ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲುಗಾರನೊಂದಿಗೆ ಸೇವೆಸಲ್ಲಿಸುವುದು

ಕಾವಲುಗಾರನೊಂದಿಗೆ ಸೇವೆಸಲ್ಲಿಸುವುದು

ಕಾವಲುಗಾರನೊಂದಿಗೆ ಸೇವೆಸಲ್ಲಿಸುವುದು

“ಕರ್ತನೇ [“ಯೆಹೋವನೇ,” NW] ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.”—ಯೆಶಾಯ 21:8.

1. ಯೆಹೋವನು ಯಾವ ಮಹಾನ್‌ ವಾಗ್ದಾನಗಳಿಗೆ ಸ್ವತಃ ಸಾಕ್ಷಿಯಾಗಿದ್ದಾನೆ?

ಯೆಹೋವನು ಮಹಾ ಉದ್ದೇಶಸಾಧಕನಾಗಿದ್ದಾನೆ. ತನ್ನ ಸ್ವಂತ ನಾಮವನ್ನು ಪವಿತ್ರೀಕರಿಸಿ, ಪ್ರಮೋದವನ ಭೂಮಿಯ ಮೇಲೆ ಮಹಿಮಾಭರಿತ ರಾಜ್ಯದಾಳಿಕೆಯನ್ನು ಸ್ಥಾಪಿಸಬೇಕೆಂಬುದು ಆತನ ಮಹಾನ್‌ ಉದ್ದೇಶವಾಗಿದೆ. ಈ ಉದ್ದೇಶವನ್ನು ಭಂಗಗೊಳಿಸಲು ಪಿಶಾಚನಾದ ಸೈತಾನನಾಗಿ ಪರಿಣಮಿಸಿದ ಆ ದಂಗೆಕೋರ ದೇವದೂತನಿಂದಲೂ ಸಾಧ್ಯವಿಲ್ಲ. (ಮತ್ತಾಯ 6:9, 10) ಆ ರಾಜ್ಯದಾಳಿಕೆಯ ಕೆಳಗೆ, ಮಾನವಕುಲವು ನಿಜವಾಗಿಯೂ ಆಶೀರ್ವದಿಸಲ್ಪಡುವುದು. ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” ಆನಂದಿತರೂ ಐಕ್ಯರೂ ಆದ ಮಾನವರು ನಿತ್ಯತೆಯ ವರೆಗೂ ಶಾಂತಿ ಮತ್ತು ಏಳಿಗೆಯನ್ನು ಅನುಭವಿಸುವರು. (ಯೆಶಾಯ 25:8; 65:17-25) ಯೆಹೋವನು ತನ್ನ ಎಲ್ಲ ಮಹಾನ್‌ ವಾಗ್ದಾನಗಳಿಗೆ ಸ್ವತಃ ಸಾಕ್ಷಿಯಾಗಿದ್ದಾನೆ!

2. ಯಾವ ಮಾನವ ಸಾಕ್ಷಿಗಳನ್ನು ಯೆಹೋವನು ಎಬ್ಬಿಸಿದ್ದಾನೆ?

2 ಹಾಗಿದ್ದರೂ, ಮಹಾನ್‌ ಸೃಷ್ಟಿಕರ್ತನಿಗೆ ಮಾನವ ಸಾಕ್ಷಿಗಳೂ ಇದ್ದಾರೆ. ಹೇಬೆಲನೊಂದಿಗೆ ಆರಂಭಿಸುತ್ತಾ ಕ್ರೈಸ್ತ ಪೂರ್ವ ಸಮಯಗಳಲ್ಲಿ ‘ಮೇಘದೋಪಾದಿಯಲ್ಲಿದ್ದ ಸಾಕ್ಷಿಗಳು,’ ಭಾರಿ ಕಷ್ಟತೊಂದರೆಗಳ ಎದುರಿನಲ್ಲೂ ತಾಳ್ಮೆಯ ಓಟವನ್ನು ಓಡಿದರು. ಅವರ ಅತ್ಯುತ್ಕೃಷ್ಟ ಮಾದರಿಯು ಇಂದಿನ ನಿಷ್ಠಾವಂತ ಕ್ರೈಸ್ತರಿಗೆ ಉತ್ತೇಜನವನ್ನು ನೀಡುತ್ತದೆ. ಒಬ್ಬ ಧೈರ್ಯವಂತ ಸಾಕ್ಷಿಯಾಗಿರುವುದರಲ್ಲಿ ಕ್ರಿಸ್ತ ಯೇಸು ಅತ್ಯುತ್ತಮ ಮಾದರಿಯಾಗಿದ್ದಾನೆ. (ಇಬ್ರಿಯ 11:1–12:2) ಪೊಂತ್ಯ ಪಿಲಾತನ ಮುಂದೆ ಅವನು ನೀಡಿದ ಅಂತಿಮ ಸಾಕ್ಷಿಯನ್ನು ತುಸು ಜ್ಞಾಪಿಸಿಕೊಳ್ಳಿರಿ. ಯೇಸು ಪ್ರಕಟಿಸಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಸಾ.ಶ. 33ರಿಂದ ಈ ಸಾ.ಶ. 2000 ಇಸವಿಯ ವರೆಗೆ, ಹುರುಪುಳ್ಳ ಸಾಕ್ಷಿಗಳು “ದೇವರ ಮಹತ್ತುಗಳ” ಕುರಿತು ಧೈರ್ಯದಿಂದ ಪ್ರಕಟಿಸುತ್ತಾ, ಯೇಸುವಿನ ಮಾದರಿಗನುಗುಣವಾಗಿ ಸಾರುವುದನ್ನು ಮುಂದುವರಿಸಿದ್ದಾರೆ.—ಅ. ಕೃತ್ಯಗಳು 2:11.

ಬಾಬೆಲ್‌—ಪಂಥಗಳ ಆರಂಭ

3. ಯೆಹೋವನ ಮತ್ತು ಆತನ ಚಿತ್ತದ ಕುರಿತು ನೀಡಲಾಗುತ್ತಿರುವ ಸಾಕ್ಷಿಗೆ ಸೈತಾನನು ಯಾವ ವಿಧದಲ್ಲಿ ವಿರೋಧವನ್ನು ತೋರಿಸಿದ್ದಾನೆ?

3 ಮಹಾ ವೈರಿಯಾಗಿರುವ ಪಿಶಾಚನಾದ ಸೈತಾನನು, ಸಹಸ್ರಾರು ವರ್ಷಗಳಿಂದಲೂ ದೇವರ ಸಾಕ್ಷಿಗಳ ಸಾಕ್ಷಿಕಾರ್ಯಕ್ಕೆ ಅಪಖ್ಯಾತಿಯನ್ನು ತರಲು ದುಷ್ಟ ಮಾರ್ಗಗಳನ್ನು ಪ್ರಯೋಗಿಸಿದ್ದಾನೆ. “ಸುಳ್ಳಿಗೆ ಮೂಲಪುರುಷ”ನಾಗಿರುವ ಈ “ಮಹಾ ಘಟಸರ್ಪನು . . .  ಪುರಾತನ ಸರ್ಪವು,” “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ವುದರಲ್ಲಿ ತೊಡಗಿದ್ದಾನೆ. ವಿಶೇಷವಾಗಿ ಈ ಕಡೇ ದಿವಸಗಳಲ್ಲಿ “ದೇವರ ಆಜ್ಞೆಗಳನ್ನು ಕೈಕೊಂಡು ನಡೆ”ಯುವವರ ವಿರುದ್ಧ ಅವನು ಪಟ್ಟುಬಿಡದೆ ಕಾದಾಡುತ್ತಿದ್ದಾನೆ.—ಯೋಹಾನ 8:44; ಪ್ರಕಟನೆ 12:9, 17.

4. ಮಹಾ ಬಾಬೆಲಿನ ಆರಂಭವು ಹೇಗಾಯಿತು?

4 ಸುಮಾರು 4,000 ವರ್ಷಗಳ ಹಿಂದೆ ನೋಹನ ದಿನದ ಜಲಪ್ರಳಯದ ತರುವಾಯ, “ಯೆಹೋವನಿಗೆ ವಿರುದ್ಧವಾಗಿ ಅತಿಸಾಹಸಿ ಬೇಟೆಗಾರ”ನಾಗಿದ್ದ ನಿಮ್ರೋದನನ್ನು ಸೈತಾನನು ಎಬ್ಬಿಸಿದನು. (ಆದಿಕಾಂಡ 10:9, 10, NW) ನಿಮ್ರೋದನ ಮಹಾ ನಗರವಾದ ಬಾಬಿಲೋನ್‌ (ಬಾಬೆಲ್‌) ಪೈಶಾಚಿಕ ಧರ್ಮದ ಕೇಂದ್ರಸ್ಥಾನವಾಯಿತು. ಯೆಹೋವನು ಬಾಬೆಲಿನ ಬುರುಜನ್ನು ಕಟ್ಟುತ್ತಿದ್ದವರ ಭಾಷೆಯನ್ನು ಗಲಿಬಿಲಿಗೊಳಿಸಿದಾಗ, ಜನರು ಭೂಮಿಯ ಎಲ್ಲೆಡೆಯೂ ಚೆದರಿಹೋದರು. ಹೋಗುವಾಗ ಅವರು ತಮ್ಮೊಂದಿಗೆ ತಮ್ಮ ಸುಳ್ಳು ಧರ್ಮವನ್ನು ಸಹ ಕೊಂಡೊಯ್ದರು. ಹೀಗೆ ಬಾಬೆಲ್‌ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿ ಪರಿಣಮಿಸಿತು. ಮತ್ತು ನಾವು ಪ್ರಕಟನೆಯ ಪುಸ್ತಕದಲ್ಲಿ ಓದುವಂತೆ ಅದು ಮಹಾ ಬಾಬೆಲ್‌ ಎಂಬ ಹೆಸರನ್ನೂ ಪಡೆಯಿತು. ಆ ಪುಸ್ತಕವು ಈ ಪುರಾತನ ಧಾರ್ಮಿಕ ವ್ಯವಸ್ಥೆಯ ಸರ್ವನಾಶವನ್ನು ಮುಂತಿಳಿಸುತ್ತದೆ.—ಪ್ರಕಟನೆ 17:5; 18:21.

ಸಾಕ್ಷಿಗಳ ಒಂದು ಜನಾಂಗ

5. ಯೆಹೋವನು ಯಾವ ಜನಾಂಗವನ್ನು ತನ್ನ ಸಾಕ್ಷಿಯಾಗಿರುವಂತೆ ಸಂಘಟಿಸಿದನು, ಆದರೆ ಅದು ದೇಶಭ್ರಷ್ಟರಾಗುವಂತೆ ಆತನು ಏಕೆ ಅನುಮತಿಸಿದನು?

5 ನಿಮ್ರೋದನ ನಂತರ ಸುಮಾರು 500 ವರ್ಷಗಳ ಬಳಿಕ, ಯೆಹೋವನು ನಂಬಿಗಸ್ತನಾಗಿದ್ದ ಅಬ್ರಹಾಮನ ಸಂತತಿಯವರನ್ನು ಇಸ್ರಾಯೇಲ್‌ ಜನಾಂಗವಾಗಿ ಸಂಘಟಿಸಿ, ಅವರು ಭೂಮಿಯಲ್ಲಿ ಆತನ ಸಾಕ್ಷಿಗಳಾಗಿ ಸೇವೆಮಾಡುವಂತೆ ನೇಮಿಸಿದನು. (ಯೆಶಾಯ 43:10, 12) ಆ ಜನಾಂಗದ ಭಾಗವಾಗಿದ್ದ ಅನೇಕರು ಯೆಹೋವನಿಗೆ ನಿಷ್ಠಾವಂತರಾಗಿ ಸೇವೆಸಲ್ಲಿಸಿದರು. ಆದರೆ ಶತಮಾನಗಳು ಗತಿಸಿದಂತೆ, ಇಸ್ರಾಯೇಲ್‌ ಜನರು ಅಕ್ಕಪಕ್ಕದಲ್ಲಿದ್ದ ಜನಾಂಗದವರ ಸುಳ್ಳು ನಂಬಿಕೆಗಳಿಂದ ಭ್ರಷ್ಟಗೊಂಡ ಕಾರಣ, ಯೆಹೋವನ ಒಡಂಬಡಿಕೆಯ ಜನರು ಆತನನ್ನು ತ್ಯಜಿಸಿ ಸುಳ್ಳು ದೇವರುಗಳ ಕಡೆಗೆ ತಿರುಗಿದರು. ಆದಕಾರಣ ಸಾ.ಶ.ಪೂ. 607ರಲ್ಲಿ, ರಾಜ ನೆಬೂಕದ್ನೆಚ್ಚರನ ನೇತೃತ್ವದಲ್ಲಿ ಬಾಬೆಲಿನ ಸೇನೆಗಳು ಯೆರೂಸಲೇಮ್‌ ಮತ್ತು ಅದರ ದೇವಾಲಯವನ್ನು ನಾಶಪಡಿಸಿ, ಯೆಹೂದ್ಯರಲ್ಲಿ ಹೆಚ್ಚಿನವರನ್ನು ದೇಶಭ್ರಷ್ಟರಾಗಿ ಬಾಬೆಲಿಗೆ ಕೊಂಡೊಯ್ದರು.

6. ಯೆಹೋವನ ಪ್ರವಾದನ ಕಾವಲುಗಾರನು ಯಾವ ಸುವಾರ್ತೆಯನ್ನು ಪ್ರಕಟಿಸಿದನು, ಮತ್ತು ಅದು ಯಾವಾಗ ನೆರವೇರಿತು?

6 ಇದು ಸುಳ್ಳು ಧರ್ಮಕ್ಕೆ ಎಂತಹ ಒಂದು ವಿಜಯವಾಗಿತ್ತು! ಆದರೆ, ಬಾಬೆಲಿನ ಆಧಿಪತ್ಯವು ಅಲ್ಪಕಾಲಿಕವಾಗಿತ್ತು. ಆ ಘಟನೆಯು ಸಂಭವಿಸುವ ಸುಮಾರು 200 ವರ್ಷಗಳ ಮುಂಚೆ, ಯೆಹೋವನು ಆಜ್ಞಾಪಿಸಿದ್ದು: “ಕಾವಲುಗಾರನನ್ನು ಇಡು, ನಡೆ; ಕಂಡದ್ದನ್ನು ತಿಳಿಸಲಿ.” ಈ ಕಾವಲುಗಾರನು ಯಾವ ಸುದ್ದಿಯನ್ನು ಪ್ರಕಟಿಸಿದನು? “ಬಾಬೆಲ್‌ ಬಿತ್ತು, ಬಿತ್ತು! ಅದರ ದೇವತಾವಿಗ್ರಹಗಳನ್ನು ಒಡೆದು ನೆಲಸಮಮಾಡಿಬಿಟ್ಟರು.” (ಯೆಶಾಯ 21:6, 9) ಸಾ.ಶ.ಪೂ. 539ರಲ್ಲಿ ಈ ಪ್ರವಾದನ ಘೋಷಣೆಯು ನೆರವೇರಿತು. ಬಲಾಢ್ಯವಾಗಿದ್ದ ಬಾಬೆಲ್‌ ಕುಸಿದುಬಿತ್ತು ಮತ್ತು ದೇವರ ಒಡಂಬಡಿಕೆಯ ಜನರು ಬೇಗನೆ ತಮ್ಮ ಸ್ವದೇಶಕ್ಕೆ ಹಿಂದಿರುಗಲು ಶಕ್ತರಾದರು.

7. (ಎ) ಯೆಹೋವನು ನೀಡಿದ ಶಿಸ್ತಿನಿಂದ ಯೆಹೂದ್ಯರು ಯಾವ ಪಾಠವನ್ನು ಕಲಿತರು? (ಬಿ) ದೇಶಭ್ರಷ್ಟತೆ ಮುಗಿದ ನಂತರ ಯೆಹೂದ್ಯರು ಯಾವ ಬಲೆಗಳಲ್ಲಿ ಸಿಕ್ಕಿಬಿದ್ದರು, ಮತ್ತು ಯಾವ ಪರಿಣಾಮದೊಂದಿಗೆ?

7 ಹಿಂದಿರುಗುತ್ತಿದ್ದ ಯೆಹೂದ್ಯರು ಮೂರ್ತಿಪೂಜೆ ಮತ್ತು ಪ್ರೇತಾತ್ಮವಾದವನ್ನು ತ್ಯಜಿಸುವುದರ ಪ್ರಮುಖತೆಯನ್ನು ಅನುಭವದಿಂದ ಕಲಿತುಕೊಂಡಿದ್ದರು. ಆದರೆ ವರ್ಷಗಳು ಗತಿಸಿದಂತೆ ಅವರು ಇತರ ಬಲೆಗಳಲ್ಲಿ ಸಿಕ್ಕಿಬಿದ್ದರು. ಕೆಲವರು ಗ್ರೀಕ್‌ ತತ್ವಜ್ಞಾನವೆಂಬ ಪಾಶದಲ್ಲಿ ಸಿಕ್ಕಿಕೊಂಡರು. ಇತರರು ದೇವರ ವಾಕ್ಯಕ್ಕಿಂತಲೂ ಮಾನವ ಸಂಪ್ರದಾಯಕ್ಕೆ ಹೆಚ್ಚಿನ ಪ್ರಮುಖತೆಯನ್ನು ನೀಡಿದರು. ಇನ್ನೂ ಕೆಲವರು ರಾಷ್ಟ್ರೀಯತೆ ಎಂಬ ಬೋನಿನಲ್ಲಿ ಸಿಕ್ಕಿಬಿದ್ದರು. (ಮಾರ್ಕ 7:13; ಅ. ಕೃತ್ಯಗಳು 5:37) ಯೇಸು ಜನಿಸುವ ಸಮಯದೊಳಗಾಗಿ, ಆ ಜನಾಂಗವು ಪುನಃ ಶುದ್ಧಾರಾಧನೆಯಿಂದ ದೂರ ಸರಿದಿತ್ತು. ಯೇಸು ಪ್ರಕಟಿಸಿದ ಸುವಾರ್ತೆಗೆ ವ್ಯಕ್ತಿಗತವಾಗಿ ಕೆಲವು ಯೆಹೂದ್ಯರು ಪ್ರತಿಕ್ರಿಯಿಸಿದರಾದರೂ, ಆ ಜನಾಂಗದ ಅಧಿಕಾಂಶ ಜನರು ಅವನನ್ನು ತಿರಸ್ಕರಿಸಿದರು ಮತ್ತು ಈ ಕಾರಣಕ್ಕಾಗಿ ದೇವರಿಂದ ತಿರಸ್ಕರಿಸಲ್ಪಟ್ಟರು. (ಯೋಹಾನ 1:9-12; ಅ. ಕೃತ್ಯಗಳು 2:36) ಇಸ್ರಾಯೇಲ್‌ ಜನಾಂಗವು ಇನ್ನು ಮುಂದೆ ದೇವರ ಸಾಕ್ಷಿಯಾಗಿರಲಿಲ್ಲ. ಸಾ.ಶ. 70ರಲ್ಲಿ ರೋಮನ್‌ ಸೇನೆಗಳ ಕೈಗಳಲ್ಲಿ ಯೆರೂಸಲೇಮ್‌ ಹಾಗೂ ಅದರ ದೇವಾಲಯವು ಪುನಃ ಧ್ವಂಸಗೊಳಿಸಲ್ಪಟ್ಟಿತು.—ಮತ್ತಾಯ 21:43.

8. ಯಾರು ಯೆಹೋವನ ಸಾಕ್ಷಿಯಾದರು, ಮತ್ತು ಈ ಸಾಕ್ಷಿಗೆ ಪೌಲನ ಎಚ್ಚರಿಕೆಯು ಏಕೆ ಸಮಯೋಚಿತವಾಗಿತ್ತು?

8 ಈ ಮಧ್ಯೆ ಕ್ರೈಸ್ತರನ್ನೊಳಗೊಂಡ ‘ದೇವರ ಇಸ್ರಾಯೇಲ್‌’ ಹುಟ್ಟಿತ್ತು ಮತ್ತು ಈಗ ಅದು ರಾಷ್ಟ್ರಗಳಿಗೆ ದೇವರ ಸಾಕ್ಷಿಯಾಗಿ ಕಾರ್ಯನಡೆಸಿತು. (ಗಲಾತ್ಯ 6:16) ಈ ಹೊಸದಾದ ಆತ್ಮಿಕ ಜನಾಂಗವನ್ನು ಭ್ರಷ್ಟಗೊಳಿಸಲು ಸೈತಾನನು ಬಹಳ ಬೇಗನೆ ಸಂಚುಹೂಡಿದನು. ಪ್ರಥಮ ಶತಮಾನದ ಅಂತ್ಯದೊಳಗಾಗಿ ಸಭೆಗಳಲ್ಲಿ ಪಂಥಾಭಿಮಾನದ ಪ್ರಭಾವವನ್ನು ನೋಡಬಹುದಾಗಿತ್ತು. (ಪ್ರಕಟನೆ 2:6, 14, 20) ಪೌಲನ ಎಚ್ಚರಿಕೆಯು ಸಮಯೋಚಿತವಾಗಿತ್ತು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”—ಕೊಲೊಸ್ಸೆ 2:8.

9. ಪೌಲನು ಎಚ್ಚರಿಕೆ ನೀಡಿದ್ದಂತೆಯೇ, ಯಾವ ಬೆಳವಣಿಗೆಗಳು ಕ್ರೈಸ್ತಪ್ರಪಂಚದ ಜನನಕ್ಕೆ ನಡೆಸಿದವು?

9 ಕಾಲಕ್ರಮೇಣ ಗ್ರೀಕ್‌ ತತ್ವಜ್ಞಾನ, ಬಾಬೆಲಿನ ಧಾರ್ಮಿಕ ವಿಚಾರಗಳು, ಮತ್ತು ತದನಂತರ ತಲೆಯೆತ್ತಿದ ವಿಕಾಸವಾದ ಹಾಗೂ ಬೈಬಲಿನ ಉಚ್ಚ ವಿಮರ್ಶೆಯಂತಹ ಮಾನವ ‘ಜ್ಞಾನವು,’ ಕ್ರೈಸ್ತರೆಂದು ಹೇಳಿಕೊಂಡ ಅನೇಕರ ಧರ್ಮವನ್ನು ಕಲುಷಿತಗೊಳಿಸಿತು. ಅದು ಪೌಲನು ಮುಂತಿಳಿಸಿದಂತೆಯೇ ಇತ್ತು: “ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.” (ಅ. ಕೃತ್ಯಗಳು 20:29, 30) ಈ ಧರ್ಮಭ್ರಷ್ಟತೆಯು ಕ್ರೈಸ್ತಪ್ರಪಂಚಕ್ಕೆ ಜನ್ಮನೀಡಿತು.

10. ಕ್ರೈಸ್ತಪ್ರಪಂಚದ ಭ್ರಷ್ಟ ಆರಾಧನಾ ರೀತಿಯಲ್ಲಿ ಎಲ್ಲರೂ ಒಳಗೂಡಿರಲಿಲ್ಲವೆಂಬುದನ್ನು ಯಾವ ಬೆಳವಣಿಗೆಗಳು ಸ್ಪಷ್ಟಗೊಳಿಸಿದವು?

10 ಶುದ್ಧಾರಾಧನೆಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದವರು, “ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ . . . ಹೋರಾಡ”ಬೇಕಿತ್ತು. (ಯೂದ 3) ಶುದ್ಧಾರಾಧನೆ ಮತ್ತು ಯೆಹೋವನ ಪರವಾಗಿ ನಡೆಯುತ್ತಿರುವ ಸಾಕ್ಷಿಕಾರ್ಯವು ಭೂಮಿಯಿಂದ ಕಣ್ಮರೆಯಾಗಿ ಹೋಗಲಿತ್ತೊ? ಇಲ್ಲ. ದಂಗೆಕೋರನಾದ ಸೈತಾನನ ಹಾಗೂ ಅವನ ಎಲ್ಲ ಕ್ರಿಯೆಗಳ ನಾಶನಕ್ಕಾಗಿ ಸಮಯವು ಹತ್ತಿರವಾದಂತೆ, ಕ್ರೈಸ್ತಪ್ರಪಂಚದಲ್ಲಿ ಆಚರಿಸಲ್ಪಡುತ್ತಿದ್ದ ಧರ್ಮಭ್ರಷ್ಟ ಆರಾಧನೆಯಲ್ಲಿ ಎಲ್ಲರೂ ಒಳಗೂಡಿರಲಿಲ್ಲವೆಂಬುದು ಸುಸ್ಪಷ್ಟವಾಯಿತು. 19ನೇ ಶತಮಾನದ ಕೊನೆಯ ಭಾಗದಲ್ಲಿ, ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಪಿಟ್ಸ್‌ಬರ್ಗ್‌ನಲ್ಲಿ ಪ್ರಾಮಾಣಿಕ ಹೃದಯದ ಬೈಬಲ್‌ ವಿದ್ಯಾರ್ಥಿಗಳು ಒಂದು ಗುಂಪನ್ನು ರಚಿಸಿದರು. ಈ ಗುಂಪು ದೇವರ ಆಧುನಿಕ ದಿನದ ಸಾಕ್ಷಿ ವರ್ಗದ ಕೇಂದ್ರಬಿಂದುವಾಯಿತು. ಈ ಪ್ರಚಲಿತ ಲೋಕ ವ್ಯವಸ್ಥೆಯ ಸಮಾಪ್ತಿಯು ತೀರ ಹತ್ತಿರವಾಗಿತ್ತೆಂಬ ಶಾಸ್ತ್ರೀಯ ಪುರಾವೆಯ ಕಡೆಗೆ ಈ ಕ್ರೈಸ್ತರು ಗಮನಸೆಳೆದರು. ಬೈಬಲ್‌ ಪ್ರವಾದನೆಗೆ ಅನುಗುಣವಾಗಿ, ಈ ಲೋಕದ “ಸಮಾಪ್ತಿ”ಯು 1914ರಲ್ಲಿ ಆರಂಭವಾಯಿತು ಮತ್ತು ಇದು ಒಂದನೆಯ ಜಾಗತಿಕ ಯುದ್ಧದ ಆರಂಭದಿಂದ ಗುರುತಿಸಲ್ಪಟ್ಟಿತು. (ಮತ್ತಾಯ 24:3, 7) ತದನಂತರ ಅದೇ ವರ್ಷದಲ್ಲೇ ಸೈತಾನನು ಮತ್ತು ಅವನ ಪೈಶಾಚಿಕ ತಂಡವು ಸ್ವರ್ಗದಿಂದ ದೊಬ್ಬಲ್ಪಟ್ಟಿತು ಎಂಬುದಕ್ಕೆ ಬಲವಾದ ಪುರಾವೆಯಿದೆ. ತೊಂದರೆಗಳಿಂದ ತುಂಬಿತುಳುಕುತ್ತಿರುವ ಈ 20ನೇ ಶತಮಾನವು, ಸೈತಾನನ ಚಟುವಟಿಕೆಯ ಕುರಿತು ಮತ್ತು ಸ್ವರ್ಗೀಯ ರಾಜ್ಯಾಧಿಕಾರದಲ್ಲಿ ಯೇಸುವಿನ ರಾಜಸದೃಶ ಸನ್ನಿಧಿಯ ಎದ್ದುಕಾಣುವ ನೆರವೇರಿಕೆಯ ಕುರಿತು ಸ್ಪಷ್ಟವಾದ ಪ್ರಮಾಣವನ್ನು ನೀಡಿದೆ.—ಮತ್ತಾಯ, 24 ಮತ್ತು 25ನೇ ಅಧ್ಯಾಯಗಳು; ಮಾರ್ಕ, 13ನೇ ಅಧ್ಯಾಯ; ಲೂಕ, 21ನೇ ಅಧ್ಯಾಯ; ಪ್ರಕಟನೆ 12:10, 12.

11. ಸೈತಾನನು ಏನನ್ನು ಮಾಡಲು ಪ್ರಯತ್ನಿಸಿದನು, ಆದರೆ ಅವನ ಪ್ರಯತ್ನವು ಹೇಗೆ ವಿಫಲವಾಯಿತು?

11 ಜೂನ್‌ 1918ರಲ್ಲಿ, ಈಗಾಗಲೇ ಹಲವಾರು ದೇಶಗಳಲ್ಲಿ ಸಾರುವ ಕಾರ್ಯವನ್ನು ನಡೆಸುತ್ತಿದ್ದ ಆ ಬೈಬಲ್‌ ವಿದ್ಯಾರ್ಥಿಗಳನ್ನು ತೊಡೆದುಹಾಕಲು ಸೈತಾನನು ತೀವ್ರ ಪ್ರಯತ್ನವನ್ನು ನಡೆಸಿದನು. ಅವರ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಎಂಬ ಕಾನೂನುಬದ್ಧ ಸಂಘಟನೆಯನ್ನೂ ನಾಶಪಡಿಸಲು ಅವನು ಪ್ರಯತ್ನಿಸಿದನು. ಸೊಸೈಟಿಯಲ್ಲಿ ಜವಾಬ್ದಾರಿಯ ಸ್ಥಾನಗಳಲ್ಲಿದ್ದ ಸಹೋದರರು, ಪ್ರಥಮ ಶತಮಾನದಲ್ಲಿ ರಾಜದ್ರೋಹದ ಆರೋಪವನ್ನು ಹೊತ್ತ ಯೇಸುವಿನಂತೆ ಸುಳ್ಳಾಗಿ ಆರೋಪಿಸಲ್ಪಟ್ಟು ಸೆರೆಯಲ್ಲಿ ಹಾಕಲ್ಪಟ್ಟರು. (ಲೂಕ 23:2) ಆದರೆ 1919ರಲ್ಲಿ ಈ ಅಧಿಕಾರಿಗಳು ಬಿಡುಗಡೆ ಹೊಂದಿದ ಕಾರಣ, ತಮ್ಮ ಶುಶ್ರೂಷೆಯಲ್ಲಿ ಮುಂದುವರಿಯಲು ಅವರಿಗೆ ಸಾಧ್ಯವಾಯಿತು. ತದನಂತರ ಅವರು ಪೂರ್ಣವಾಗಿ ದೋಷಮುಕ್ತಗೊಳಿಸಲ್ಪಟ್ಟರು.

ಚೆನ್ನಾಗಿ ಕಾವಲಿಡುವ “ಕಾವಲುಗಾರ”

12. ಇಂದು ಯೆಹೋವನ ಕಾವಲುಗಾರ ವರ್ಗದವರು ಯಾರಾಗಿದ್ದಾರೆ, ಮತ್ತು ಅವರು ಯಾವ ರೀತಿಯ ಮನೋಭಾವವುಳ್ಳವರಾಗಿದ್ದಾರೆ?

12 ಆದುದರಿಂದ ‘ಅಂತ್ಯಕಾಲವು’ ಆರಂಭಿಸಿದಾಗ, ಯೆಹೋವನು ತನ್ನ ಉದ್ದೇಶಗಳ ನೆರವೇರಿಕೆಗೆ ಸಂಬಂಧಿಸಿದ ಘಟನೆಗಳ ಕುರಿತು ಜನರಿಗೆ ಎಚ್ಚರಿಕೆ ನೀಡುವ ಕಾವಲುಗಾರನನ್ನು ಪುನಃ ಅಸ್ತಿತ್ವಕ್ಕೆ ತಂದಿದ್ದನು. (ದಾನಿಯೇಲ 12:4; 2 ತಿಮೊಥೆಯ 3:1) ಈ ದಿನದ ವರೆಗೂ ಆ ಕಾವಲುಗಾರನು ಅಂದರೆ ಅಭಿಷಿಕ್ತ ಕ್ರೈಸ್ತರಾಗಿರುವ ದೇವರ ಇಸ್ರಾಯೇಲ್‌, ಯೆಶಾಯನು ವರ್ಣಿಸಿದಂತಹ ಆ ಪ್ರವಾದನಾತ್ಮಕ ಕಾವಲುಗಾರನಂತೆಯೇ ನಡೆದುಕೊಳ್ಳುತ್ತಿದ್ದಾರೆ: “ಅವನು . . . ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ . . . ಬಳಿಕ ಅವನು ಸಿಂಹಧ್ವನಿಯಿಂದ—ಕರ್ತನೇ [“ಯೆಹೋವನೇ,” NW] ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.” (ಯೆಶಾಯ 21:7, 8) ಇವನು ತನ್ನ ನೇಮಕವನ್ನು ಗಂಭೀರವಾಗಿ ತೆಗೆದುಕೊಳ್ಳುವ ಕಾವಲುಗಾರನಾಗಿದ್ದಾನೆ!

13. (ಎ) ಯೆಹೋವನ ಕಾವಲುಗಾರನು ಯಾವ ಸಂದೇಶವನ್ನು ಘೋಷಿಸಿದ್ದಾನೆ? (ಬಿ) ಮಹಾ ಬಾಬೆಲಿನ ಪತನವಾಗಿದೆ ಎಂದು ನಾವು ಹೇಗೆ ಹೇಳಸಾಧ್ಯವಿದೆ?

13 ಈ ಕಾವಲುಗಾರನು ಏನನ್ನು ನೋಡಿದನು? ಯೆಹೋವನ ಕಾವಲುಗಾರನಂತಿರುವ ಆತನ ಸಾಕ್ಷಿ ವರ್ಗವು ಪುನಃ ಪ್ರಕಟಿಸಿದ್ದು: ‘ಇಗೋ, . . . ಬಾಬೆಲ್‌ ಬಿತ್ತು, ಬಿತ್ತು! ಅದರ ದೇವತಾ ವಿಗ್ರಹಗಳನ್ನು ಒಡೆದು [ಯೆಹೋವನು] ನೆಲಸಮಮಾಡಿಬಿಟ್ಟನು.’ (ಯೆಶಾಯ 21:9) ಈ ಬಾರಿ ಒಂದನೆಯ ಜಾಗತಿಕ ಯುದ್ಧದ ತರುವಾಯ ತನ್ನ ಅಧಿಕಾರದ ಸ್ಥಾನದಿಂದ ನೆಲಕ್ಕುರುಳಿರುವುದು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲೇ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! (ಯೆರೆಮೀಯ 50:1-3; ಪ್ರಕಟನೆ 14:8) ಮಹಾ ಯುದ್ಧವೆಂದು ಕರೆಯಲ್ಪಟ್ಟ ಈ ಯುದ್ಧವು ಕ್ರೈಸ್ತಪ್ರಪಂಚದಲ್ಲಿ ಆರಂಭವಾಯಿತು. ಎರಡೂ ಪಕ್ಷಗಳಲ್ಲಿದ್ದ ವೈದಿಕರು ತಮ್ಮ ಯುವ ಜನರಲ್ಲಿ ಬಲಿಷ್ಠರಾದವರನ್ನು ರಣರಂಗಕ್ಕೆ ಹೋಗುವಂತೆ ಉತ್ತೇಜಿಸುವ ಮೂಲಕ ಯುದ್ಧವೆಂಬ ಮಹಾಜ್ವಾಲೆಯನ್ನು ಮತ್ತಷ್ಟು ಉರಿಸಿದರು. ಎಂತಹ ಅವಮಾನ! ಬೈಬಲ್‌ ವಿದ್ಯಾರ್ಥಿಗಳೆಂದು ಜ್ಞಾತರಾಗಿದ್ದ ಯೆಹೋವನ ಸಾಕ್ಷಿಗಳು 1919ರಲ್ಲಿ ತಮ್ಮ ನಿಷ್ಕ್ರಿಯ ಸ್ಥಿತಿಯಿಂದ ಹೊರಬಂದು, ನಮ್ಮ ಕಾಲದ ವರೆಗೂ ಮುಂದುವರಿದಿರುವ ಲೋಕವ್ಯಾಪಕ ಸಾಕ್ಷಿಕಾರ್ಯವನ್ನು ಆರಂಭಿಸಿದರು. ಈ ಕಾರ್ಯವನ್ನು ತಡೆಯಲು ಮಹಾ ಬಾಬೆಲಿಗೆ ಸಾಧ್ಯವಾಗಲಿಲ್ಲ. (ಮತ್ತಾಯ 24:14) ಸಾ.ಶ.ಪೂ. ಆರನೆಯ ಶತಮಾನದಲ್ಲಿ ಇಸ್ರಾಯೇಲಿನ ಬಿಡುಗಡೆಯು ಪುರಾತನ ಬಾಬೆಲಿನ ಪತನವನ್ನು ಸೂಚಿಸಿದಂತೆಯೇ ಇದು ಸಹ ಮಹಾ ಬಾಬೆಲಿನ ಪತನವನ್ನು ಸೂಚಿಸಲಿತ್ತು.

14. ಯಾವ ಪತ್ರಿಕೆಯನ್ನು ಯೆಹೋವನ ಕಾವಲುಗಾರ ವರ್ಗವು ಪ್ರಧಾನವಾಗಿ ಉಪಯೋಗಿಸಿದೆ, ಮತ್ತು ಯೆಹೋವನು ಅದರ ಉಪಯೋಗವನ್ನು ಯಾವ ರೀತಿಯಲ್ಲಿ ಆಶೀರ್ವದಿಸಿದ್ದಾನೆ?

14 ಕಾವಲುಗಾರ ವರ್ಗವು ತನ್ನ ಕೆಲಸವನ್ನು ಯಾವಾಗಲೂ ಹುರುಪಿನಿಂದ ಮತ್ತು ಸರಿಯಾದುದನ್ನು ಮಾಡಬೇಕೆಂಬ ಬಲವಾದ ಅಪೇಕ್ಷೆಯಿಂದ ಮಾಡಿದೆ. ಜುಲೈ 1879ರಲ್ಲಿ ಬೈಬಲ್‌ ವಿದ್ಯಾರ್ಥಿಗಳು ನೀವು ಓದುತ್ತಿರುವ ಈ ಪತ್ರಿಕೆಯನ್ನು ಪ್ರಕಾಶಿಸಲು ಆರಂಭಿಸಿದರು. ಆಗ ಇದು, ಸೈಅನ್ಸ್‌ ವಾಚ್‌ ಟವರ್‌ ಆ್ಯಂಡ್‌ ಹೆರಾಲ್ಡ್‌ ಆಫ್‌ ಕ್ರೈಸ್ಟ್‌ಸ್‌ ಪ್ರೆಸನ್ಸ್‌ ಎಂಬುದಾಗಿ ಜ್ಞಾತವಾಗಿತ್ತು. 1879ರಿಂದ ಡಿಸೆಂಬರ್‌ 15, 1938ರ ವರೆಗೆ ಪ್ರಕಾಶಿಸಲ್ಪಟ್ಟ ಪ್ರತಿಯೊಂದು ಸಂಚಿಕೆಯ ಮುಖಪುಟದ ಮೇಲೆ, “‘ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು’?—ಯೆಶಾಯ 21:11” ಎಂಬ ಮಾತುಗಳು ಮುದ್ರಿಸಲ್ಪಟ್ಟಿದ್ದವು. * ದ ವಾಚ್‌ಟವರ್‌ ಪತ್ರಿಕೆಯು ನಂಬಿಗಸ್ತಿಕೆಯಿಂದ 120 ವರ್ಷಗಳಿಂದಲೂ ಲೋಕದ ಘಟನೆಗಳು ಹಾಗೂ ಅವುಗಳ ಪ್ರವಾದನಾತ್ಮಕ ಅರ್ಥದ ಮೇಲೂ ಕಾವಲನ್ನಿಟ್ಟಿದೆ. (2 ತಿಮೊಥೆಯ 3:1-5, 13) ದೇವರ ಕಾವಲುಗಾರ ವರ್ಗವು ಮತ್ತು ಅದರ ಸಂಗಾತಿಗಳಾದ “ಬೇರೆ ಕುರಿಗಳು” ಈ ಪತ್ರಿಕೆಯನ್ನು ಉಪಯೋಗಿಸಿ, ಕ್ರಿಸ್ತನ ರಾಜ್ಯದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವು ತೀರ ನಿಕಟವಾಗಿದೆ ಎಂಬುದನ್ನು ಅತ್ಯಧಿಕ ಹುರುಪಿನಿಂದ ಘೋಷಿಸಿದ್ದಾರೆ. (ಯೋಹಾನ 10:16) ಹಾಗಾದರೆ, ದ ವಾಚ್‌ಟವರ್‌ (ಕನ್ನಡದಲ್ಲಿ, ಕಾವಲಿನಬುರುಜು) ಪತ್ರಿಕೆಯೆಂಬ ಈ ಸಾಕ್ಷಿಯು ಯೆಹೋವನ ಆಶೀರ್ವಾದವನ್ನು ಪಡೆದಿದೆಯೊ? ಹೌದು, 1879ರಲ್ಲಿ ಅದರ ಪ್ರಥಮ ಸಂಚಿಕೆಯ 6,000 ಪ್ರತಿಗಳಿಂದ ಹಿಡಿದು, ಇಂದು ದ ವಾಚ್‌ಟವರ್‌ ಪತ್ರಿಕೆಯು 132 ಭಾಷೆಗಳಲ್ಲಿ 2,20,00,000ಕ್ಕಿಂತಲೂ ಹೆಚ್ಚಿನ ಪ್ರತಿಗಳನ್ನು ಲೋಕವ್ಯಾಪಕವಾಗಿ ವಿತರಿಸುವಷ್ಟರ ಮಟ್ಟಿಗೆ ಬೆಳೆದಿದೆ. ಈ 132 ಭಾಷೆಗಳಲ್ಲಿ 121 ಭಾಷೆಯ ಪತ್ರಿಕೆಗಳು ಒಂದೇ ಕಾಲದಲ್ಲಿ ಪ್ರಕಟಗೊಳ್ಳುತ್ತವೆ. ಭೂಮಿಯಲ್ಲಿ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಡುವ ಈ ಧಾರ್ಮಿಕ ಪತ್ರಿಕೆಯು, ಸತ್ಯ ದೇವರಾದ ಯೆಹೋವನ ನಾಮವನ್ನು ಮಹಿಮೆಪಡಿಸುವಂತಹ ಪತ್ರಿಕೆಯಾಗಿರುವುದು ಎಷ್ಟೊಂದು ಸೂಕ್ತವಾಗಿದೆ!

ಪ್ರಗತಿಪರವಾದ ಶುದ್ಧೀಕರಣ

15. ಯಾವ ಪ್ರಗತಿಪರವಾದ ಶುದ್ಧೀಕರಣವು 1914ರ ಮುಂಚೆಯೇ ಆರಂಭವಾಯಿತು?

15 ಇಸವಿ 1914ರಲ್ಲಿ ಕ್ರಿಸ್ತನು ತನ್ನ ಸ್ವರ್ಗೀಯ ಆಳ್ವಿಕೆಯನ್ನು ಆರಂಭಿಸುವ ಮುಂಚೆ ಸುಮಾರು 40 ವರ್ಷಗಳ ಅವಧಿಯಲ್ಲಿ, ಬೈಬಲ್‌ ವಿದ್ಯಾರ್ಥಿಗಳು ಶಿಶು ದೀಕ್ಷಾಸ್ನಾನ, ಮಾನವ ಪ್ರಾಣದ ಅಮರತ್ವ, ಶುದ್ಧಿಲೋಕ (ಪರ್ಗಟರಿ), ನರಕಾಗ್ನಿ ಯಾತನೆ, ಮತ್ತು ತ್ರಯೈಕ್ಯ ದೇವರಂತಹ ಕ್ರೈಸ್ತಪ್ರಪಂಚದ ಬೈಬಲೇತರ ಸಿದ್ಧಾಂತಗಳಿಂದ ಮುಕ್ತಗೊಳಿಸಲ್ಪಟ್ಟಿದ್ದರು. ಆದರೆ ಎಲ್ಲ ತಪ್ಪು ವಿಚಾರಗಳನ್ನು ತೊಡೆದುಹಾಕಲು ಇನ್ನೂ ಹೆಚ್ಚಿನ ಸಮಯವು ಬೇಕಾಯಿತು. ಉದಾಹರಣೆಗೆ 1920ಗಳ ಸಮಯದಲ್ಲಿ, ಅನೇಕ ಬೈಬಲ್‌ ವಿದ್ಯಾರ್ಥಿಗಳು ಕ್ರಾಸ್‌ ಮತ್ತು ಕ್ರೌನ್‌ (ಶಿಲುಬೆ ಮತ್ತು ಕಿರೀಟ)ಗಳಿದ್ದ ಪಿನ್‌ ಅನ್ನು ಧರಿಸುತ್ತಿದ್ದರು, ಹಾಗೂ ಕ್ರಿಸ್ಮಸ್‌ ಮತ್ತು ಇನ್ನಿತರ ವಿಧರ್ಮಿ ರಜಾದಿನಗಳನ್ನು ಆಚರಿಸುತ್ತಿದ್ದರು. ಆದರೆ ಆರಾಧನೆಯು ಶುದ್ಧವಾಗಿರಬೇಕಾದರೆ, ಮೂರ್ತಿಪೂಜೆಯ ಯಾವ ಸುಳಿವೂ ಇರಬಾರದು. ಬದಲಿಗೆ ಕ್ರೈಸ್ತ ನಂಬಿಕೆ ಹಾಗೂ ಜೀವನ ರೀತಿಯ ಏಕಮಾತ್ರ ಆಧಾರವು ದೇವರ ವಾಕ್ಯವಾದ ಪವಿತ್ರ ಬೈಬಲ್‌ ಆಗಿರತಕ್ಕದ್ದು. (ಯೆಶಾಯ 8:19, 20; ರೋಮಾಪುರ 15:4) ದೇವರ ವಾಕ್ಯಕ್ಕೆ ಏನನ್ನಾದರೂ ಕೂಡಿಸುವುದು ಇಲ್ಲವೆ ಅದರಿಂದ ತೆಗೆದುಹಾಕುವುದು ತಪ್ಪಾಗಿದೆ.—ಧರ್ಮೋಪದೇಶಕಾಂಡ 4:2; ಪ್ರಕಟನೆ 22:18, 19.

16, 17. (ಎ) ಕೆಲವು ದಶಕಗಳ ವರೆಗೆ ಕಾವಲುಗಾರ ವರ್ಗದವರು ಯಾವ ತಪ್ಪಾದ ವಿಚಾರವನ್ನು ಎತ್ತಿಹಿಡಿದರು? (ಬಿ) ‘ಐಗುಪ್ತದ’ “ಯಜ್ಞಪೀಠ” ಹಾಗೂ ‘ಸ್ತಂಭದ’ ಸರಿಯಾದ ವಿವರಣೆಯು ಏನಾಗಿದೆ?

16 ಈ ಮೇಲಿನ ತತ್ವವು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಮುಂದಿನ ಉದಾಹರಣೆಯು ತೋರಿಸುತ್ತದೆ. 1886ರಲ್ಲಿ ಸಿ.ಟಿ. ರಸಲರು ದ ಡಿವೈನ್‌ ಪ್ಲ್ಯಾನ್‌ ಆಫ್‌ ದಿ ಏಜಸ್‌ ಎಂಬ ಪುಸ್ತಕವನ್ನು ಪ್ರಕಟಿಸಿದರು. ಅದರಲ್ಲಿ ಮಾನವಕುಲದ ಆಯುಷ್ಯವನ್ನು ಐಗುಪ್ತದ ಮಹಾ ಪಿರಮಿಡ್‌ನೊಂದಿಗೆ ಜೋಡಿಸುವ ರೇಖಾಚೌಕವಿತ್ತು. ಖುಫು ಫರೋಹನ ಈ ಸ್ಮಾರಕ ಕಟ್ಟಡವು, ಯೆಶಾಯ 19:19, 20​ರಲ್ಲಿ ಸೂಚಿಸಲ್ಪಟ್ಟಿರುವ ಸ್ತಂಭವಾಗಿತ್ತೆಂದು ನೆನಸಲಾಗಿತ್ತು: “ಆ ದಿನದಲ್ಲಿ ಐಗುಪ್ತದೇಶದ ಮಧ್ಯೆ ಯೆಹೋವನಿಗೆ ಒಂದು ಯಜ್ಞಪೀಠವೂ ದೇಶದ ಎಲ್ಲೆಯಲ್ಲಿ ಯೆಹೋವನಿಗೆ ಒಂದು ಸ್ತಂಭವೂ ಇರುವವು. ಅವು ಐಗುಪ್ತದೇಶದಲ್ಲಿ ಸೇನಾಧೀಶ್ವರನಾದ ಯೆಹೋವನ ಗುರುತಾಗಿಯೂ ಸಾಕ್ಷಿಯಾಗಿಯೂ ಇರುವವು.” ಈ ಪಿರಮಿಡ್ಡಿಗೂ ಬೈಬಲಿಗೂ ಯಾವ ಸಂಬಂಧವಿರಸಾಧ್ಯವಿತ್ತು? ಉದಾಹರಣೆಗೆ, ಮತ್ತಾಯ 24:21​ರ ಆಗಿನ ತಿಳಿವಳಿಕೆಯ ಪ್ರಕಾರ, ‘ಮಹಾ ಸಂಕಟದ’ ಆರಂಭವನ್ನು ಈ ಮಹಾ ಪಿರಮಿಡ್ಡಿನಲ್ಲಿರುವ ಕೆಲವು ಹಾದುಹೋಗುವ ದಾರಿಗಳ ವಿಸ್ತಾರವು ಗುರುತಿಸುತ್ತದೆಂದು ನೆನಸಲಾಗಿತ್ತು. ತಾವು ಸ್ವರ್ಗಕ್ಕೆ ಹೋಗಲಿರುವ ದಿನದಂತಹ ವಿಷಯಗಳನ್ನು ನಿರ್ಧರಿಸಲು, ಬೈಬಲ್‌ ವಿದ್ಯಾರ್ಥಿಗಳಲ್ಲಿ ಕೆಲವರು ಆ ಪಿರಮಿಡ್ಡಿನ ಹಲವಾರು ಭಾಗಗಳನ್ನು ಅಳೆಯುವುದರಲ್ಲಿ ತಲ್ಲೀನರಾಗಿದ್ದರು!

17 ಬೈಬಲಿನಲ್ಲಿರುವ ಸಾಕ್ಷಿಯನ್ನು ದೃಢೀಕರಿಸಲು, ಯೆಹೋವನಿಗೆ ವಿಧರ್ಮಿ ಫರೋಹರಿಂದ ಕಟ್ಟಲ್ಪಟ್ಟಿರುವ ಮತ್ತು ಜ್ಯೋತಿಶ್ಶಾಸ್ತ್ರದ ಪೈಶಾಚಿಕ ಚಿಹ್ನೆಗಳಿರುವ ಯಾವುದೇ ಕಟ್ಟಡದ ಅಗತ್ಯವಿರಲಿಲ್ಲ ಎಂಬುದನ್ನು ನವೆಂಬರ್‌ 15 ಮತ್ತು ಡಿಸೆಂಬರ್‌ 1, 1928ರ ವಾಚ್‌ಟವರ್‌ ಸಂಚಿಕೆಗಳು ಸ್ಪಷ್ಟಪಡಿಸುವ ತನಕ, ಕಲ್ಲಿನ ರೂಪದ ಬೈಬಲ್‌ ಎಂಬುದಾಗಿ ಕರೆಯಲ್ಪಟ್ಟ ಈ ಕಟ್ಟಡವು ಕೆಲವು ದಶಕಗಳ ತನಕ ಬಹಳವಾಗಿ ಗೌರವಿಸಲ್ಪಟ್ಟಿತ್ತು. ಆದರೆ ಯೆಶಾಯನ ಪ್ರವಾದನೆಗೆ ಆತ್ಮಿಕ ಅನ್ವಯವಿರುವುದಾಗಿ ತದನಂತರ ತಿಳಿದುಬಂತು. ಪ್ರಕಟನೆ 11:8​ರಲ್ಲಿರುವ ಉಲ್ಲೇಖದಂತೆಯೇ, ‘ಐಗುಪ್ತವು’ ಸೈತಾನನ ಲೋಕವನ್ನು ಸಂಕೇತಿಸುತ್ತದೆ. ಮತ್ತು ಅಭಿಷಿಕ್ತ ಕ್ರೈಸ್ತರು ಈ ಲೋಕದ ತಾತ್ಕಾಲಿಕ ನಿವಾಸಿಗಳಾಗಿದ್ದಾಗ ಮಾಡಿದಂತಹ ಸ್ವೀಕಾರಯೋಗ್ಯ ಯಜ್ಞಾರ್ಪಣೆಗಳನ್ನು ಈ ‘ಯೆಹೋವನ ಯಜ್ಞಪೀಠವು’ ನಮ್ಮ ಜ್ಞಾಪಕಕ್ಕೆ ತರುತ್ತದೆ. (ರೋಮಾಪುರ 12:1; ಇಬ್ರಿಯ 13:15, 16) ‘[ಐಗುಪ್ತದ] ಎಲ್ಲೆಯಲ್ಲಿ’ರುವ ಸ್ತಂಭವು ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಸೂಚಿಸುತ್ತದೆ. ಇದು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿದ್ದು, ಅಭಿಷಿಕ್ತರು ಬಿಟ್ಟುಹೋಗಲಿರುವ ಲೋಕದಲ್ಲಿ ಅಂದರೆ “ಐಗುಪ್ತ”ದಲ್ಲಿ ಒಂದು ಸಾಕ್ಷಿಯಾಗಿ ಕಾರ್ಯನಡಿಸುತ್ತದೆ.—1 ತಿಮೊಥೆಯ 3:15.

18. (ಎ) ಪ್ರಾಮಾಣಿಕ ಹೃದಯದ ಬೈಬಲ್‌ ವಿದ್ಯಾರ್ಥಿಗಳಿಗೆ ಯೆಹೋವನು ವಿಷಯಗಳನ್ನು ಹೇಗೆ ಸ್ಪಷ್ಟೀಕರಿಸುತ್ತಾ ಬಂದಿದ್ದಾನೆ? (ಬಿ) ಒಂದು ಶಾಸ್ತ್ರೀಯ ಸ್ಪಷ್ಟೀಕರಣವನ್ನು ಅರ್ಥಮಾಡಿಕೊಳ್ಳುವುದು ಒಬ್ಬ ಕ್ರೈಸ್ತನಿಗೆ ಕಷ್ಟಕರವಾಗಿದ್ದರೆ, ಯಾವ ಮನೋಭಾವವನ್ನು ಹೊಂದಿರುವುದು ವಿವೇಕಪ್ರದವಾಗಿರುವುದು?

18 ವರ್ಷಗಳು ಗತಿಸಿದಂತೆ, ಯೆಹೋವನು ತನ್ನ ಪ್ರವಾದನ ವಾಕ್ಯದ ಸ್ಪಷ್ಟವಾದ ತಿಳಿವಳಿಕೆಯೊಂದಿಗೆ ಸತ್ಯದ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ಕೊಡುತ್ತಾ ಬಂದಿದ್ದಾನೆ. (ಜ್ಞಾನೋಕ್ತಿ 4:18) ಇತ್ತೀಚಿನ ವರ್ಷಗಳಲ್ಲಿ ನಾವು ಕೆಲವು ಪ್ರವಾದನ ವಾಕ್ಯಗಳನ್ನು ಆಳವಾದ ವಿವೇಚನೆಯೊಂದಿಗೆ ಪುನಃ ಪರಿಶೀಲಿಸುವಂತೆ ಉತ್ತೇಜಿಸಲ್ಪಟ್ಟಿದ್ದೇವೆ. ಅವುಗಳಲ್ಲಿ, ಅಂತ್ಯವು ಬರುವ ಮುಂಚೆ ಅಳಿದುಹೋಗದ ಸಂತತಿ, ಕುರಿ ಮತ್ತು ಆಡುಗಳ ಸಾಮ್ಯ, ಅಸಹ್ಯ ವಸ್ತು ಮತ್ತು ಅದು ಪವಿತ್ರಸ್ಥಾನದಲ್ಲಿ ನಿಲ್ಲುವಂತಹ ಸಮಯ, ಹೊಸ ಒಡಂಬಡಿಕೆ, ರೂಪಾಂತರ, ಮತ್ತು ಯೆಹೆಜ್ಕೇಲ ಪುಸ್ತಕದಲ್ಲಿರುವ ದೇವಾಲಯ ದರ್ಶನದಂತಹ ವಿಷಯಗಳು ಕೇವಲ ಕೆಲವಾಗಿವೆ. ಇಂತಹ ಸದ್ಯೋಚಿತ ವಿವರಣೆಗಳನ್ನು ಅರ್ಥಮಾಡಿಕೊಳ್ಳುವುದು ಕೆಲವೊಮ್ಮೆ ಕಷ್ಟಕರವಾಗಬಹುದು, ಆದರೆ ಕಾಲವು ಗತಿಸಿದಂತೆ ಇಂತಹ ವಿವರಣೆಗಳಿಗಾಗಿರುವ ಕಾರಣಗಳು ಸ್ಪಷ್ಟವಾಗುತ್ತವೆ. ಕ್ರೈಸ್ತನೊಬ್ಬನಿಗೆ ಒಂದು ಶಾಸ್ತ್ರವಚನದ ಹೊಸ ವಿವರಣೆಯು ಪೂರ್ಣವಾಗಿ ಅರ್ಥವಾಗದಿದ್ದಲ್ಲಿ, ಅವನು ಪ್ರವಾದಿಯಾದ ಮೀಕನ ಮಾತುಗಳನ್ನು ದೀನಭಾವದಿಂದ ಪುನರಾವರ್ತಿಸುವುದು ಒಳ್ಳೆಯದು: “ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು.”—ಮೀಕ 7:7.

19. ಈ ಕಡೇ ದಿವಸಗಳಲ್ಲಿ ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳಾದ ಬೇರೆ ಕುರಿಗಳವರು ಸಿಂಹದಂತಹ ಧೈರ್ಯವನ್ನು ಹೇಗೆ ತೋರಿಸಿದ್ದಾರೆ?

19 ಕಾವಲುಗಾರನು “ಸಿಂಹಧ್ವನಿಯಿಂದ—ಕರ್ತನೇ [“ಯೆಹೋವನೇ,” NW] ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ” ಎಂಬುದಾಗಿ ಹೇಳಿದುದನ್ನು ಜ್ಞಾಪಿಸಿಕೊಳ್ಳಿರಿ. (ಯೆಶಾಯ 21:8) ಸುಳ್ಳು ಧರ್ಮವನ್ನು ಬಯಲುಗೊಳಿಸಿ, ಜನರಿಗೆ ಬಿಡುಗಡೆಯ ಮಾರ್ಗವನ್ನು ತೋರಿಸಿಕೊಡುವುದರಲ್ಲಿ ಅಭಿಷಿಕ್ತ ಉಳಿಕೆಯವರು ಸಿಂಹದಂತಹ ಧೈರ್ಯವನ್ನು ತೋರಿಸಿದ್ದಾರೆ. (ಪ್ರಕಟನೆ 18:2-5) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನಂತೆ, ಅವರು “ಹೊತ್ತುಹೊತ್ತಿಗೆ ಆಹಾರ”ದ ರೂಪದಲ್ಲಿ ಬೈಬಲ್‌ಗಳನ್ನು, ಪತ್ರಿಕೆಗಳನ್ನು, ಮತ್ತು ಅನೇಕಾನೇಕ ಭಾಷೆಗಳಲ್ಲಿ ಇತರ ಪ್ರಕಾಶನಗಳನ್ನು ಒದಗಿಸಿದ್ದಾರೆ. (ಮತ್ತಾಯ 24:45) ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರಿಂದ . . . ಮಹಾ ಸಮೂಹವನ್ನು’ ಒಟ್ಟುಗೂಡಿಸುವ ಕೆಲಸದಲ್ಲಿ ಅವರು ನಾಯಕತ್ವವನ್ನು ವಹಿಸಿದ್ದಾರೆ. ಈ ಮಹಾ ಸಮೂಹದವರು ಸಹ ಯೇಸುವಿನ ಪ್ರಾಯಶ್ಚಿತ್ತಗೊಳಿಸುವ ರಕ್ತದಿಂದ ಶುದ್ಧಗೊಳಿಸಲ್ಪಟ್ಟು, ದೇವರಿಗೆ “ಹಗಲಿರುಳು . . . ಸೇವೆಮಾಡುತ್ತಾ” ಇರುವುದರಲ್ಲಿ ಸಿಂಹದಂತೆ ಧೈರ್ಯಶಾಲಿಗಳಾಗಿದ್ದಾರೆ. (ಪ್ರಕಟನೆ 7:9, 14, 15) ಅಭಿಷಿಕ್ತ ಸಾಕ್ಷಿಗಳ ಚಿಕ್ಕ ಗುಂಪು ಮತ್ತು ಅವರ ಸಂಗಾತಿಗಳಾದ ಮಹಾ ಸಮೂಹದವರು ಜೊತೆಯಾಗಿ, ಕಳೆದ ವರ್ಷ ಯಾವ ಫಲವನ್ನು ಪಡೆದರು? ನಮ್ಮ ಮುಂದಿನ ಲೇಖನವು ತಿಳಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 14 ಜನವರಿ 1, 1939ರಿಂದ, ಇದು “‘ಆಗ ನಾನೇ ಯೆಹೋವನು ಎಂದು ವ್ಯಕ್ತವಾಗುವದು.’—ಯೆಹೆಜ್ಕೇಲ 35:15”ಕ್ಕೆ ಬದಲಾಯಿತು.

ನಿಮಗೆ ಜ್ಞಾಪಕವಿದೆಯೆ?

ಶತಮಾನಗಳಿಂದ ಯೆಹೋವನು ಯಾವ ಸಾಕ್ಷಿಗಳನ್ನು ಎಬ್ಬಿಸಿದ್ದಾನೆ?

ಮಹಾ ಬಾಬೆಲಿನ ಆರಂಭವು ಹೇಗಾಯಿತು?

ಯೆಹೋವನು ತನ್ನ ಸಾಕ್ಷಿಗಳ ರಾಜಧಾನಿ ನಗರವಾದ ಯೆರೂಸಲೇಮನ್ನು ಸಾ.ಶ.ಪೂ. 607ರಲ್ಲಿ ಮತ್ತು ಸಾ.ಶ. 70ರಲ್ಲಿ ನಾಶವಾಗುವಂತೆ ಏಕೆ ಅನುಮತಿಸಿದನು?

ಯೆಹೋವನ ಕಾವಲುಗಾರ ವರ್ಗದವರು ಮತ್ತು ಅವರ ಸಂಗಾತಿಗಳು ಯಾವ ಮನೋಭಾವವನ್ನು ತೋರಿಸಿದ್ದಾರೆ?

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರ]

“ಯೆಹೋವನೇ, ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ”

[ಪುಟ 10ರಲ್ಲಿರುವ ಚಿತ್ರಗಳು]

ಯೆಹೋವನ ಕಾವಲುಗಾರ ವರ್ಗವು ತನ್ನ ನೇಮಕವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ