ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭರವಸೆ ಕೊಡುವ ಬೋಧನೆಗಳು

ಭರವಸೆ ಕೊಡುವ ಬೋಧನೆಗಳು

ದೇವರು ಭವಿಷ್ಯದಲ್ಲಿ ತುಂಬ ಬದಲಾವಣೆಗಳನ್ನು ಮಾಡ್ತಾರೆ. ಈಗ ನಮ್ಗಿರೋ ಕಷ್ಟಗಳನ್ನೆಲ್ಲ ತೆಗೆದು ಹಾಕಿ ತುಂಬ ಬೇಗ ಈ ಭೂಮಿಯನ್ನ ಸುಂದರ ತೋಟವಾಗಿ ಮಾಡ್ತಾರೆ. (ಕೀರ್ತನೆ 37:11) ದೇವರು ಹೇಳಿರೋ ಈ ಮಾತನ್ನು ನಂಬಬಹುದಾ? ಖಂಡಿತ. ಯಾಕಂದ್ರೆ “ಮನುಷ್ಯರ ತರ ದೇವರು ಸುಳ್ಳು ಹೇಳಲ್ಲ.” (ಅರಣ್ಯಕಾಂಡ 23:19) ದೇವರು ನಮಗಾಗಿ ಮಾಡುವ ಕೆಲವು ಬದಲಾವಣೆಗಳ ಬಗ್ಗೆ ಈಗ ನೋಡೋಣ.

ದೇವರು ಕೆಟ್ಟ ಜನರನ್ನು ನಾಶ ಮಾಡ್ತಾರೆ

“ದುಷ್ಟ ಕಳೆಗಳ ಹಾಗೆ ಮೊಳಕೆ ಒಡೆಯೋದೂ ತಪ್ಪು ಮಾಡೋರೆಲ್ಲ ಚೆನ್ನಾಗಿ ಬೆಳೆಯೋದೂ ಶಾಶ್ವತವಾಗಿ ನಾಶ ಆಗೋಕೇ.”—ಕೀರ್ತನೆ 92:7.

ಹಿಂದಿನ ಲೇಖನದಲ್ಲಿ ಕಲಿತ ಹಾಗೆ, ಕೆಟ್ಟತನ ಹೆಚ್ಚಾಗೋದನ್ನು ನೋಡಿ ನಾವು ಆಶ್ಚರ್ಯ ಪಡಬೇಕಾಗಿಲ್ಲ. ಯಾಕಂದ್ರೆ ಇದ್ರ ಬಗ್ಗೆ ಬೈಬಲ್‌ ಮುಂಚೆನೇ ತಿಳಿಸಿದೆ. “ಕೊನೇ ದಿನಗಳಲ್ಲಿ” ಇಂಥವರೇ ಹೆಚ್ಚಾಗಿರ್ತಾರೆ ಅಂತ 2 ತಿಮೊತಿ 3:1-5 ಹೇಳುತ್ತೆ. ಕೊನೇ ದಿನಗಳಲ್ಲಿ ಏನು ಕೊನೆಯಾಗುತ್ತೆ? ದೇವರ ಮಾತನ್ನು ಕೇಳ್ದೇ ಇರುವವರು ಕೊನೆಯಾಗ್ತಾರೆ. ಅಂದ್ರೆ, ತಮ್ಮ ಜೀವನವನ್ನು ಬದಲಾಯಿಸದೆ ಕೆಟ್ಟತನ ಮಾಡ್ತಾ ಇರುವವರು ಬೇಗ ನಾಶ ಆಗ್ತಾರೆ. ದೇವರ ಮಾತು ಕೇಳುವವರು ಮಾತ್ರ ಈ ಭೂಮಿಯಲ್ಲಿ ಇರ್ತಾರೆ. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:29.

ದೇವರು ಸೈತಾನನನ್ನು ನಾಶ ಮಾಡ್ತಾರೆ

“ಶಾಂತಿಯನ್ನ ಕೊಡೋ ದೇವರು ಬೇಗ ಸೈತಾನನನ್ನ . . . ಜಜ್ಜಿಬಿಡ್ತಾನೆ.”—ರೋಮನ್ನರಿಗೆ 16:20.

ಸೈತಾನ ಮತ್ತು ಕೆಟ್ಟ ದೇವದೂತರನ್ನು ನಾಶ ಮಾಡಿದ ಮೇಲೆ ಇಡೀ ಭೂಮಿ ಶಾಂತಿ ಸಮಾಧಾನದಿಂದ ಇರುತ್ತೆ. ಅದಕ್ಕೆ “[ನಿಮ್ಮನ್ನು] ಯಾರೂ ಹೆದರಿಸಲ್ಲ” ಅಂತ ದೇವರು ಮಾತು ಕೊಟ್ಟಿದ್ದಾರೆ.—ಮೀಕ 4:4.

ಕಾಯಿಲೆ ಮತ್ತು ಸಾವನ್ನು ದೇವರು ತೆಗೆದುಹಾಕುತ್ತಾರೆ

“ದೇವರ ಡೇರೆ ಜನ್ರ ಜೊತೆ ಇದೆ . . . ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ.”—ಪ್ರಕಟನೆ 21:3, 4.

ಸೈತಾನ ಮತ್ತು ಆದಾಮ ಹವ್ವ ಮಾಡಿದ ಪಾಪದ ಪರಿಣಾಮ ಮತ್ತು ನಮ್ಮಲ್ಲಿರೋ ಎಲ್ಲ ಕುಂದುಕೊರತೆಗಳನ್ನು ದೇವರು ತೆಗೆದುಹಾಕ್ತಾರೆ. ಆಗ ನಮಗೆ ಕಾಯಿಲೆ-ಕಷ್ಟ ಇರಲ್ಲ, ನಾವ್ಯಾರೂ ಸಾಯಲ್ಲ. ದೇವರನ್ನು ಪ್ರೀತಿಸುವವರು, ಆತನ ಮಾತನ್ನು ಕೇಳುವವರು ಶಾಶ್ವತವಾಗಿ ಬದುಕ್ತಾರೆ. ಆದ್ರೆ ಅವ್ರು ಎಲ್ಲಿ ಬದುಕ್ತಾರೆ?

ದೇವರು ಭೂಮಿಯನ್ನು ಸುಂದರ ತೋಟವಾಗಿ ಮಾಡ್ತಾರೆ

“ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ, ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.”—ಯೆಶಾಯ 35:1.

ದೇವರು ದುಷ್ಟರನ್ನು ನಾಶಮಾಡಿ ಭೂಮಿಯನ್ನು ಸುಂದರ ತೋಟವಾಗಿ ಮಾಡ್ತಾರೆ. ಆಗ ಎಲ್ಲೆಲ್ಲೂ ಗಿಡಮರಗಳು, ಹೂದೋಟಗಳು, ಕಣ್ಸೆಳೆಯೋ ಹಸಿರು ಹಾಸಿನ ಹುಲ್ಲುಗಾವಲುಗಳೇ ಇರುತ್ತೆ. ಎಲ್ಲಾ ಕಡೆ ಆಹಾರ ಸಮೃದ್ಧವಾಗಿ ಇರುತ್ತೆ. (ಕೀರ್ತನೆ 72:16) ಕೆರೆ, ನದಿ, ಸಮುದ್ರಗಳಲ್ಲಿ ನೀರು ಶುದ್ಧವಾಗಿರುತ್ತೆ. ನೀರಲ್ಲಿರೋ ಜೀವಿಗಳಿಗೂ ಹಾನಿಯಾಗಲ್ಲ. ಅಲ್ಲಿ “ಮಾಲಿನ್ಯ” ಅನ್ನೋ ಪದಾನೇ ನಮ್ಮ ಕಿವಿಗೆ ಬೀಳಲ್ಲ! ಎಲ್ರಿಗೂ ಸ್ವಂತ ಮನೆ ಇರುತ್ತೆ. ಯಾರೂ ನಮ್ಗೆ ಮನೆ ಇಲ್ಲ, ಊಟ ಇಲ್ಲ, ನಾವು ಬಡವರು ಅಂತ ಹೇಳೋ ಪರಿಸ್ಥಿತಿನೇ ಬರಲ್ಲ.—ಯೆಶಾಯ 65:21, 22.

ತೀರಿ ಹೋದವರನ್ನು ದೇವರು ಮತ್ತೆ ಬದುಕಿಸುತ್ತಾರೆ

“ಮತ್ತೆ ಬದುಕೋ ತರ ದೇವರು ಮಾಡ್ತಾನೆ.”—ಅಪೊಸ್ತಲರ ಕಾರ್ಯ 24:15.

ಸತ್ತು ಹೋಗಿರೋ ನಿಮ್ಮ ಪ್ರಿಯರನ್ನು ಮತ್ತೆ ನೋಡೋಕೆ ಇಷ್ಟಪಡ್ತೀರಾ? ನಮ್ಮ ಸರ್ವಶಕ್ತ ದೇವರು ನಿಮಗಾಗಿ ಅವರನ್ನು ಪರದೈಸ್‌ ಭೂಮಿಯಲ್ಲಿ ಮತ್ತೆ ಎಬ್ಬಿಸುತ್ತಾರೆ. ನೀವು ಅವ್ರನ್ನು ಅಲ್ಲಿ ಭೇಟಿಯಾದಾಗ ಎಷ್ಟು ಖುಷಿಯಾಗುತ್ತೆ ಅಲ್ವಾ! ಆದ್ರೆ ಇದು ನಿಜ ಆಗುತ್ತೆ ಅಂತ ಏನು ಗ್ಯಾರಂಟಿ? ಇದನ್ನು ನಂಬೋಕೆ ಬೈಬಲಲ್ಲಿ ಕೆಲವು ಆಧಾರಗಳಿವೆ. ಸತ್ತು ಹೋಗಿರೊ ಕೆಲವರನ್ನು ಯೇಸು ಮತ್ತೆ ಬದುಕಿಸಿದ್ರು. ಇದನ್ನು ಎಷ್ಟೋ ಜನ ನೋಡಿದ್ದಾರೆ.—ಲೂಕ 8:49-56; ಯೋಹಾನ 11:11-14, 38-44.