ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಕೃತ್ಯಗಳು—ಅಸಾಧಾರಣ ಮತ್ತು ಆಶ್ಚರ್ಯಕರ

ಯೆಹೋವನ ಕೃತ್ಯಗಳು—ಅಸಾಧಾರಣ ಮತ್ತು ಆಶ್ಚರ್ಯಕರ

ಅಧ್ಯಾಯ 31

ಯೆಹೋವನ ಕೃತ್ಯಗಳು—ಅಸಾಧಾರಣ ಮತ್ತು ಆಶ್ಚರ್ಯಕರ

ದರ್ಶನ 10—ಪ್ರಕಟನೆ 15:1—16:21

ವಿಷಯ: ಯೆಹೋವನು ತನ್ನ ಪವಿತ್ರಸ್ಥಾನದಲ್ಲಿ; ಆತನ ರೋಷದ ಏಳು ಪಾತ್ರೆಗಳನ್ನು ಭೂಮಿಯಲ್ಲಿ ಹೊಯ್ಯಲಾಗಿದೆ

ನೆರವೇರಿಕೆಯ ಸಮಯ: ಇಸವಿ 1919 ರಿಂದ ಅರ್ಮಗೆದೋನ್‌ ವರೆಗೆ

1, 2. (ಎ) ಯಾವ ಮೂರನೆಯ ಲಕ್ಷಣವನ್ನು ಯೋಹಾನನು ವರದಿಸುತ್ತಾನೆ? (ಬಿ) ಯೆಹೋವನ ಸೇವಕರಿಗೆ ದೇವದೂತರ ಯಾವ ಪಾತ್ರವು ಬಹುಕಾಲದಿಂದ ಪರಿಚಿತವಾಗಿದೆ?

ಒಬ್ಬ ಸ್ತ್ರೀಯು ಒಂದು ಗಂಡುಮಗುವಿಗೆ ಜನ್ಮವೀಯುತ್ತಿದ್ದಾಳೆ! ಆ ಮಗುವನ್ನು ನುಂಗಲು ಮಹಾ ಘಟಸರ್ಪವೊಂದು ಪ್ರಯತ್ನಿಸುತ್ತಿದೆ! ಪ್ರಕಟನೆ 12 ನೆಯ ಅಧ್ಯಾಯದಲ್ಲಿ ಎಷ್ಟೋ ವೈವಿಧ್ಯಮಯವಾಗಿ ಚಿತ್ರಿಸಲ್ಪಟ್ಟ ಆ ಎರಡು ಪರಲೋಕದ ಲಕ್ಷಣಗಳು ದೇವರ ಸ್ತ್ರೀಯ ಸಂತಾನವನ್ನು ಮತ್ತು ಸೈತಾನ ಮತ್ತು ಅವನ ಪೈಶಾಚಿಕ ಸಂತಾನವನ್ನು ಒಳಗೂಡಿರುವ ಬಹಳ ದೀರ್ಘಕಾಲದ ವಿವಾದವು ಅದರ ಪರಾಕಾಷ್ಠೆಗೆ ತಲುಪುತ್ತದೆ ಎಂದು ನಮ್ಮ ಮನಸ್ಸಿಗೆ ತಂದಿತು. ಈ ಸಂಕೇತಗಳನ್ನು ಎತ್ತಿತೋರಿಸುತ್ತಾ, ಯೋಹಾನನು ಹೇಳುವುದು: “ಪರಲೋಕದಲ್ಲಿ ಒಂದು ಮಹಾ ಲಕ್ಷಣವು ಕಾಣಿಸಿತು . . . ಪರಲೋಕದಲ್ಲಿ ಮತ್ತೊಂದು ಲಕ್ಷಣವು ಕಾಣಿಸಿತು.” (ಪ್ರಕಟನೆ 12:1, 3, 7-12) ಈಗ ಯೋಹಾನನು ಮೂರನೆಯ ಒಂದು ಲಕ್ಷಣವನ್ನು ವರದಿಸುತ್ತಾನೆ: “ಮತ್ತು ಪರಲೋಕದಲ್ಲಿ ಮಹತ್ತಾದ ಮತ್ತು ಆಶ್ಚರ್ಯಕರವಾದ, ಏಳು ಉಪದ್ರವಗಳೊಂದಿಗೆ ಏಳು ಮಂದಿ ದೇವದೂತರ ಮತ್ತೊಂದು ಮಹಾ ಲಕ್ಷಣವನ್ನು ನಾನು ಕಂಡೆನು. ಇವು ಕೊನೆಯವುಗಳು, ಯಾಕಂದರೆ ಇವುಗಳ ಮೂಲಕ ದೇವರ ಕೋಪವು ಮುಕ್ತಾಯಕ್ಕೆ ತರಲ್ಪಡುತ್ತದೆ.” (ಪ್ರಕಟನೆ 15:1, NW) ಈ ಮೂರನೆಯ ಲಕ್ಷಣದಲ್ಲಿ ಸಹ ಯೆಹೋವನ ದಾಸರಿಗೆ ಅತ್ಯಾವಶ್ಯಕವಾದ ಅರ್ಥವಿದೆ.

2 ದೇವರ ಚಿತ್ತವನ್ನು ನೆರವೇರಿಸುವುದರಲ್ಲಿ ದೇವದೂತರಿಗೆ ಪುನಃ ಇರುವ ಪ್ರಾಮುಖ್ಯವಾದ ಪಾತ್ರಗಳನ್ನು ಗಮನಿಸಿರಿ. ಯೆಹೋವನ ಸೇವಕರಿಗೆ ಈ ವಾಸ್ತವಾಂಶವು ದೀರ್ಘಕಾಲದಿಂದ ತಿಳಿದಿತ್ತು. ಹೌದು, ಪುರಾತನ ಕೀರ್ತನೆಗಾರನು ಪ್ರೇರಣೆಯ ಕೆಳಗೆ ಅಂಥ ದೇವದೂತರ ಕುರಿತು ಮಾತಾಡುತ್ತಾ, ಅವರನ್ನು ಉತ್ತೇಜಿಸಿದ್ದು: “ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ”! (ಕೀರ್ತನೆ 103:20) ಈಗ ಈ ಹೊಸ ದೃಶ್ಯದಲ್ಲಿ ಕೊನೆಯ ಏಳು ಉಪದ್ರವಗಳನ್ನು ಹೊಯ್ಯಲು ದೇವದೂತರು ನೇಮಕಗೊಂಡಿದ್ದಾರೆ.

3. ಏಳು ಉಪದ್ರವಗಳು ಯಾವುವು, ಮತ್ತು ಅವುಗಳನ್ನು ಹೊಯ್ಯುವುದು ಏನನ್ನು ಸೂಚಿಸುತ್ತದೆ?

3 ಈ ಉಪದ್ರವಗಳು ಏನಾಗಿವೆ? ಏಳು ತುತೂರಿಗಳ ಊದುವಿಕೆಗಳಂತೆ, ಅವುಗಳು ಈ ಲೋಕದ ವಿವಿಧ ಲಕ್ಷಣಗಳ ಕುರಿತು ಯೆಹೋವನ ದೃಷ್ಟಿಕೋನವನ್ನು ಪ್ರಚುರಪಡಿಸುವ ಘಾಸಿಗೊಳಿಸುವ ನ್ಯಾಯದಂಡನೆಯನ್ನು ವಿಧ್ಯುಕ್ತವಾಗಿ ಹೇಳುವ ಮತ್ತು ಅವನ ನ್ಯಾಯವಿಧಾಯಕ ತೀರ್ಮಾನಗಳ ಕೊನೆಯ ಫಲಿತಾಂಶದ ಎಚ್ಚರಿಕೆಯನ್ನು ಕೊಡುವುವುಗಳಾಗಿವೆ. (ಪ್ರಕಟನೆ 8:1–9:21) ಅವುಗಳನ್ನು ಹೊಯ್ಯುವುದು, ಆತನ ಉರಿಯುವ ರೋಷದ ದಿನದಲ್ಲಿ ಯೆಹೋವನ ಕೋಪಕ್ಕೆ ಈಡಾದ ವಸ್ತುಗಳನ್ನು ನಾಶಗೊಳಿಸುವಾಗ, ಆ ನ್ಯಾಯದಂಡನೆಗಳ ಜಾರಿಗೊಳಿಸುವಿಕೆಯನ್ನು ತೋರಿಸುತ್ತದೆ. (ಯೆಶಾಯ 13:9-13; ಪ್ರಕಟನೆ 6:16, 17) ಹೀಗೆ, ಅವುಗಳ ಮೂಲಕ “ದೇವರ ರೋಷವು ಮುಕ್ತಾಯಕ್ಕೆ ತರಲ್ಪಡುವುದು.” ಆದರೆ ಈ ಉಪದ್ರವಗಳನ್ನು ಹೊಯ್ಯುವುದರ ವರ್ಣನೆಯನ್ನು ಮಾಡುವ ಮೊದಲು, ಇವುಗಳಿಂದ ಪ್ರತಿಕೂಲವಾಗಿ ಬಾಧಿಸಲ್ಪಡದ ಕೆಲವು ಮಾನವರ ಕುರಿತು ಯೋಹಾನನು ನಮಗೆ ತಿಳಿಸುತ್ತಾನೆ. ಕಾಡು ಮೃಗದ ಗುರುತನ್ನು ಪಡೆಯಲು ನಿರಾಕರಿಸಿದ ಈ ನಿಷ್ಠಾವಂತರು, ಮುಯ್ಯಿತೀರಿಸುವ ಆತನ ದಿನವನ್ನು ಪ್ರಚುರಿಸುತ್ತಿರುವಾಗ, ಯೆಹೋವನಿಗೆ ಸ್ತೋತ್ರವನ್ನು ಹಾಡುತ್ತಾರೆ.—ಪ್ರಕಟನೆ 13:15-17.

ಮೋಶೆಯ ಮತ್ತು ಕುರಿಮರಿಯ ಹಾಡು

4. ಯೋಹಾನನ ನೋಟಕ್ಕೆ ಈಗ ಏನು ಬರುತ್ತದೆ?

4 ಈಗ ಯೋಹಾನನ ಕಣ್ನೋಟಕ್ಕೆ ಒಂದು ಗಮನಾರ್ಹವಾದ ಸುತ್ತುನೋಟ ಬರುತ್ತದೆ: “ಮತ್ತು ಬೆಂಕಿ ಬೆರೆದ ಗಾಜಿನ ಸಮುದ್ರವೂ ಎಂಬಂತೆ ಏನೋ ಒಂದನ್ನು, ಮತ್ತು ದೇವರ ವೀಣೆಗಳು ಇದ್ದು ಗಾಜಿನ ಸಮುದ್ರದ ಪಕ್ಕದಲ್ಲಿ ನಿಂತಿರುವ ಮತ್ತು ಕಾಡುಮೃಗದಿಂದ ಮತ್ತು ಅದರ ವಿಗ್ರಹದಿಂದ ಮತ್ತು ಅದರ ಹೆಸರಿನ ಅಂಕೆಯಿಂದ ಜಯಹೊಂದಿ ಹೊರಬಂದವರನ್ನು ನಾನು ಕಂಡೆನು.”ಪ್ರಕಟನೆ 15:2, NW.

5. “ಬೆಂಕಿ ಬೆರೆದ ಗಾಜಿನ ಸಮುದ್ರ” ದಿಂದ ಏನು ಚಿತ್ರಿಸಲ್ಪಟ್ಟಿದೆ?

5 ದೇವರ ಸಿಂಹಾಸನದ ಮುಂದೆ ಇದ್ದ “ಗಾಜಿನ ಸಮುದ್ರ”ವು ಯೋಹಾನನು ಈ ಮುಂಚೆ ನೋಡಿದ್ದೇ ಆಗಿದೆ. (ಪ್ರಕಟನೆ 4:6) ಅದು ಸೊಲೊಮೋನನ ದೇವಾಲಯದ “ಸಮುದ್ರವೆನಿಸಿಕೊಳ್ಳುವ ಒಂದು ಎರಕದ ಪಾತ್ರೆ”ಗೆ (ನೀರಿನ ಧಾರಕ) ಸಮಾನವಾಗಿದೆ, ಇಲ್ಲಿಂದ ಯಾಜಕರು ತಮ್ಮನ್ನು ತೊಳೆದುಕೊಳ್ಳಲು ನೀರನ್ನು ಪಡೆಯುತ್ತಿದ್ದರು. (1 ಅರಸುಗಳು 7:23) ಆದುದರಿಂದ ಅದು ಈ ರೀತಿಯಲ್ಲಿ “ನೀರಿನ ಸ್ನಾನದ” ಅಂದರೆ ದೇವರ ವಾಕ್ಯದ ಒಂದು ಉತ್ತಮ ಪ್ರಾತಿನಿಧ್ಯವಾಗಿದೆ, ಅದರ ಮೂಲಕ ಅಭಿಷಿಕ್ತ ಕ್ರೈಸ್ತರ ಯಾಜಕತ್ವದ ಸಭೆಯನ್ನು ಯೇಸುವು ಶುದ್ಧಗೊಳಿಸುತ್ತಾನೆ. (ಎಫೆಸ 5:25, 26; ಇಬ್ರಿಯ 10:22) ಈ ಗಾಜಿನ ಸಮುದ್ರವು “ಬೆಂಕಿಯಿಂದ ಬೆರೆ” ತಿರುವುದು, ತಮಗಾಗಿ ಇಟ್ಟ ಉನ್ನತ ಮಟ್ಟಗಳಿಗೆ ಅವರು ವಿಧೇಯರಾದಂತೆ ಈ ಅಭಿಷಿಕ್ತರು ಪರೀಕ್ಷಿಸಲ್ಪಡುತ್ತಾರೆ ಮತ್ತು ಶುದ್ಧೀಕರಿಸಲ್ಪಡುತ್ತಾರೆ ಎಂದು ಸೂಚಿಸುತ್ತದೆ. ಇನ್ನೂ ಹೆಚ್ಚಾಗಿ, ದೇವರ ಶತ್ರುಗಳ ವಿರುದ್ಧವಾಗಿ ಬೆಂಕಿಯಂತಹ ನ್ಯಾಯತೀರ್ಪುಗಳ ವಾಕ್ಸರಣಿಗಳು ಕೂಡ ಆತನ ವಾಕ್ಯದಲ್ಲಿ ಇರುತ್ತವೆ ಎಂದು ಅದು ನಮಗೆ ನೆನಪಿಗೆ ತರುತ್ತದೆ. (ಧರ್ಮೋಪದೇಶಕಾಂಡ 9:3; ಚೆಫನ್ಯ 3:8) ಈ ಬೆಂಕಿಯಂತಹ ನ್ಯಾಯತೀರ್ಪುಗಳಲ್ಲಿ ಕೆಲವು ಹೊಯ್ಯಲ್ಪಡಲಿರುವ ಕೊನೆಯ ಏಳು ಉಪದ್ರವಗಳಿಂದ ವ್ಯಕ್ತಗೊಳಿಸಲ್ಪಡುತ್ತವೆ.

6. (ಎ) ಪರಲೋಕದ ಗಾಜಿನ ಸಮುದ್ರದ ಮುಂದೆ ನಿಂತಿರುವ ಹಾಡುಗಾರರು ಯಾರು, ಮತ್ತು ನಮಗೆ ಹೇಗೆ ತಿಳಿದದೆ? (ಬಿ) ಅವರು ಯಾವ ರೀತಿಯಲ್ಲಿ “ಜಯಹೊಂದಿದವರಾಗಿ” ಇದ್ದಾರೆ?

6 ಸೊಲೊಮೋನನ ದೇವಾಲಯದಲ್ಲಿ ಸಮುದ್ರದಂತಿರುವ ಎರಕದ ಪಾತ್ರೆಯು ಯಾಜಕರ ಉಪಯೋಗಕ್ಕಾಗಿ ಇತ್ತು ಎಂಬ ವಾಸ್ತವಾಂಶವು ಸೂಚಿಸುವದೇನಂದರೆ ಪರಲೋಕದ ಗಾಜಿನ ಸಮುದ್ರದ ಮುಂದೆ ನಿಂತಿರುವ ಗಾಯಕರು ಒಂದು ಯಾಜಕ ವರ್ಗವಾಗಿದ್ದಾರೆ. ಅವರಲ್ಲಿ “ದೇವರ ವೀಣೆಗಳು” ಇದ್ದವು, ಆದಕಾರಣ, ಈ ಗುಂಪುಗಳು ಕೂಡ ವೀಣೆಗಳನ್ನೊಳಗೊಂಡು ಹಾಡುವುದರಿಂದ ನಾವು ಅವರನ್ನು 24 ಹಿರಿಯರೊಂದಿಗೆ ಮತ್ತು 1,44,000 ಮಂದಿಯೊಂದಿಗೆ ಜತೆಗೂಡಿಸುತ್ತೇವೆ. (ಪ್ರಕಟನೆ 5:8; 14:2) ಯೋಹಾನನು ನೋಡಿದ ಹಾಡುಗಾರರು “ಕಾಡು ಮೃಗದಿಂದ ಮತ್ತು ಅದರ ವಿಗ್ರಹದಿಂದ ಮತ್ತು ಅದರ ಹೆಸರಿನ ಅಂಕೆಯಿಂದ ಜಯಹೊಂದಿದವರು” ಆಗಿದ್ದಾರೆ. ಆದುದರಿಂದ ಇವರು 1,44,000 ಮಂದಿಯಲ್ಲಿ ಭೂಮಿಯ ಮೇಲೆ ಕಡೆಯ ದಿವಸಗಳಲ್ಲಿ ಜೀವಿಸುವವರಾಗಿರಬೇಕು. ಒಂದು ಗುಂಪಿನೋಪಾದಿ, ಅವರು ಖಂಡಿತವಾಗಿಯೂ ಜಯಶಾಲಿಗಳಾಗಿ ಹೊರಬಂದಿದ್ದಾರೆ. ಅವರು 1919 ರಿಂದ ಕಾಡುಮೃಗದ ಗುರುತನ್ನು ಪಡೆಯಲು ಯಾ ಶಾಂತಿಗಾಗಿ ಮನುಷ್ಯರ ಏಕೈಕ ನಿರೀಕ್ಷೆಯೆಂದು ಅದರ ವಿಗ್ರಹದೆಡೆಗೆ ವೀಕ್ಷಿಸಲು ಸುಮಾರು 70 ವರ್ಷಗಳಿಂದಲೂ ನಿರಾಕರಿಸಿದ್ದಾರೆ. ಅವರಲ್ಲಿ ಅನೇಕರು ಈಗಾಗಲೇ ಮರಣದ ತನಕ ನಂಬಿಗಸ್ತರಾಗಿದ್ದು ತಾಳಿಕೊಂಡಿದ್ದಾರೆ, ಮತ್ತು ಅವರು ಈಗ ಪರಲೋಕದಲ್ಲಿದ್ದು, ಭೂಮಿಯಲ್ಲಿ ಇನ್ನೂ ಇರುವ ಅವರ ಸಹೋದರರ ಹಾಡುವಿಕೆಯನ್ನು ನಿಸ್ಸಂದೇಹವಾಗಿ ವಿಶೇಷ ಸಂತೋಷದಿಂದ ಅನುಸರಿಸುತ್ತಾರೆ.—ಪ್ರಕಟನೆ 14:11-13.

7. ಪುರಾತನ ಇಸ್ರಾಯೇಲಿನಲ್ಲಿ ವೀಣೆಯನ್ನು ಹೇಗೆ ಬಳಸಲಾಗುತ್ತಿತ್ತು, ಮತ್ತು ಯೋಹಾನನ ದರ್ಶನದಲ್ಲಿ ದೇವರ ವೀಣೆಗಳ ಹಾಜರಿಯು ನಮ್ಮನ್ನು ಹೇಗೆ ಬಾಧಿಸತಕ್ಕದ್ದು?

7 ಈ ನಿಷ್ಠಾವಂತ ಜಯಶಾಲಿಗಳ ಹತ್ತಿರ ದೇವರ ವೀಣೆಗಳಿವೆ. ಇದರಲ್ಲಿ, ವೀಣೆಗಳನ್ನೊಳಗೊಂಡ ಗಾಯನದೊಂದಿಗೆ ಯೆಹೋವನನ್ನು ಆರಾಧಿಸುತ್ತಿದ್ದ ಪ್ರಾಚೀನ ಸಮಯದ ದೇವಾಲಯದ ಲೇವ್ಯರಂತೆ ಅವರು ಇದ್ದಾರೆ. ವೀಣೆಗಳ ಸಹಿತವಾಗಿಯೂ ಕೆಲವರು ಪ್ರವಾದಿಸಿದರು. (1 ಪೂರ್ವಕಾಲವೃತ್ತಾಂತ 15:16; 25:1-3) ವೀಣೆಯ ಸುಂದರವಾದ ಗೀತವು ಇಸ್ರಾಯೇಲಿನ ಆನಂದದ ಗಾಯನಗಳನ್ನು ಮತ್ತು ಯೆಹೋವನಿಗೆ ಸ್ತುತಿಯ ಮತ್ತು ಉಪಕಾರಸ್ಮರಣೆಯ ಪ್ರಾರ್ಥನೆಗಳನ್ನು ಹೆಚ್ಚು ಸೊಗಸಾಗಿ ಮಾಡಿತು. (1 ಪೂರ್ವಕಾಲವೃತ್ತಾಂತ 13:8; ಕೀರ್ತನೆ 33:2; 43:4; 57:7, 8) ನಿರುತ್ಸಾಹದ ಯಾ ಬಂದಿವಾಸದ ಸಮಯಗಳಲ್ಲಿ ವೀಣೆಯು ಕೇಳಲ್ಪಡುತ್ತಿರಲಿಲ್ಲ. (ಕೀರ್ತನೆ 137:2) ಈ ದರ್ಶನದಲ್ಲಿ ದೇವರ ವೀಣೆಗಳ ಇರುವಿಕೆಯು, ನಮ್ಮ ದೇವರಿಗೆ ಸ್ತುತಿಯ ಮತ್ತು ಉಪಕಾರಸ್ಮರಣೆಯ ಅತ್ಯಾನಂದದ, ವಿಜಯೋತ್ಸಾಹದ ಸಂಗೀತಕ್ಕಾಗಿ ನಮ್ಮ ನಿರೀಕ್ಷೆಯನ್ನು ಚುರುಕುಮಾಡತಕ್ಕದ್ದು. *

8. ಯಾವ ಹಾಡನ್ನು ಹಾಡಲಾಗುತ್ತದೆ, ಮತ್ತು ಅದರ ಮಾತುಗಳು ಏನು?

8 ಯೋಹಾನನು ಅದನ್ನು ತಾನೇ ವರದಿಸುತ್ತಾನೆ: “ಮತ್ತು ಅವರು ದೇವರ ದಾಸನಾದ ಮೋಶೆಯ ಹಾಡನ್ನು ಮತ್ತು ಕುರಿಮರಿಯ ಹಾಡನ್ನು ಹಾಡುತ್ತಾ ಹೇಳುವುದು: ‘ಯೆಹೋವ ದೇವರೇ ಸರ್ವಶಕ್ತನೇ, ನಿನ್ನ ಕೃತ್ಯಗಳು ಅಸಾಧಾರಣ ಮತ್ತು ಆಶ್ಚರ್ಯಕರವಾಗಿವೆ. ನಿತ್ಯತೆಯ ಅರಸನೇ, ನಿನ್ನ ಮಾರ್ಗಗಳು ನೀತಿಯವುಗಳೂ, ಸತ್ಯವೂ ಆಗಿವೆ. ಯೆಹೋವನೇ, ನೀನೊಬ್ಬನೇ ನಿಷ್ಠನಾಗಿರುವದರಿಂದ, ನಿನಗೆ ಭಯಪಡದವರು ಮತ್ತು ನಿನ್ನ ನಾಮವನ್ನು ಮಹಿಮೆಪಡಿಸದವರು ಯಾರು? ನಿನ್ನ ನೀತಿಯುಳ್ಳ ಶಾಸನಗಳು ವ್ಯಕ್ತಗೊಂಡದರ್ದಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಮುಂದೆ ಆರಾಧಿಸುವುವು.”ಪ್ರಕಟನೆ 15:3, 4, NW.

9. ಭಾಗಶಃ ಆ ಹಾಡನ್ನು “ಮೋಶೆಯ ಹಾಡು” ಎಂದು ಕರೆಯಲಾಗುವುದು ಯಾಕೆ?

9 ಈ ಜಯಶಾಲಿಗಳು “ಮೋಶೆಯ ಹಾಡನ್ನು” ಹಾಡುತ್ತಾರೆ, ಅಂದರೆ ತದ್ರೀತಿಯ ಪರಿಸ್ಥಿತಿಗಳಲ್ಲಿ ಮೋಶೆಯು ಹಾಡಿರುವುದಕ್ಕೆ ಸಮಾನವಾದ ಸಂಗೀತ. ಐಗುಪ್ತದಲ್ಲಿ ಹತ್ತು ಬಾಧೆಗಳನ್ನು ಮತ್ತು ಕೆಂಪು ಸಮುದ್ರದಲ್ಲಿ ಐಗುಪ್ತ್ಯರ ಸೇನೆಯ ನಾಶನವನ್ನು ಇಸ್ರಾಯೇಲ್ಯರು ನೋಡಿದ ಅನಂತರ, ಯೆಹೋವನಿಗೆ ವಿಜಯೋತ್ಸಾಹದ ಸ್ತುತಿಯ ಅಂಥ ಗಾನವೊಂದರಲ್ಲಿ ಹೀಗೆ ಘೋಷಿಸುವಂತೆ ಮೋಶೆಯು ಅವರ ಮುಂದಾಳುತ್ವ ವಹಿಸಿದನು: “ಯೆಹೋವನು ನಿತ್ಯಕ್ಕೂ, ಎಂದೆಂದಿಗೂ ಅರಸನಾಗಿ ಆಳುವನು.” (ವಿಮೋಚನಕಾಂಡ 15:1-19) ಯೋಹಾನನ ದರ್ಶನದಲ್ಲಿ ಕಾಡು ಮೃಗದಿಂದ ವಿಜಯಗಳಿಸಿ ಬರುವ ಮತ್ತು ಕೊನೆಯ ಏಳು ಉಪದ್ರವಗಳನ್ನು ಸಾರುವುದರಲ್ಲಿ ಒಳಗೂಡಿರುವ ಗಾಯಕರು, “ಸರ್ವಯುಗಗಳ ಅರಸನಿಗೆ” ಕೂಡ ಹಾಡಬೇಕೆಂಬುದು ಎಷ್ಟೊಂದು ಸಮಂಜಸ!—1 ತಿಮೊಥೆಯ 1:17.

10. ಮೋಶೆಯಿಂದ ಬೇರೆ ಯಾವ ಹಾಡು ರಚಿಸಲ್ಪಟ್ಟಿತು, ಮತ್ತು ಅದರ ಕೊನೆಯ ಚರಣ ಇಂದಿನ ಮಹಾ ಸಮೂಹದವರಿಗೆ ಹೇಗೆ ಸಂಬಂಧಿಸುತ್ತದೆ?

10 ಕಾನಾನನ್ನು ವಶಪಡಿಸಿಕೊಳ್ಳಲು ಇಸ್ರಾಯೇಲ್‌ ಸಿದ್ಧಗೊಳ್ಳುತ್ತಿದ್ದಂತೆ ರಚಿಸಿದ ಇನ್ನೊಂದು ಸಂಗೀತದಲ್ಲಿ, ಪ್ರಾಯ ಸಂದ ಮೋಶೆಯು ಆ ಜನಾಂಗಕ್ಕೆ ಅಂದದ್ದು: “ಯೆಹೋವನ ನಾಮವನ್ನು ಪ್ರಕಟಿಸುವೆನು. ನಮ್ಮ ದೇವರಿಗೆ ಮಹತ್ವವನ್ನು ವರ್ಣಿಸಿರಿ.” ಈ ಸಂಗೀತದ ಕೊನೆಯ ಚರಣವು ಇಸ್ರಾಯೇಲ್ಯರಲ್ಲದವರಿಗೂ ಉತ್ತೇಜನವನ್ನು ಕೊಟ್ಟಿತು ಮತ್ತು ಇಂದಿನ ಮಹಾ ಸಮೂಹದವರ ವರೆಗೂ ಮೋಶೆಯ ಪ್ರೇರಿತ ಮಾತುಗಳು ತಲುಪುತ್ತವೆ: “ಜನಾಂಗಗಳಿರಾ, ಅವನ ಜನರೊಂದಿಗೆ ಆನಂದಪಡಿರಿ [NW].” ಮತ್ತು ಅವರು ಆನಂದ ಪಡಬೇಕು ಯಾಕೆ? ಯಾಕಂದರೆ ಯೆಹೋವನು ಈಗ “ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ . . . ಪ್ರತಿದಂಡನೆ ಮಾಡುತ್ತಾನೆ.” ನೀತಿಯ ನ್ಯಾಯದಂಡನೆಯ ಈ ಜಾರಿಗೊಳಿಸುವಿಕೆಯು ಯೆಹೋವನಲ್ಲಿ ನಿರೀಕ್ಷಿಸುವವರೆಲ್ಲರಿಗೆ ಜಯೋತ್ಸಾಹವನ್ನು ತರುವುದು.—ಧರ್ಮೋಪದೇಶಕಾಂಡ 32:3, 43; ರೋಮಾಪುರ 15:10-13; ಪ್ರಕಟನೆ 7:9.

11. ಯೋಹಾನನು ಕೇಳಿದ ಹಾಡು ಹೇಗೆ ನೆರವೇರುತ್ತಾ ಮುಂದರಿಯುತ್ತದೆ?

11 ಈಗ ಕರ್ತನ ದಿನದಲ್ಲಿದ್ದು ತಾನೇ ಸ್ವರ್ಗೀಯ ಮೇಳಗೀತದೊಂದಿಗೆ, “ಎಲ್ಲಾ ಜನಾಂಗಗಳು ಬಂದು ನಿನ್ನ ಮುಂದೆ ಆರಾಧಿಸುವರು” ಎಂದು ಹಾಡಲು ಮೋಶೆಯು ಎಷ್ಟು ಸಂತೋಷಪಡುತ್ತಿದ್ದನು! ನಾವು ನೋಡುತ್ತಿರುವಂತೆ, ಆ ವಿಷಯಾತೀತವಾದ ಸಂಗೀತವು, ಇಂದೂ ಅದ್ಭುತಕರ ನೆರವೇರಿಕೆಯನ್ನು ಪಡೆಯುತ್ತಾ ಇದೆ, ಕೇವಲ ದರ್ಶನದಲ್ಲಿ ಮಾತ್ರವಲ್ಲ, ಒಂದು ಜೀವಂತ ವಾಸ್ತವಿಕತೆಯೋಪಾದಿ, “ಜನಾಂಗಗಳ” ಲಕ್ಷಾಂತರ ಜನರು ಯೆಹೋವನ ಐಹಿಕ ಸಂಸ್ಥೆಯಲ್ಲಿ ಆನಂದಭರಿತರಾಗಿ ಈಗ ಒಟ್ಟುಗೂಡುತ್ತಾ ಇದ್ದಾರೆ.

12. ವಿಜಯಗಳಿಸಿದವರ ಹಾಡನ್ನು “ಕುರಿಮರಿಯ ಹಾಡು” ಎಂದೂ ಯಾಕೆ ಹೇಳಲಾಗಿದೆ?

12 ಆದಾಗ್ಯೂ, ಇದು ಕೇವಲ ಮೋಶೆಯದ್ದು ಮಾತ್ರವಾಗಿರದೆ, “ಕುರಿಮರಿಯ” ಹಾಡು ಕೂಡ ಆಗಿದೆ. ಅದು ಹೇಗೆ? ಮೋಶೆಯು ಇಸ್ರಾಯೇಲಿಗೆ ಯೆಹೋವನ ಪ್ರವಾದಿಯಾಗಿದ್ದನು, ಆದರೆ ತನ್ನಂತಹ ಪ್ರವಾದಿಯೊಬ್ಬನನ್ನು ಯೆಹೋವನು ಎಬ್ಬಿಸುವನು ಎಂದು ಮೋಶೆಯು ತಾನೇ ಪ್ರವಾದಿಸಿದನು. ಇವನು ಕುರಿಮರಿಯಾದ ಯೇಸು ಕ್ರಿಸ್ತನಾಗಿ ಪರಿಣಮಿಸಿದನು. ಮೋಶೆಯು “ದೇವರ ದಾಸ” ನಾಗಿದ್ದನು, ಆದರೆ ಯೇಸುವು ದೇವರ ಪುತ್ರನಾಗಿದ್ದು, ಕಾರ್ಯತಃ, ಮಹಾ ಮೋಶೆಯಾಗಿದ್ದಾನೆ. (ಧರ್ಮೋಪದೇಶಕಾಂಡ 18:15-19; ಅ. ಕೃತ್ಯಗಳು 3:22, 23; ಇಬ್ರಿಯ 3:5, 6) ಆದಕಾರಣ, ಹಾಡುವವರು “ಕುರಿಮರಿಯ ಹಾಡನ್ನೂ” ಹಾಡುತ್ತಾರೆ.

13. (ಎ) ಯೇಸು ಮೋಶೆಗಿಂತಲೂ ಅಧಿಕ ಪ್ರಮುಖನಾಗಿ ಇರುವುದಾದರೂ, ಅವನಂತೆ ಇರುವುದು ಹೇಗೆ? (ಬಿ) ಗಾಯಕರೊಂದಿಗೆ ನಾವು ಹೇಗೆ ಜತೆಗೂಡಬಹುದು?

13 ಮೋಶೆಯಂತೆ, ಯೇಸುವು ಬಹಿರಂಗವಾಗಿ ದೇವರ ಸ್ತೋತ್ರವನ್ನು ಹಾಡಿದನು ಮತ್ತು ಎಲ್ಲಾ ಶತ್ರುಗಳ ಮೇಲಿನ ತನ್ನ ವಿಜಯದ ಕುರಿತು ಪ್ರವಾದಿಸಿದನು. (ಮತ್ತಾಯ 24:21, 22; 26:30; ಲೂಕ 19:41-44) ಯೆಹೋವನನ್ನು ಸ್ತುತಿಸಲು ಜನಾಂಗಗಳು ಬರುವ ಸಮಯವನ್ನು ಯೇಸುವು ಕೂಡ ಮುನ್ನೋಡಿದನು, ಮತ್ತು ಸ್ವತಃ ಯಜ್ಞವಾಗಿ ಅರ್ಪಿಸಿಕೊಳ್ಳುವ “ದೇವರ ಕುರಿಮರಿ” ಯೋಪಾದಿ, ಇದು ಸಾಧ್ಯವಾಗುವಂತೆ ಅವನು ತನ್ನ ಮಾನವ ದೇಹವನ್ನು ಕೂಡ ಅರ್ಪಿಸಿದನು. (ಯೋಹಾನ 1:29; ಪ್ರಕಟನೆ 7:9; ಹೋಲಿಸಿರಿ ಯೆಶಾಯ 2:2-4; ಜೆಕರ್ಯ 8:23.) ಮತ್ತು ದೇವರ ಹೆಸರಾದ, ಯೆಹೋವ ಎಂಬುದನ್ನು ಮೋಶೆ ಗಣ್ಯಮಾಡಿದಂತೆ ಮತ್ತು ಗುಣಗಾನಮಾಡಿದಂತೆ, ಯೇಸುವು ದೇವರ ಹೆಸರನ್ನು ಪ್ರಕಟ ಪಡಿಸಿದನು. (ವಿಮೋಚನಕಾಂಡ 6:2, 3; ಕೀರ್ತನೆ 90:1, 17; ಯೋಹಾನ 17:6) ಯೆಹೋವನು ನಿಷ್ಠನಾಗಿರುವುದರಿಂದ, ಅವನ ಮಹಿಮಾಭರಿತ ವಾಗ್ದಾನಗಳು ನೆರವೇರುವುದು ಖಂಡಿತ. ನಿಶ್ಚಯವಾಗಿಯೂ, ಹಾಗಾದರೆ, ಸಂಗೀತದ ಮಾತುಗಳನ್ನು ಒಪ್ಪಿಕೊಳ್ಳುವುದರಲ್ಲಿ ಈ ನಿಷ್ಠಾವಂತ ಹಾಡುಗಾರರೊಂದಿಗೆ, ಕುರಿಮರಿಯೊಂದಿಗೆ, ಮತ್ತು ಮೋಶೆಯೊಂದಿಗೆ ನಾವು ಒಂದಾಗಿದ್ದೇವೆ: “ಯೆಹೋವನೇ, ನಿನಗೆ ನಿಜವಾಗಿ ಭಯಪಡದವರು, ಮತ್ತು ನಿನ್ನ ನಾಮವನ್ನು ಮಹಿಮೆಪಡಿಸದವರು ಯಾರಿರುವರು?”

ಪಾತ್ರೆಗಳೊಂದಿಗೆ ದೇವದೂತರು

14. ಪವಿತ್ರಸ್ಥಾನದಿಂದ ಯಾರು ಹೊರಬರುವುದನ್ನು ಯೋಹಾನನು ಕಾಣುತ್ತಾನೆ, ಮತ್ತು ಅವರಿಗೆ ಏನು ಕೊಡಲಾಗುತ್ತದೆ?

14 ಈ ಅಭಿಷಿಕ್ತ ವಿಜಯಶಾಲಿಗಳ ಹಾಡನ್ನು ನಾವು ಕೇಳುವುದು ತಕ್ಕದ್ದಾಗಿದೆ. ಯಾಕೆ? ಯಾಕಂದರೆ ದೇವರ ರೋಷದಿಂದ ತುಂಬಿದ್ದ ಪಾತ್ರೆಗಳಲ್ಲಿರುವ ನ್ಯಾಯತೀರ್ಪುಗಳನ್ನು ಭೂಮಿಯಲ್ಲಿಲ್ಲಾ ಅವರು ಪ್ರಚುರಪಡಿಸಿದ್ದಾರೆ. ಆದರೆ ಈ ಪಾತ್ರೆಗಳಿಂದ ಹೊಯ್ಯುವುದರಲ್ಲಿ, ಯೋಹಾನನು ತೋರಿಸುವುದನ್ನು ಮುಂದುವರಿಸಿದಂತೆ, ಕೇವಲ ಮಾನವರಿಗಿಂತಲೂ ಹೆಚ್ಚಿನವರು ಒಳಗೊಂಡಿರುತ್ತಾರೆ: “ಮತ್ತು ಈ ಸಂಗತಿಗಳ ಅನಂತರ ನಾನು ನೋಡಿದೆನು, ಪರಲೋಕದಲ್ಲಿ ದೇವದರ್ಶನಗುಡಾರದ ಪವಿತ್ರಸ್ಥಾನವು ತೆರೆಯಿತು, ಮತ್ತು ಪವಿತ್ರಸ್ಥಾನದಿಂದ ಏಳು ಉಪದ್ರವಗಳೊಂದಿಗೆ ಪ್ರಕಾಶವೂ ನಿರ್ಮಲವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದ ಮತ್ತು ತಮ್ಮ ಎದೆಗಳಿಗೆ ಚಿನ್ನದ ನಡುಪಟ್ಟಿಗಳನ್ನು ಕಟ್ಟಿಕೊಂಡಿದ್ದ ಆ ಏಳು ದೇವದೂತರು ಹೊರಬಂದರು. ಮತ್ತು ನಾಲ್ಕು ಜೀವಿಗಳಲ್ಲಿ ಒಂದು ಈ ಏಳು ದೇವದೂತರಿಗೆ ಎಂದೆಂದಿಗೂ ಜೀವಿಸುವ ದೇವರ ರೋಷದಿಂದ ತುಂಬಿದ್ದ ಏಳು ಚಿನ್ನದ ಪಾತ್ರೆಗಳನ್ನು ಕೊಟ್ಟಿತು.”ಪ್ರಕಟನೆ 15:5-7, NW.

15. ಏಳು ದೇವದೂತರು ಪವಿತ್ರಸ್ಥಾನದಿಂದ ಹೊರಬರುವುದು ಯಾಕೆ ಆಶ್ಚರ್ಯಕರವಲ್ಲ?

15 ಎಲ್ಲಿ ಪರಲೋಕದ ವಸ್ತುಗಳ ಪ್ರಾತಿನಿಧ್ಯಗಳು ಇದ್ದವೋ ಆ ಇಸ್ರಾಯೇಲಿನ ದೇವಾಲಯದ ಸಂಬಂಧದಲ್ಲಿ, “ಪವಿತ್ರಸ್ಥಾನ” ವೆಂದು ಇಲ್ಲಿ ಕರೆಯಲ್ಪಟ್ಟಿರುವ ಅತಿ ಪವಿತ್ರ ಸ್ಥಾನದಲ್ಲಿ ಕೇವಲ ಮಹಾ ಯಾಜಕನು ಪ್ರವೇಶಿಸಸಾಧ್ಯವಿತ್ತು. (ಇಬ್ರಿಯ 9:3, 7) ಅದು ಪರಲೋಕದಲ್ಲಿ ಯೆಹೋವನ ಸಾನ್ನಿಧ್ಯದ ಸ್ಥಾನವನ್ನು ಪ್ರತಿನಿಧಿಸುತ್ತದೆ. ಆದಾಗ್ಯೂ, ಪರಲೋಕದಲ್ಲಿಯೇ, ಯೆಹೋವನ ಮುಂದೆ ಪ್ರವೇಶಿಸುವ ಸುಯೋಗ ಮಹಾ ಯಾಜಕ ಯೇಸು ಕ್ರಿಸ್ತನಿಗೆ ಮಾತ್ರವಲ್ಲ, ದೇವದೂತರಿಗೂ ಇದೆ. (ಮತ್ತಾಯ 18:10; ಇಬ್ರಿಯ 9:24-26) ಆದುದರಿಂದ ಪರಲೋಕದಲ್ಲಿ ಪವಿತ್ರಸ್ಥಾನದಿಂದ ಏಳು ಮಂದಿ ದೇವದೂತರು ಹೊರಬರುವುದನ್ನು ಕಾಣುವುದೇನೂ ಆಶ್ಚರ್ಯವಲ್ಲ. ಸ್ವತಃ ಯೆಹೋವ ದೇವರಿಂದಲೇ ಅವರಿಗೊಂದು ನಿಯೋಗ ಇತ್ತು: ದೇವರ ಕೋಪದಿಂದ ತುಂಬಿದ ಪಾತ್ರೆಗಳನ್ನು ಹೊಯ್ಯುವುದು.—ಪ್ರಕಟನೆ 16:1.

16. (ಎ) ತಮ್ಮ ಕಾರ್ಯಕ್ಕೆ ಏಳು ದೇವದೂತರು ಒಳ್ಳೆಯದಾಗಿ ಅರ್ಹರಾಗಿದ್ದಾರೆ ಎಂದು ಯಾವುದು ತೋರಿಸುತ್ತದೆ? (ಬಿ) ಸಾಂಕೇತಿಕ ಪಾತ್ರೆಗಳಿಂದ ಹೊಯ್ಯುವ ಮಹಾ ಕೆಲಸದಲ್ಲಿ ಇತರರು ಒಳಗೂಡಿದ್ದಾರೆ ಎಂದು ಯಾವುದು ತೋರಿಸುತ್ತದೆ?

16 ಈ ಕಾರ್ಯಕ್ಕೆ ದೇವದೂತರು ಉತ್ತಮವಾಗಿ ಅರ್ಹರಾಗಿದ್ದಾರೆ. ಅವರು ಪ್ರಕಾಶವೂ ನಿರ್ಮಲವೂ ಆದ ನಾರುಮಡಿಯನ್ನು ಧರಿಸಿಕೊಂಡಿರುವುದು, ಯೆಹೋವನ ದೃಷ್ಟಿಯಲ್ಲಿ ಅವರು ಆತ್ಮಿಕವಾಗಿ ಶುದ್ಧರೂ, ಪವಿತ್ರರೂ, ನೀತಿಯುಕ್ತರೂ ಆಗಿದ್ದಾರೆ ಎಂದು ತೋರಿಸುತ್ತದೆ. ಅವರು ಚಿನ್ನದ ನಡುಪಟ್ಟಿಗಳನ್ನು ಕೂಡ ಧರಿಸಿಕೊಂಡಿದ್ದಾರೆ. ಒಂದು ಕಾರ್ಯವನ್ನು ಪೂರೈಸಲಿಕ್ಕಾಗಿ ವ್ಯಕ್ತಿಯೊಬ್ಬನು ಸ್ವತಃ ಧರಿಸಿಕೊಳ್ಳುವಾಗ ನಡುಪಟ್ಟಿಗಳು ಸಾಮಾನ್ಯವಾಗಿ ಬಳಸಲ್ಪಡುತ್ತವೆ. (ಯಾಜಕಕಾಂಡ 8:7, 13; 1 ಸಮುವೇಲ 2:18; ಲೂಕ 12:37; ಯೋಹಾನ 13:4, 5) ಆದುದರಿಂದ ಒಂದು ನೇಮಕವನ್ನು ನೆರವೇರಿಸಲು ದೇವದೂತರು ನಡುಪಟ್ಟಿ ಧರಿಸಿದ್ದಾರೆ. ಇನ್ನೂ ಹೆಚ್ಚಾಗಿ, ಅವರ ನಡುಪಟ್ಟಿಗಳು ಚಿನ್ನದ್ದಾಗಿವೆ. ಹಿಂದೆ ದೇವದರ್ಶನದ ಗುಡಾರದಲ್ಲಿ ದಿವ್ಯ, ಸ್ವರ್ಗೀಯ ವಸ್ತುಗಳನ್ನು ಪ್ರತಿನಿಧಿಸಲು ಚಿನ್ನವನ್ನು ಬಳಸಲಾಗುತ್ತಿತ್ತು. (ಇಬ್ರಿಯ 9:4, 11, 12) ಈ ದೇವದೂತರಿಗೆ ಸೇವೆಯ ಒಂದು ಅಮೂಲ್ಯ, ದಿವ್ಯ ನಿಯೋಗವನ್ನು ನಿರ್ವಹಿಸಲು ಇದೆ ಎಂದು ಅದರ ಅರ್ಥ. ಇತರರೂ ಈ ಮಹಾ ಕಾರ್ಯದಲ್ಲಿ ಒಳಗೂಡಿದ್ದಾರೆ. ನಾಲ್ಕು ಜೀವಿಗಳಲ್ಲಿ ಒಂದು ಅವರಿಗೆ ನಿಜವಾದ ಪಾತ್ರೆಗಳನ್ನು ಕೊಡುತ್ತದೆ. ನಿಸ್ಸಂದೇಹವಾಗಿ, ಯೆಹೋವನ ನ್ಯಾಯತೀರ್ಪುಗಳನ್ನು ಸಾರಲು ಬೇಕಾದ ನಿರ್ಭೀತಿ ಮತ್ತು ಅದಮ್ಯ ಧೈರ್ಯವನ್ನು ಸಂಕೇತಿಸುವ ಸಿಂಹವನ್ನು ಹೋಲುವ ಮೊದಲ ಜೀವಿಯು ಇದಾಗಿದೆ.—ಪ್ರಕಟನೆ 4:7.

ಯೆಹೋವನು ತನ್ನ ಪವಿತ್ರಸ್ಥಾನದಲ್ಲಿ

17. ಪವಿತ್ರಸ್ಥಾನದ ಕುರಿತು ಯೋಹಾನನು ನಮಗೆ ಏನನ್ನು ತಿಳಿಸುತ್ತಾನೆ, ಮತ್ತು ಅದು ಪುರಾತನ ಇಸ್ರಾಯೇಲಿನ ಪವಿತ್ರಸ್ಥಾನವನ್ನು ಹೇಗೆ ನಮ್ಮ ನೆನಪಿಗೆ ತರುತ್ತದೆ?

17 ಕೊನೆಗೂ, ದರ್ಶನದ ಈ ಭಾಗವನ್ನು ಮುಕ್ತಾಯಗೊಳಿಸುತ್ತಾ ಯೋಹಾನನು ನಮಗೆ ಹೇಳುವುದು: “ಮತ್ತು ದೇವರ ಮಹಿಮೆಯ ಮತ್ತು ಆತನ ಶಕ್ತಿಯ ಕಾರಣ ಪವಿತ್ರಸ್ಥಾನವು ಹೊಗೆಯಿಂದ ತುಂಬಿತು ಮತ್ತು ಏಳುಮಂದಿ ದೇವದೂತರ ಏಳು ಉಪದ್ರವಗಳು ತೀರುವ ತನಕ ಆ ಪವಿತ್ರಸ್ಥಾನದೊಳಗೆ ಪ್ರವೇಶಿಸಲು ಯಾವನಿಗೂ ಆಗಲಿಲ್ಲ.” (ಪ್ರಕಟನೆ 15:8, NW) ಅಕ್ಷರಾರ್ಥ ಪವಿತ್ರಸ್ಥಾನದಲ್ಲಿ ಮೇಘವೊಂದು ಆವರಿಸಿದ ಸಂದರ್ಭಗಳು ಇಸ್ರಾಯೇಲಿನ ಇತಿಹಾಸದಲ್ಲಿ ಇದ್ದವು, ಮತ್ತು ಯೆಹೋವನ ಮಹಿಮೆಯ ಈ ವ್ಯಕ್ತಪಡಿಸುವಿಕೆಯು ಅಲ್ಲಿ ಯಾಜಕರು ಪ್ರವೇಶಿಸದಂತೆ ತಡೆಯುತ್ತಿತ್ತು. (1 ಅರಸುಗಳು 8:10, 11; 2 ಪೂರ್ವಕಾಲವೃತ್ತಾಂತ 5:13, 14; ಹೋಲಿಸಿರಿ ಯೆಶಾಯ 6:4, 5.) ಭೂಮಿಯ ಮೇಲಿನ ಬೆಳವಣಿಗೆಗಳ ಕುರಿತು ಯೆಹೋವನು ಕ್ರಿಯಾತ್ಮಕವಾಗಿ ಒಳಗೂಡಿರುವ ಸಮಯಗಳು ಇವಾಗಿದ್ದವು.

18. ಯೆಹೋವನಿಗೆ ವರದಿಮಾಡಲು ಏಳು ದೇವದೂತರು ಯಾವಾಗ ಹಿಂದೆರಳುವರು?

18 ಈಗ ಭೂಮಿಯ ಮೇಲೆ ಸಂಭವಿಸುವ ಸಂಗತಿಗಳ ಕುರಿತೂ ಯೆಹೋವನು ಆಳವಾಗಿ ಅಭಿರುಚಿಯುಳ್ಳವನಾಗಿದ್ದಾನೆ. ಅವರ ನೇಮಕವನ್ನು ಏಳು ದೇವದೂತರು ಪೂರ್ಣಗೊಳಿಸಲು ಅವನು ಬಯಸುತ್ತಾನೆ. ಕೀರ್ತನೆ 11:4-6 ರಲ್ಲಿ ವರ್ಣಿಸಿದಂತೆ, ನ್ಯಾಯತೀರ್ಪಿನ ಒಂದು ಪರಾಕಾಷ್ಠೆಯ ಸಮಯವು ಇದಾಗಿದೆ: “ಯೆಹೋವನು ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ; ಆತನು ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ. ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ. ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ. ಆತನು ದುಷ್ಟರ ಮೇಲೆ ಪಾಶಗಳನ್ನು ಸುರಿಸಲಿ. ಬೆಂಕಿ ಗಂಧಕ ಉರಿಗಾಳಿ ಇವುಗಳನ್ನು ಅವರ ಪಾನವಾಗಮಾಡಲಿ.” ದುಷ್ಟರ ಮೇಲೆ ಈ ಏಳು ಉಪದ್ರವಗಳು ಹೊಯ್ಯಲ್ಪಡುವ ತನಕ, ಏಳು ದೇವದೂತರು ಯೆಹೋವನ ಉನ್ನತ ಸನ್ನಿಧಾನಕ್ಕೆ ಹಿಂದೆರಳುವುದಿಲ್ಲ.

19. (ಎ) ಯಾವ ಅಪ್ಪಣೆಯು ಕೊಡಲ್ಪಡುತ್ತದೆ, ಮತ್ತು ಯಾರಿಂದ? (ಬಿ) ಸಾಂಕೇತಿಕ ಪಾತ್ರೆಗಳಿಂದ ಹೊಯ್ಯುವುದು ಯಾವಾಗ ಆರಂಭಗೊಂಡಿದ್ದಿರಬೇಕು?

19 ಈ ಭಯಚಕಿತಗೊಳಿಸುವ ಅಪ್ಪಣೆಯು ಗುಡುಗಾಡುತ್ತದೆ: “ಮತ್ತು ಪವಿತ್ರಸ್ಥಾನದಿಂದ ಒಂದು ಮಹಾ ಶಬ್ದವು ಆ ಏಳು ಮಂದಿ ದೇವದೂತರಿಗೆ ಹೇಳುವುದನ್ನು ನಾನು ಕೇಳಿದೆನು: ‘ಹೋಗಿರಿ ಮತ್ತು ದೇವರ ಕೋಪದ ಆ ಏಳು ಪಾತ್ರೆಗಳನ್ನು ಭೂಮಿಯೊಳಗೆ ಹೊಯ್ಯಿರಿ.’” (ಪ್ರಕಟನೆ 16:1, NW) ಈ ಅಪ್ಪಣೆಯನ್ನು ಕೊಡುವವನು ಯಾರು? ಸ್ವತಃ ಯೆಹೋವನೇ ಆಗಿರಬೇಕು, ಯಾಕಂದರೆ ಅವನ ಮಹಿಮೆಯ ಮತ್ತು ಶಕ್ತಿಯ ತೇಜಸ್ಸು ಬೇರೆ ಯಾರೂ ಪವಿತ್ರಸ್ಥಾನಕ್ಕೆ ಪ್ರವೇಶಿಸದಂತೆ ನಿರ್ಬಂಧಿಸುತ್ತದೆ. ಯೆಹೋವನು ನ್ಯಾಯತೀರ್ಪಿಗಾಗಿ ತನ್ನ ಆತ್ಮಿಕ ದೇವಾಲಯದೊಳಗೆ 1918 ರಲ್ಲಿ ಬಂದನು. (ಮಲಾಕಿಯ 3:1-5) ಹಾಗಾದರೆ, ಆ ತಾರೀಖಿನ ಸ್ವಲ್ಪ ಸಮಯದ ಅನಂತರ, ದೇವರ ಕೋಪದ ಪಾತ್ರೆಗಳನ್ನು ಹೊಯ್ಯಲು ಅಪ್ಪಣೆಯನ್ನು ಅವನು ಕೊಟ್ಟಿರಬೇಕು. ವಾಸ್ತವದಲ್ಲಿ, ಸಾಂಕೇತಿಕ ಪಾತ್ರೆಗಳಲ್ಲಿರುವ ನ್ಯಾಯತೀರ್ಪುಗಳು 1922 ರಿಂದ ತೀವ್ರತೆಯಿಂದ ಸಾರಲ್ಪಡಲು ಆರಂಭಗೊಂಡವು. ಮತ್ತು ಅವುಗಳ ಸಾರುವಿಕೆಯು ಇಂದು ಆರೋಹಣವಾಗುತ್ತಾ ಏರುತ್ತಿದೆ.

ಪಾತ್ರೆಗಳು ಮತ್ತು ತುತೂರಿ ಊದುವಿಕೆಗಳು

20. ಯೆಹೋವನ ಕೋಪದ ಪಾತ್ರೆಗಳು ಏನನ್ನು ಪ್ರಕಟಿಸುತ್ತವೆ ಮತ್ತು ಎಚ್ಚರಿಸುತ್ತವೆ, ಮತ್ತು ಅವುಗಳನ್ನು ಹೇಗೆ ಹೊಯ್ಯಲಾಗುತ್ತದೆ?

20 ಯೆಹೋವನ ಕೋಪದ ಪಾತ್ರೆಗಳು, ಲೋಕ ರಂಗವನ್ನು ಯೆಹೋವನು ವೀಕ್ಷಿಸುವಂತೆ ಅದರ ಲಕ್ಷಣಗಳನ್ನು ಪ್ರಕಟಿಸುತ್ತವೆ ಮತ್ತು ಯೆಹೋವನು ವಿಧಿಸಲಿರುವ ನ್ಯಾಯದಂಡನೆಯ ಎಚ್ಚರಿಕೆಯನ್ನೀಯುತ್ತವೆ. ಮೋಶೆಯ ಹಾಡನ್ನೂ, ಕುರಿಮರಿಯ ಹಾಡನ್ನೂ ಹಾಡುತ್ತಿರುವ, ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರ ಸಭೆಯ ಕಾರ್ಯಭಾರಿಯ ಮೂಲಕ ದೇವದೂತರು ಪಾತ್ರೆಗಳನ್ನು ಹೊಯ್ಯುತ್ತಾರೆ. ಶುಭವಾರ್ತೆಯಾಗಿ ರಾಜ್ಯವನ್ನು ಸಾರುತ್ತಿರುವಾಗ, ಕೋಪದ ಈ ಪಾತ್ರೆಗಳಲ್ಲಿರುವುದನ್ನು ಯೋಹಾನ ವರ್ಗವು ನಿರ್ಭೀತಿಯಿಂದ ಪ್ರಕಟಿಸುತ್ತದೆ. (ಮತ್ತಾಯ 24:14; ಪ್ರಕಟನೆ 14:6, 7) ಹೀಗೆ, ಅವರ ಇಬ್ಬಗೆಯ ಸಂದೇಶವು ಮಾನವಕುಲಕ್ಕೆ ವಿಮೋಚನೆಯನ್ನು ಸಾರುವ ಶಾಂತಿದಾಯಕವೂ, ಆದರೆ “ನಮ್ಮ ದೇವರು ಮುಯ್ಯಿತೀರಿಸುವ ದಿನ”ದ ಎಚ್ಚರಿಕೆಯಲ್ಲಿ ಯುದ್ಧದೋಪಾದಿಯೂ ಇರುವುದು.—ಯೆಶಾಯ 61:1, 2.

21. ದೇವರ ಕೋಪದ ಮೊದಲ ನಾಲ್ಕು ಪಾತ್ರೆಗಳ ಗುರಿಗಳು ಮೊದಲ ನಾಲ್ಕು ತುತೂರಿ ಊದುವಿಕೆಗಳಿಗೆ ಹೇಗೆ ಸರಿಹೋಲುತ್ತವೆ, ಮತ್ತು ಅವುಗಳು ಎಲ್ಲಿ ಭಿನ್ನವಾಗಿವೆ?

21 ದೇವರ ಕೋಪದ ಮೊದಲ ನಾಲ್ಕು ಪಾತ್ರೆಗಳ ಗುರಿಗಳು, ನಾಲ್ಕು ತುತೂರಿ ಊದುವಿಕೆಗಳಿಗೆ ಸರಿಹೋಲುತ್ತವೆ, ಅಂದರೆ ಭೂಮಿ, ಸಮುದ್ರ, ನದಿಗಳು ಮತ್ತು ನೀರಿನ ಬುಗ್ಗೆಗಳು, ಮತ್ತು ಆಕಾಶಸ್ಥ ಬೆಳಕಿನ ಮೂಲಗಳು. (ಪ್ರಕಟನೆ 8:1-12) ಆದರೆ ತುತೂರಿಯ ಊದುವಿಕೆಗಳಿಂದ “ಮೂರನೆಯ ಒಂದು ಭಾಗ”ದ ಮೇಲೆ ಬಾಧೆಗಳು ಪ್ರಕಟಿಸಲ್ಪಡುವಾಗ, ದೇವರ ಕೋಪದ ಪಾತ್ರೆಗಳಿಂದ ಹೊಯ್ಯುವುದು ಸಮಗ್ರವಾಗಿ ಬಾಧಿಸಲ್ಪಡುತ್ತದೆ. ಆದಕಾರಣ, “ಮೂರನೆಯ ಒಂದು ಭಾಗ” ವಾದ ಕ್ರೈಸ್ತಪ್ರಪಂಚವು ಕರ್ತನ ದಿನದಲ್ಲಿ ಮೊದಲನೆಯ ಗಮನವನ್ನು ಪಡೆದಿರುವಂತೆ, ಯೆಹೋವನ ರೇಗಿಸುವ ನ್ಯಾಯತೀರ್ಪಿನ ಸಂದೇಶಗಳಿಂದ ಮತ್ತು ಅವುಗಳು ತರುವ ಶೋಕಗಳಿಂದ ಸೈತಾನನ ವ್ಯವಸ್ಥೆಯ ಯಾವುದೇ ಒಂದು ಭಾಗವು ಬಾಧಿಸಲ್ಪಡುವುದರಿಂದ ವಿನಾಯಿತಿ ಪಡೆದಿರುವುದಿಲ್ಲ.

22. ಕೊನೆಯ ಮೂರು ತುತೂರಿ ಊದುವಿಕೆಗಳು ಹೇಗೆ ಭಿನ್ನವಾಗಿದ್ದವು, ಮತ್ತು ಯೆಹೋವನ ಕೋಪದ ಕೊನೆಯ ಮೂರು ಪಾತ್ರೆಗಳಿಗೆ ಅವು ಹೇಗೆ ಸಂಬಂಧಿಸುತ್ತವೆ?

22 ಕೊನೆಯ ಮೂರು ತುತೂರಿಯ ಊದುವಿಕೆಗಳು ಭಿನ್ನವಾಗಿದ್ದವು, ಯಾಕಂದರೆ ಅವುಗಳನ್ನು ವಿಪತ್ತುಗಳೆಂದು ಕರೆಯಲಾಗಿದೆ. (ಪ್ರಕಟನೆ 8:13; 9:12) ಇವುಗಳಲ್ಲಿ ಮೊದಲ ಎರಡು ತುತೂರಿಯ ಊದುವಿಕೆಗಳು ನಿರ್ದಿಷ್ಟವಾಗಿ ಮಿಡಿತೆಗಳನ್ನು ಮತ್ತು ಕುದುರೆ ದಂಡಿನವರನ್ನೊಳಗೊಂಡಿದ್ದರೆ, ಮೂರನೆಯದ್ದಾದರೋ ಯೆಹೋವನ ರಾಜ್ಯದ ಜನನವನ್ನು ಪ್ರಸ್ತಾಪಿಸಿತು. (ಪ್ರಕಟನೆ 9:1-21; 11:15-19) ನಾವು ನೋಡಲಿರುವಂತೆ, ಅವನ ರೋಷದ ಕೊನೆಯ ಮೂರು ಪಾತ್ರೆಗಳು ಇವುಗಳ ಕೆಲವು ಅಂಶಗಳನ್ನು ಆವರಿಸುತ್ತವಾದರೂ, ಮೂರು ವಿಪತ್ತುಗಳಿಂದ ಇವುಗಳು ಕೊಂಚಮಟ್ಟಿಗೆ ಭಿನ್ನವಾಗಿವೆ. ಯೆಹೋವನ ಕೋಪದ ಪಾತ್ರೆಗಳಿಂದ ಹೊಯ್ಯುವಿಕೆಯು ತರುವ ಫಲಿತಾಂಶದ ನಾಟಕೀಯ ಹೊರಗೆಡಹುವಿಕೆಗಳ ಕಡೆಗೆ ನಾವೀಗ ನಿಕಟವಾಗಿ ಗಮನ ಕೊಡೋಣ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 ಆಸಕ್ತಿಕರವಾಗಿಯೇ, 1921 ರಲ್ಲಿ ಯೋಹಾನ ವರ್ಗವು ಬೈಬಲ್‌ ಅಧ್ಯಯನ ಸಹಾಯಕವಾದ ದ ಹಾರ್ಪ್‌ ಆಫ್‌ ಗಾಡ್‌ ಪುಸ್ತಕವನ್ನು ಬಿಡುಗಡೆಗೊಳಿಸಿತು, ಇದರ ಪ್ರಸರಣವು 50 ಲಕ್ಷಗಳಿಗಿಂತಲೂ ಅಧಿಕ ಪ್ರತಿಗಳು 20 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಆಯಿತು. ಅದು ಹೆಚ್ಚು ಅಭಿಷಿಕ್ತ ಹಾಡುಗಾರರನ್ನು ತರಲು ಸಹಾಯಮಾಡಿತು.

[ಅಧ್ಯಯನ ಪ್ರಶ್ನೆಗಳು]