಗಿರಿ

17. ನಾವು ಯೆಹೋವನನ್ನು ಹುಡುಕುತ್ತಾ ಇರಬೇಕಾದರೆ ಏನು ಅಗತ್ಯ?

17 ಯೆಹೋವನೊಂದಿಗೆ ನಮಗಿರುವ ಸಂಬಂಧವನ್ನು ಕಾಪಾಡಿಕೊಳ್ಳುವ ವಿಷಯವು ಮುಂದುವರಿಯುತ್ತಾ ಹೋಗುವ ಸಂಗತಿಯಾಗಿರಬೇಕು. ಯೇಸು ತನ್ನ ತಂದೆಗೆ ಪ್ರಾರ್ಥನೆಯಲ್ಲಿ ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ [“ಜ್ಞಾನವನ್ನು ಪಡೆದುಕೊಳ್ಳುವುದೇ,” NW] ನಿತ್ಯಜೀವವು.” (ಯೋಹಾನ 17:3) ಯೆಹೋವನ ಮತ್ತು ಆತನ ಮಗನ ಜ್ಞಾನವನ್ನು ಪಡೆದುಕೊಳ್ಳುವುದು ನಮ್ಮಿಂದ ಸತತ ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. “ದೇವರ ಅಗಾಧವಾದ ವಿಷಯಗಳನ್ನು” ತಿಳಿದುಕೊಳ್ಳಲು ನಮಗೆ ಪ್ರಾರ್ಥನೆ ಮತ್ತು ಪವಿತ್ರಾತ್ಮವು ಅಗತ್ಯ. (1 ಕೊರಿಂಥ 2:10; ಲೂಕ 11:13) ನಮ್ಮ ಮನಸ್ಸುಗಳನ್ನು “ಹೊತ್ತುಹೊತ್ತಿಗೆ” ಆತ್ಮಿಕ ಆಹಾರದಿಂದ ತುಂಬಿಸಲು ನಮಗೆ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನ ಮಾರ್ಗದರ್ಶನವೂ ಅಗತ್ಯ. (ಮತ್ತಾಯ 24:45) ಆ ಮಾಧ್ಯಮದ ಮೂಲಕ, ನಾವು ಆತನ ವಾಕ್ಯವನ್ನು ದಿನಾಲೂ ಓದುವಂತೆ, ಕ್ರೈಸ್ತ ಕೂಟಗಳಲ್ಲಿ ಕ್ರಮವಾಗಿ ಉಪಸ್ಥಿತರಿರುವಂತೆ ಮತ್ತು “ರಾಜ್ಯದ . . . ಸುವಾರ್ತೆ”ಯನ್ನು ಸಾರುವುದರಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವಂತೆ ಯೆಹೋವನು ನಮಗೆ ಸಲಹೆ ನೀಡಿದ್ದಾನೆ. (ಮತ್ತಾಯ 24:14) ಹೀಗೆ ಮಾಡುವ ಮೂಲಕ ನಮ್ಮ ಚಿಂತೆ ವಹಿಸುವ ದೇವರಾದ ಯೆಹೋವನನ್ನು ನಾವು ಹುಡುಕುತ್ತಿರುವೆವು.

18, 19. (ಎ) ನಾವು ಏನು ಮಾಡಲು ದೃಢನಿಶ್ಚಯ ಮಾಡಬೇಕು? (ಬಿ) ನಾವು ಪಿಶಾಚನ ವಿರುದ್ಧ ಸ್ಥಿರವಾದ ನಿಲುವನ್ನು ತೆಗೆದುಕೊಂಡು ಯೆಹೋವನನ್ನು ಹುಡುಕುತ್ತಾ ಇರುವುದಾದರೆ, ನಾವು ಹೇಗೆ ಆಶೀರ್ವದಿಸಲ್ಪಡುವೆವು?

18 ಸೈತಾನನು ಯೆಹೋವನ ಜನರ ಮೇಲೆ ಎಲ್ಲ ದಿಕ್ಕುಗಳಿಂದಲೂ ಹಿಂಸೆ, ವಿರೋಧ ಮತ್ತು ಒತ್ತಡವನ್ನು ತರಲು ತನ್ನಿಂದಾದುದೆಲ್ಲವನ್ನೂ ಮಾಡುತ್ತಾನೆ. ನಮ್ಮ ಶಾಂತಿಯನ್ನು ಭಂಗಗೊಳಿಸಲು ಮತ್ತು ನಮ್ಮ ದೇವರೊಂದಿಗೆ ನಮಗಿರುವ ಉತ್ತಮವಾದ ನಿಲುವನ್ನು ನಾಶಮಾಡಲು ಅವನು ಪ್ರಯತ್ನಿಸುತ್ತಾನೆ. ಪ್ರಾಮಾಣಿಕ ಹೃದಯಿಗಳನ್ನು ಹುಡುಕಿ, ವಿಶ್ವ ಪರಮಾಧಿಕಾರದ ವಿವಾದದಲ್ಲಿ ಅವರು ಯೆಹೋವನ ಪಕ್ಷವಹಿಸುವಂತೆ ಮಾಡುವ ನಮ್ಮ ಕೆಲಸವನ್ನು ನಾವು ಮುಂದುವರಿಸುವುದು ಅವನಿಗೆ ಇಷ್ಟವಿಲ್ಲ. ಆದರೆ ನಾವು ಯೆಹೋವನಿಗೆ ನಿಷ್ಠರಾಗಿ ನಿಲ್ಲಲು, ಕೆಡುಕನಿಂದ ನಮ್ಮನ್ನು ತಪ್ಪಿಸಲಿಕ್ಕಾಗಿ ಆತನ ಮೇಲೆ ಭರವಸೆಯಿಡಲು ನಾವು ದೃಢನಿಶ್ಚಯವನ್ನು ಮಾಡಬೇಕು. ದೇವರ ವಾಕ್ಯವು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಟ್ಟು, ಆತನ ದೃಶ್ಯ ಸಂಸ್ಥೆಯೊಂದಿಗೆ ಕ್ರಿಯಾಶೀಲರಾಗಿ ಇರುವ ಮೂಲಕ, ಆತನು ನಮ್ಮನ್ನು ಬೆಂಬಲಿಸಲು ಸದಾ ನಮ್ಮೊಂದಿಗಿರುವನೆಂಬ ಖಾತ್ರಿ ನಮಗಿರಬಲ್ಲದು.​—ಯೆಶಾಯ 41:​8-13.

19 ಆದುದರಿಂದ ನಾವೆಲ್ಲರೂ ಪಿಶಾಚನ ಮತ್ತು ಅವನ ಕುಟಿಲ ಕೃತ್ಯಗಳ ವಿರುದ್ಧ ಸ್ಥಿರವಾಗಿ ನಿಲ್ಲೋಣ, ಮತ್ತು ಯಾವಾಗಲೂ ನಮ್ಮ ಪ್ರಿಯ ದೇವರಾದ ಯೆಹೋವನನ್ನು ಹುಡುಕುತ್ತಿರೋಣ. ಆತನು ನಮ್ಮನ್ನು ‘ನೆಲೆಗೊಳಿಸಿ ಬಲಪಡಿಸುವುದರಲ್ಲಿ’ ಎಂದಿಗೂ ನಿಷ್ಫಲನಾಗದಿರುವನು. (1 ಪೇತ್ರ 5:​8-11) ಹೀಗೆ, ನಾವು ‘ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳುವೆವು.’​—ಯೂದ 21.

ನೀವು ಹೇಗೆ ಉತ್ತರಕೊಡುವಿರಿ?

• “ಪಿಶಾಚನು” ಎಂಬ ಪದದ ಅರ್ಥವೇನು, ಮತ್ತು ಪಿಶಾಚನು ಆ ಹೆಸರಿಗೆ ತಕ್ಕಂತೆ ಕೆಲಸ ಮಾಡುವುದು ಹೇಗೆ?

• ಭೂನಿವಾಸಿಗಳನ್ನು ಅವಲೋಕಿಸುವ ವಿಷಯದಲ್ಲಿ ಯೆಹೋವನು ಪಿಶಾಚನಿಂದ ಭಿನ್ನವಾಗಿರುವುದು ಹೇಗೆ?

• ಯೆಹೋವನನ್ನು ಸಮೀಪಿಸುವುದಕ್ಕಾಗಿ ಒಬ್ಬನು ಪ್ರಾಯಶ್ಚಿತ್ತವನ್ನು ಏಕೆ ಅಂಗೀಕರಿಸಬೇಕು?

• ಯೆಹೋವನಿಗೆ ‘ಅಂಟಿಕೊಳ್ಳುವುದರ’ ಅರ್ಥವೇನು, ಮತ್ತು ನಾವು ಆತನನ್ನು ಹೇಗೆ ಹುಡುಕುತ್ತಾ ಹೋಗಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಪರೀಕ್ಷೆಗಳ ಎದುರಿನಲ್ಲಿಯೂ, ಯೆಹೋವನು ತನ್ನ ಕುರಿತಾಗಿ ಚಿಂತಿಸುತ್ತಿದ್ದನೆಂಬುದನ್ನು ಯೋಬನು ಗ್ರಹಿಸಿದನು

[ಪುಟ 16, 17ರಲ್ಲಿರುವ ಚಿತ್ರಗಳು]

ದೈನಂದಿನ ಬೈಬಲ್‌ ವಾಚನ, ಕ್ರೈಸ್ತ ಕೂಟಗಳಲ್ಲಿ ಕ್ರಮದ ಉಪಸ್ಥಿತಿ ಮತ್ತು ಸಾರುವ ಕಾರ್ಯದಲ್ಲಿ ಹುರುಪಿನ ಭಾಗವಹಿಸುವಿಕೆಯು, ಯೆಹೋವನು ನಮ್ಮ ವಿಷಯದಲ್ಲಿ ಚಿಂತಿಸುತ್ತಾನೆಂಬುದನ್ನು ನಮಗೆ ಜ್ಞಾಪಕ ಹುಟ್ಟಿಸುತ್ತದೆ