ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವಕರಿಗೆ ನಿಜ ನಿರೀಕ್ಷೆಯಿದೆ

ಯೆಹೋವನ ಸೇವಕರಿಗೆ ನಿಜ ನಿರೀಕ್ಷೆಯಿದೆ

ಯೆಹೋವನ ಸೇವಕರಿಗೆ ನಿಜ ನಿರೀಕ್ಷೆಯಿದೆ

‘ಇಬ್ಬನಿಯು ಮಾನವರನ್ನು ನಿರೀಕ್ಷಿಸದೆ ಹಿತಕರವಾಗಿರುವ ಹಾಗೆಯೇ ಯಾಕೋಬಿನ ಜನಶೇಷವು ಬಹುಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವದು.’​—ಮೀಕ 5:7.

1. ಆತ್ಮಿಕ ಇಸ್ರಾಯೇಲ್‌ ಚೈತನ್ಯದ ಒಂದು ಮೂಲವಾಗಿರುವುದು ಹೇಗೆ?

ಯೆಹೋವನು ಮಳೆ ಮತ್ತು ಇಬ್ಬನಿಯ ಮಹಾ ರಚಕನು. ಇಬ್ಬನಿಗಾಗಿ ಅಥವಾ ಮಳೆಗಾಗಿ ಮನುಷ್ಯನನ್ನು ನಿರೀಕ್ಷಿಸುವುದು ವ್ಯರ್ಥ. ಪ್ರವಾದಿಯಾದ ಮೀಕನು ಬರೆದುದು: “ಯೆಹೋವನ ವರವಾದ ಇಬ್ಬನಿಯೂ ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಹೇಗೆ ಮನುಷ್ಯರನ್ನು ಎದುರುನೋಡದೆ ಮಾನವರನ್ನು ನಿರೀಕ್ಷಿಸದೆ ಹಿತಕರವಾಗಿರುವವೋ ಹಾಗೆಯೇ ಯಾಕೋಬಿನ ಜನಶೇಷವು ಬಹುಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವದು.” (ಮೀಕ 5:7) ಪ್ರಸ್ತುತ ದಿನದ “ಯಾಕೋಬಿನ ಜನಶೇಷವು” ಯಾರಾಗಿದ್ದಾರೆ? ಅವರು ಆತ್ಮಿಕ ಇಸ್ರಾಯೇಲ್ಯರು, ಅಂದರೆ “ದೇವರ ಇಸ್ರಾಯೇಲ್ಯ”ರಲ್ಲಿ ಉಳಿಕೆಯವರೇ ಆಗಿದ್ದಾರೆ. (ಗಲಾತ್ಯ 6:16) ಭೂಮಿಯ “ಬಹು ಜನಾಂಗ”ಗಳಿಗೆ ಅವರು “ಯೆಹೋವನ ವರವಾದ ಇಬ್ಬನಿ”ಯಂತೆ ಮತ್ತು “ಹುಲ್ಲನ್ನು ಬೆಳೆಯಿಸುವ ಹದಮಳೆ”ಗಳಂತೆ ಚೈತನ್ಯದಾಯಕರಾಗಿದ್ದಾರೆ. ಹೌದು, ಇಂದು ಭೂಮಿಯ ಮೇಲೆ ವಾಸಿಸುತ್ತಿರುವ ಅಭಿಷಿಕ್ತ ಕ್ರೈಸ್ತರು ಜನರಿಗೆ ದೇವರು ಕೊಡುವ ಆಶೀರ್ವಾದವಾಗಿದ್ದಾರೆ. ಜನರಿಗೆ ನಿಜ ನಿರೀಕ್ಷೆಯ ಸಂದೇಶವನ್ನು ಕೊಡಲು ರಾಜ್ಯ ಘೋಷಕರಾದ ಅವರನ್ನು ಯೆಹೋವನು ಉಪಯೋಗಿಸುತ್ತಾನೆ.

2. ಈ ಸಂಕಟಮಯ ಲೋಕದಲ್ಲಿ ನಾವು ಜೀವಿಸುವುದಾದರೂ, ನಮಗೆ ನಿಜ ನಿರೀಕ್ಷೆಯಿದೆ ಏಕೆ?

2 ಈ ಲೋಕಕ್ಕೆ ನಿಜ ನಿರೀಕ್ಷೆಯು ಇಲ್ಲದಿರುವುದು ಆಶ್ಚರ್ಯದ ಸಂಗತಿಯಲ್ಲ. ರಾಜಕೀಯ ಅಸ್ಥಿರತೆ, ನೈತಿಕ ಕುಸಿತ, ಪಾತಕ, ಆರ್ಥಿಕ ಬಿಕ್ಕಟ್ಟು, ಭಯೋತ್ಪಾದನೆ ಮತ್ತು ಯುದ್ಧ​—ಪಿಶಾಚನಾದ ಸೈತಾನನ ಅಧಿಕಾರದಲ್ಲಿರುವ ಲೋಕದಿಂದ ನಾವು ಇಂಥ ವಿಷಯಗಳನ್ನೇ ಎದುರುನೋಡುತ್ತೇವೆ. (1 ಯೋಹಾನ 5:19) ಭವಿಷ್ಯತ್ತಿನಲ್ಲಿ ಏನಾಗಲಿಕ್ಕಿದೆ ಎಂಬುದರ ಕುರಿತು ಅನೇಕರು ಭಯಪಡುತ್ತಿದ್ದಾರೆ. ಆದರೆ ಯೆಹೋವನ ಆರಾಧಕರಾದ ನಾವು ಭಯಪಡೆವು, ಏಕೆಂದರೆ ಭವಿಷ್ಯತ್ತಿಗಾಗಿ ನಮಗೊಂದು ಸ್ಥಿರವಾದ ನಿರೀಕ್ಷೆಯಿದೆ. ಈ ನಿರೀಕ್ಷೆಯು ದೇವರ ವಾಕ್ಯದ ಮೇಲೆ ಆಧಾರಿತವಾಗಿರುವುದರಿಂದ, ಇದು ನಿಜ ನಿರೀಕ್ಷೆಯಾಗಿದೆ. ನಮಗೆ ಯೆಹೋವನಲ್ಲಿಯೂ ಆತನ ವಾಕ್ಯದಲ್ಲಿಯೂ ನಂಬಿಕೆಯಿದೆ, ಏಕೆಂದರೆ ಆತನು ಏನು ಹೇಳುತ್ತಾನೊ ಅದು ಸದಾ ನಿಜವಾಗುತ್ತದೆ.

3. (ಎ) ಯೆಹೋವನು ಇಸ್ರಾಯೇಲ್‌ ಮತ್ತು ಯೆಹೂದದ ವಿರುದ್ಧ ಏಕೆ ಕ್ರಮಕೈಕೊಳ್ಳಲಿದ್ದನು? (ಬಿ) ಮೀಕನ ಮಾತುಗಳು ಇಂದಿಗೂ ಅನ್ವಯವಾಗುತ್ತದೆ ಏಕೆ?

3 ಮೀಕನ ದೈವಪ್ರೇರಿತ ಪ್ರವಾದನೆಯು, ನಾವು ಯೆಹೋವನ ನಾಮದಲ್ಲಿ ನಡೆಯುವಂತೆ ನಮ್ಮನ್ನು ಬಲಪಡಿಸಿ ನಿಜ ನಿರೀಕ್ಷೆಗೆ ನಮಗೆ ಆಧಾರವನ್ನು ಕೊಡುತ್ತದೆ. ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಮೀಕನು ಪ್ರವಾದಿಸುತ್ತಿದ್ದಾಗ, ದೇವರ ಒಡಂಬಡಿಕೆಯ ಜನರು ಇಸ್ರಾಯೇಲ್‌ ಮತ್ತು ಯೆಹೂದ ಎಂಬ ಎರಡು ಜನಾಂಗಗಳಾಗಿ ವಿಭಾಗಗೊಂಡಿದ್ದರು, ಮತ್ತು ಈ ಎರಡೂ ಜನಾಂಗಗಳು ದೇವರ ಕರಾರನ್ನು ಅಸಡ್ಡೆ ಮಾಡುತ್ತಿದ್ದವು. ಇದರ ಪರಿಣಾಮವಾಗಿ ನೈತಿಕ ಅವನತಿ, ಧರ್ಮಭ್ರಷ್ಟತೆ ಮತ್ತು ವಿಪರೀತ ಪ್ರಾಪಂಚಿಕತೆ ಅಲ್ಲಿತ್ತು. ಆದಕಾರಣ, ಅವರ ವಿರುದ್ಧ ಕ್ರಮಕೈಕೊಳ್ಳುವೆನೆಂದು ಯೆಹೋವನು ಎಚ್ಚರಿಸಿದನು. ದೇವರ ಎಚ್ಚರಿಕೆಗಳು ಮೀಕನ ಸಮಕಾಲೀನರಿಗೆ ಸಂಬೋಧಿಸಲಾಗಿತ್ತಾದರೂ, ಇಂದಿನ ಸ್ಥಿತಿಗತಿಯೂ ಬಹುಮಟ್ಟಿಗೆ ಮೀಕನ ದಿನಗಳನ್ನು ಹೋಲುವುದರಿಂದ ಅವನ ಮಾತುಗಳು ಇಂದಿಗೂ ಅನ್ವಯಿಸುತ್ತವೆ. ನಾವು ಮೀಕನ ಪುಸ್ತಕದ ಏಳು ಅಧ್ಯಾಯಗಳ ಕೆಲವು ಪ್ರಮುಖ ಭಾಗಗಳನ್ನು ಪರಿಗಣಿಸುವಾಗ ಇದು ವ್ಯಕ್ತವಾಗುವುದು.

ಮೇಲ್ನೋಟವು ತಿಳಿಯಪಡಿಸುವ ಸಂಗತಿ

4. ಮೀಕ 1-3ನೆಯ ಅಧ್ಯಾಯಗಳು ಯಾವ ಮಾಹಿತಿಯನ್ನು ಒದಗಿಸುತ್ತವೆ?

4 ಮೀಕನ ಪುಸ್ತಕದಲ್ಲಿ ಅಡಕವಾಗಿರುವ ವಿಷಯಗಳನ್ನು ಸಂಕ್ಷಿಪ್ತವಾಗಿ ಪರಿಗಣಿಸೋಣ. 1ನೆಯ ಅಧ್ಯಾಯದಲ್ಲಿ ಯೆಹೋವನು ಇಸ್ರಾಯೇಲ್‌ ಮತ್ತು ಯೆಹೂದದ ದಂಗೆಯನ್ನು ಬಯಲುಪಡಿಸುತ್ತಾನೆ. ಅವರ ಪಾತಕಗಳ ಕಾರಣ ಇಸ್ರಾಯೇಲ್‌ ನಾಶಗೊಳ್ಳಲಿದೆ ಮತ್ತು ಯೆಹೂದದ ಶಿಕ್ಷೆ ಯೆರೂಸಲೇಮಿನ ದ್ವಾರಗಳ ವರೆಗೂ ತಲಪುವುದು. 2ನೆಯ ಅಧ್ಯಾಯವು, ಧನಿಕರೂ ಬಲಾಢ್ಯರೂ ಆದ ಜನರು ಬಲಹೀನರೂ ನಿಸ್ಸಹಾಯಕರೂ ಆದ ಜನರ ಮೇಲೆ ದಬ್ಬಾಳಿಕೆಮಾಡುತ್ತಿರುವುದನ್ನು ತಿಳಿಯಪಡಿಸುತ್ತದೆ. ಆದರೂ, ದೇವಜನರನ್ನು ಏಕತೆಯಲ್ಲಿ ಒಟ್ಟುಗೂಡಿಸಲಾಗುವುದು ಎಂಬ ಒಂದು ದೈವಿಕ ವಾಗ್ದಾನವನ್ನೂ ಕೊಡಲಾಗುತ್ತದೆ. 3ನೆಯ ಅಧ್ಯಾಯವು, ಜನಾಂಗೀಯ ನಾಯಕರ ಮತ್ತು ತಪ್ಪಿತಸ್ಥ ಪ್ರವಾದಿಗಳ ವಿರುದ್ಧ ನುಡಿಯಲ್ಪಟ್ಟ ಯೆಹೋವನ ಪ್ರಕಟನೆಗಳನ್ನು ವರದಿ ಮಾಡುತ್ತದೆ. ಆ ನಾಯಕರು ನ್ಯಾಯವನ್ನು ವಿಕೃತಗೊಳಿಸುತ್ತಿದ್ದಾರೆ ಮತ್ತು ಪ್ರವಾದಿಗಳು ಸುಳ್ಳಾಡುತ್ತಿದ್ದಾರೆ. ಹೀಗಿದ್ದರೂ, ಯೆಹೋವನ ಬರಲಿದ್ದ ನ್ಯಾಯತೀರ್ಪನ್ನು ಸಾರಿ ಹೇಳುವಂತೆ ಪವಿತ್ರಾತ್ಮವು ಮೀಕನನ್ನು ಬಲಪಡಿಸುತ್ತದೆ.

5. ಮೀಕ 4 ಮತ್ತು 5 ಅಧ್ಯಾಯಗಳ ಸಾರಾಂಶವೇನು?

5 ಅಧ್ಯಾಯ ನಾಲ್ಕರಲ್ಲಿ, ಅಂತ್ಯದ ದಿನಗಳಲ್ಲಿ ಎಲ್ಲಾ ಜನಾಂಗಗಳು, ಉನ್ನತಕ್ಕೇರಿಸಲ್ಪಟ್ಟಿರುವ ಯೆಹೋವನ ಮಂದಿರದ ಬೆಟ್ಟಕ್ಕೆ ಆತನಿಂದ ಬೋಧಿಸಲ್ಪಡಲು ಬರುವುದನ್ನು ಕುರಿತು ಮುಂತಿಳಿಸಲಾಗಿದೆ. ಅದಕ್ಕೆ ಮೊದಲಾಗಿ ಯೆಹೂದವು ಬಾಬೆಲಿಗೆ ಸೆರೆಯಾಗಿ ಕೊಂಡೊಯ್ಯಲ್ಪಡುವುದು, ಆದರೆ ಯೆಹೋವನು ಅದನ್ನು ವಿಮೋಚಿಸುವನು. 5ನೆಯ ಅಧ್ಯಾಯವು ಮೆಸ್ಸೀಯನು ಯೆಹೂದದ ಬೇತ್ಲೆಹೇಮಿನಲ್ಲಿ ಜನಿಸುವನೆಂಬುದನ್ನು ತಿಳಿಯಪಡಿಸುತ್ತದೆ. ಅವನು ತನ್ನ ಜನರನ್ನು ಪರಾಂಬರಿಸಿ ಅವರನ್ನು ದಬ್ಬಾಳಿಕೆಯ ರಾಷ್ಟ್ರಗಳಿಂದ ಬಿಡಿಸುವನು.

6, 7. ಮೀಕನ ಪ್ರವಾದನೆಯ 6 ಮತ್ತು 7 ಅಧ್ಯಾಯಗಳಲ್ಲಿ ಯಾವ ವಿಷಯಗಳನ್ನು ನಮೂದಿಸಲಾಗಿದೆ?

6 ಮೀಕ ಆರನೆಯ ಅಧ್ಯಾಯವು ತನ್ನ ಜನರ ವಿರುದ್ಧವಾದ ಯೆಹೋವನ ಆರೋಪಗಳನ್ನು ಒಂದು ಮೊಕದ್ದಮೆಯ ರೂಪದಲ್ಲಿ ದಾಖಲೆ ಮಾಡುತ್ತದೆ. ಅವರು ದಂಗೆಯೇಳುವಂತೆ ಮಾಡಲು ಆತನು ಏನು ಮಾಡಿದ್ದಾನೆ? ಏನೂ ಇಲ್ಲ. ಸತ್ಯ ಸಂಗತಿಯೇನೆಂದರೆ ಆತನು ಏನನ್ನು ಅಪೇಕ್ಷಿಸುತ್ತಾನೊ ಅದೆಲ್ಲವು ತೀರ ನ್ಯಾಯಸಮ್ಮತವಾಗಿವೆ. ತನ್ನ ಆರಾಧಕರು ತನ್ನೊಂದಿಗೆ ನಡೆಯುವಾಗ, ನ್ಯಾಯ, ದಯೆ, ಮತ್ತು ವಿನಯಶೀಲತೆಯನ್ನು ತೋರಿಸಬೇಕೆಂದು ಆತನು ಬಯಸುತ್ತಾನೆ. ಆದರೆ ಇದನ್ನು ಮಾಡುವ ಬದಲಿಗೆ, ಇಸ್ರಾಯೇಲ್‌ ಮತ್ತು ಯೆಹೂದವು ದಂಗೆಯ ಮಾರ್ಗವನ್ನು ಅನುಸರಿಸಿವೆ ಮತ್ತು ಈ ಕಾರಣದಿಂದ ಅವರು ಅದರ ಪ್ರತಿಫಲವನ್ನು ಅನುಭವಿಸಬೇಕು.

7 ಕೊನೆಯ ಅಧ್ಯಾಯದಲ್ಲಿ, ಮೀಕನು ತನ್ನ ಸಮಕಾಲೀನರ ದುಷ್ಟತನವನ್ನು ಖಂಡಿಸುತ್ತಾನೆ. ಆದರೂ ಅವನು ನಿರಾಶೆಗೊಳ್ಳುವುದಿಲ್ಲ. ಏಕೆಂದರೆ ಅವನು ಯೆಹೋವನಿಗಾಗಿ ‘ಕಾದುಕೊಳ್ಳಲು’ ದೃಢಸಂಕಲ್ಪವುಳ್ಳವನಾಗಿದ್ದಾನೆ. (ಮೀಕ 7:7) ಯೆಹೋವನು ತನ್ನ ಜನರಿಗೆ ಕರುಣೆ ತೋರಿಸುವನು ಎಂಬ ಭರವಸೆಯ ಅಭಿವ್ಯಕ್ತಿಯೊಂದಿಗೆ ಆ ಪುಸ್ತಕವು ಕೊನೆಗೊಳ್ಳುತ್ತದೆ. ಆ ನಿರೀಕ್ಷೆಯು ನೆರವೇರಿದ್ದನ್ನು ಇತಿಹಾಸವು ರುಜುಪಡಿಸುತ್ತದೆ. ತನ್ನ ಜನರನ್ನು ಶಿಸ್ತಿಗೊಳಪಡಿಸಿದ ಸಮಯವು ಸಾ.ಶ.ಪೂ. 537ರಲ್ಲಿ ಪೂರ್ಣಗೊಳಿಸಲ್ಪಟ್ಟಾಗ, ಯೆಹೋವನು ಕರುಣೆಯಿಂದ ಜನಶೇಷವೊಂದನ್ನು ಅವರ ಸ್ವದೇಶದಲ್ಲಿ ಪುನಸ್ಸ್ಥಾಪಿಸಿದನು.

8. ಮೀಕನ ಪುಸ್ತಕದಲ್ಲಿ ಅಡಕವಾಗಿರುವ ವಿಷಯಗಳನ್ನು ನೀವು ಹೇಗೆ ಸಾರಾಂಶಿಸುವಿರಿ?

8 ಯೆಹೋವನು ಮೀಕನ ಮುಖಾಂತರ ಎಷ್ಟು ಉತ್ತಮವಾದ ಮಾಹಿತಿಯನ್ನು ತಿಳಿಯಪಡಿಸುತ್ತಾನೆ! ಈ ಪ್ರೇರಿತ ಪುಸ್ತಕವು, ಆತನನ್ನು ಸೇವಿಸುತ್ತಿದ್ದೇವೆಂದು ಹೇಳುತ್ತಿದ್ದರೂ ಅಪನಂಬಿಗಸ್ತರಾಗಿರುವವರೊಂದಿಗೆ ಯೆಹೋವನು ಹೇಗೆ ವ್ಯವಹರಿಸುತ್ತಾನೆಂಬುದಕ್ಕೆ ಎಚ್ಚರಿಕೆಯ ದೃಷ್ಟಾಂತಗಳನ್ನು ಒದಗಿಸುತ್ತದೆ. ಇಂದು ಸಂಭವಿಸುತ್ತಿರುವ ಘಟನೆಗಳನ್ನು ಅದು ಮುಂತಿಳಿಸುತ್ತದೆ. ಮತ್ತು ಈ ಕಷ್ಟಕರವಾದ ಸಮಯಗಳಲ್ಲಿ ನಮ್ಮ ನಿರೀಕ್ಷೆಯನ್ನು ಸ್ಥಿರಪಡಿಸಲು ನಾವು ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಅದು ದೈವಿಕ ಸಲಹೆಯನ್ನು ನೀಡುತ್ತದೆ.

ಪರಮಾಧಿಕಾರಿ ಕರ್ತನಾದ ಯೆಹೋವನು ಮಾತಾಡುತ್ತಾನೆ

9. ಮೀಕ 1:2ಕ್ಕನುಸಾರ, ಯೆಹೋವನು ಏನು ಮಾಡಲಿಕ್ಕಿದ್ದನು?

9 ಈಗ ನಾವು ಮೀಕನ ಪುಸ್ತಕವನ್ನು ಸವಿವರವಾಗಿ ಪರೀಕ್ಷಿಸೋಣ. ಮೀಕ 1:2ರಲ್ಲಿ ನಾವು ಹೀಗೆ ಓದುತ್ತೇವೆ: “ಜನಾಂಗಗಳೇ, ನೀವೆಲ್ಲರೂ ಕೇಳಿರಿ; ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತವೇ, ಕಿವಿಗೊಡಿರಿ! ಕರ್ತನು, ಕರ್ತನಾದ [“ಪರಮಾಧಿಕಾರಿ ಕರ್ತನಾದ,” NW] ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.” ನೀವು ಮೀಕನ ದಿನಗಳಲ್ಲಿ ಜೀವಿಸಿರುತ್ತಿದ್ದಲ್ಲಿ, ಆ ಮಾತುಗಳು ನಿಮ್ಮ ಗಮನವನ್ನು ಸೆರೆಹಿಡಿಯುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ, ಯೆಹೋವನು ತನ್ನ ಪವಿತ್ರಾಲಯದಿಂದ ಮಾತನಾಡಿ, ಇಸ್ರಾಯೇಲ್‌ ಮತ್ತು ಯೆಹೂದವನ್ನು ಸಂಬೋಧಿಸುವುದು ಮಾತ್ರವಲ್ಲ, ಎಲ್ಲೆಡೆಯೂ ಇರುವ ಜನರನ್ನು ಸಂಬೋಧಿಸುತ್ತಿದ್ದಾನೆ. ಮೀಕನ ದಿನಗಳಲ್ಲಿ ಜನರು ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಅತಿ ದೀರ್ಘ ಕಾಲ ಅಸಡ್ಡೆಮಾಡಿದ್ದರು. ಆದರೆ ಅದೆಲ್ಲವೂ ಬೇಗನೆ ಬದಲಾಗಲಿಕ್ಕಿತ್ತು. ಏಕೆಂದರೆ ಯೆಹೋವನು ನಿರ್ಧಾರಕ ಕ್ರಮಕೈಕೊಳ್ಳಲು ದೃಢತೀರ್ಮಾನವನ್ನು ಮಾಡಿದ್ದನು.

10. ಮೀಕ 1:2ರ ಮಾತುಗಳು ನಮಗೆ ಪ್ರಾಮುಖ್ಯವಾಗಿರುವುದೇಕೆ?

10 ನಮ್ಮ ದಿನಗಳಲ್ಲಿಯೂ ಇದು ನಿಜವಾಗಿದೆ. ಯೆಹೋವನು ತನ್ನ ಪವಿತ್ರಾಲಯದಿಂದ ಪುನಃ ಸಂದೇಶಗಳನ್ನು ಹೊರಡಿಸುತ್ತಿದ್ದಾನೆಂದು ಪ್ರಕಟನೆ 14:​18-20 ತೋರಿಸುತ್ತದೆ. ಬೇಗನೆ, ಯೆಹೋವನು ನಿರ್ಧಾರಕ ಕ್ರಮಕೈಕೊಳ್ಳುವನು ಮತ್ತು ಆಗ ಮಹತ್ವಪೂರ್ಣ ಘಟನೆಗಳು ಮಾನವಕುಲವನ್ನು ಪುನಃ ಅದುರಿಸುವವು. ಆದರೆ ಈ ಬಾರಿ, “ಭೂಮಿಯ” ದುಷ್ಟ ‘ದ್ರಾಕ್ಷೇಬಳ್ಳಿಯು’ ಯೆಹೋವನ ರೌದ್ರವೆಂಬ ದೊಡ್ಡ ತೊಟ್ಟಿಯಲ್ಲಿ ಹಾಕಲ್ಪಡುವಾಗ, ಸೈತಾನನ ವಿಷಯಗಳ ವ್ಯವಸ್ಥೆಯ ನಾಶನವು ಸಂಪೂರ್ಣಗೊಳ್ಳುವುದು.

11. ಮೀಕ 1:​3, 4ರ ಮಾತುಗಳ ಅರ್ಥವೇನು?

11 ಯೆಹೋವನು ಏನು ಮಾಡಲಿದ್ದಾನೆಂಬುದಕ್ಕೆ ಕಿವಿಗೊಡಿರಿ. ಮೀಕ 1:​3, 4 ಹೇಳುವುದು: “ಇಗೋ, ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ, ಭೂಮಿಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ. ಬೆಂಕಿಗೆ ಕರಗಿದ ಮೇಣದಂತೆಯೂ ಜರಿಯಲ್ಲಿ ಹೊಯ್ದ ನೀರಿನ ಹಾಗೂ ಪರ್ವತಗಳು ಆತನ ಹೆಜ್ಜೆಗೆ ಕರಗಿ ಹರಿಯುತ್ತವೆ, ತಗ್ಗುಗಳು ಸೀಳಿಹೋಗುತ್ತವೆ.” ಯೆಹೋವನು ತನ್ನ ಸ್ವರ್ಗೀಯ ನಿವಾಸವನ್ನು ಬಿಟ್ಟುಬಂದು ವಾಗ್ದತ್ತ ದೇಶದ ಪರ್ವತಗಳನ್ನೂ ಬಯಲು ಪ್ರದೇಶಗಳನ್ನೂ ತುಳಿಯುವನೊ? ಇಲ್ಲ. ಆತನು ಹಾಗೆ ಮಾಡುವ ಆವಶ್ಯಕತೆಯಿಲ್ಲ. ಆತನು ತನ್ನ ಚಿತ್ತವನ್ನು ನೆರವೇರಿಸಲು, ಕೇವಲ ತನ್ನ ಗಮನವನ್ನು ಭೂಮಿಯ ಕಡೆಗೆ ತಿರುಗಿಸಬೇಕಾಗಿದೆ ಅಷ್ಟೆ. ಅಲ್ಲದೆ, ಅಲ್ಲಿ ವರ್ಣಿಸಲ್ಪಟ್ಟಿರುವ ವಿಷಯಗಳನ್ನು ಅನುಭವಿಸುವುದು ಭೌತಿಕ ಭೂಮಿಯಲ್ಲ, ಬದಲಾಗಿ ಅದರ ನಿವಾಸಿಗಳೇ. ಯೆಹೋವನು ಕ್ರಮಕೈಕೊಳ್ಳುವಾಗ, ಪರ್ವತಗಳು ಮೇಣದಂತೆ ಕರಗಿದವೊ ತಗ್ಗುಗಳು ಭೂಕಂಪದಿಂದ ಸೀಳಿಹೋದವೊ ಎಂಬಂತೆ, ಅಪನಂಬಿಗಸ್ತರಿಗೆ ಅದರ ಪರಿಣಾಮವು ವಿಪತ್ಕಾರಕವಾಗಿರುವುದು.

12, 13. ಎರಡನೆಯ ಪೇತ್ರ 3:​10-12ಕ್ಕೆ ಹೊಂದಿಕೆಯಲ್ಲಿ, ನಮ್ಮ ನಿರೀಕ್ಷೆಯನ್ನು ಯಾವುದು ಭದ್ರವಾಗಿರಿಸುತ್ತದೆ?

12ಮೀಕ 1:​3, 4ರ ಪ್ರವಾದನಾತ್ಮಕ ಮಾತುಗಳು ಭೂಮಿಯ ಮೇಲೆ ವಿಪತ್ಕಾರಕ ಘಟನೆಗಳನ್ನು ಮುಂತಿಳಿಸುವ ಇನ್ನೊಂದು ಪ್ರೇರಿತ ಪ್ರವಾದನೆಯನ್ನು ನಿಮ್ಮ ಜ್ಞಾಪಕಕ್ಕೆ ತರಬಹುದು. 2 ಪೇತ್ರ 3:10ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಪೊಸ್ತಲ ಪೇತ್ರನು ಬರೆದುದು: “ಆದರೂ ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಲಯವಾಗಿ ಹೋಗುವವು, [“ತೀಕ್ಷ್ಣವಾಗಿ ಕಾವೇರಿರುವ ಪ್ರಕೃತಿಶಕ್ತಿಗಳು ಕರಗಿಹೋಗುವುವು,” NW] ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟುಹೋಗುವವು [“ಹೊರಗೆಡಹಲ್ಪಡುವುವು,” NW].” ಮೀಕನ ಪ್ರವಾದನೆಯಂತೆಯೇ, ಪೇತ್ರನ ಮಾತುಗಳು ಅಕ್ಷರಾರ್ಥವಾದ ಆಕಾಶ ಮತ್ತು ಭೂಮಿಗೆ ಅನ್ವಯಿಸುವುದಿಲ್ಲ. ಅವು ಈ ಭಕ್ತಿಹೀನ ವ್ಯವಸ್ಥೆಯ ಮೇಲೆ ಬರಲಿರುವ ಒಂದು ಮಹಾ ಸಂಕಟಕ್ಕೆ ಸೂಚಿಸುತ್ತವೆ.

13 ಬರಲಿರುವ ಆ ವಿಪತ್ತಿನ ಹೊರತಾಗಿಯೂ, ಮೀಕನಂತೆ ಕ್ರೈಸ್ತರಿಗೂ ಭವಿಷ್ಯತ್ತಿನ ಸಂಬಂಧದಲ್ಲಿ ಭರವಸೆಯಿರಬಲ್ಲದು. ಅದು ಹೇಗೆ? ಪೇತ್ರನು ಬರೆದ ಆ ಪತ್ರದ ಮುಂದಿನ ವಚನಗಳ ಸಲಹೆಯನ್ನು ಅನುಸರಿಸುವ ಮೂಲಕವೇ. ಅಪೊಸ್ತಲನು ಉದ್ಗರಿಸುವುದು: “ನೀವು ದೇವರ [“ಯೆಹೋವನ,” NW] ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ನಾವು ಒಂದು ವಿಧೇಯ ಹೃದಯವನ್ನು ಬೆಳೆಸಿಕೊಳ್ಳುವುದಾದರೆ ಮತ್ತು ನಮ್ಮ ನಡತೆಯು ಪರಿಶುದ್ಧವಾಗಿದ್ದು, ನಮ್ಮ ಜೀವನವು ದೇವಭಕ್ತಿಯ ಕ್ರಿಯೆಗಳಿಂದ ತುಂಬಿರುವಂತೆ ನೋಡಿಕೊಳ್ಳುವುದಾದರೆ ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಯು ನಿಶ್ಚಿತವಾಗಿರುವುದು. ನಮ್ಮ ನಿರೀಕ್ಷೆಯನ್ನು ಭದ್ರಪಡಿಸಲಿಕ್ಕಾಗಿ, ಯೆಹೋವನ ದಿನವು ಖಂಡಿತವಾಗಿ ಬರುತ್ತದೆಂಬುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

14. ಇಸ್ರಾಯೇಲ್‌ ಮತ್ತು ಯೆಹೂದವು ಶಿಕ್ಷಾರ್ಹವೇಕೆ?

14 ಪ್ರಾಚೀನಕಾಲದ ತನ್ನ ಜನರು ಶಿಕ್ಷೆಗೆ ಏಕೆ ಅರ್ಹರೆಂಬುದನ್ನು ಯೆಹೋವನು ವಿವರಿಸುತ್ತಾನೆ. ಮೀಕ 1:5 ಹೇಳುವುದು: “ಇದಕ್ಕೆಲ್ಲಾ ಕಾರಣವು ಯಾಕೋಬಿನ ದ್ರೋಹವೇ, ಇಸ್ರಾಯೇಲ್‌ ವಂಶದ ಪಾಪಗಳೇ. ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ. ಯೆಹೂದದ [ಕೆಟ್ಟ] ಪೂಜಾಸ್ಥಾನಗಳು ಯಾವವು? ಯೆರೂಸಲೇಮಲ್ಲವೇ.” ಇಸ್ರಾಯೇಲ್‌ ಮತ್ತು ಯೆಹೂದವು ಅಸ್ತಿತ್ವಕ್ಕೆ ಬಂದದ್ದೇ ಯೆಹೋವನಿಂದ. ಆದರೆ ಅವು ಆತನ ವಿರುದ್ಧ ದಂಗೆಯೆದ್ದಿವೆ ಮತ್ತು ಅವುಗಳ ದಂಗೆಯು ಅವುಗಳ ರಾಜಧಾನಿಗಳಾದ ಸಮಾರ್ಯ ಮತ್ತು ಯೆರೂಸಲೇಮಿನ ವರೆಗೂ ತಲಪಿರುತ್ತದೆ.

ದುರಾಚಾರಗಳು ತುಂಬಿತುಳುಕುತ್ತವೆ

15, 16. ಮೀಕನ ಸಮಕಾಲೀನರು ಯಾವ ದುಷ್ಕೃತ್ಯಗಳ ವಿಷಯದಲ್ಲಿ ದೋಷಿಗಳಾಗಿದ್ದರು?

15 ಮೀಕನ ಸಮಕಾಲೀನರ ದುಷ್ಟತ್ವದ ಒಂದು ಉದಾಹರಣೆಯು ಮೀಕ 2:​1, 2ರಲ್ಲಿ ಸವಿವರವಾಗಿ ವರ್ಣಿಸಲ್ಪಟ್ಟಿದೆ: “ತಮ್ಮ ಹಾಸಿಗೆಗಳಲ್ಲೇ ಅನ್ಯಾಯವನ್ನು ಯೋಚಿಸಿ ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ! ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೆ. ಹೊಲಗದ್ದೆಗಳನ್ನು ದುರಾಶೆಯಿಂದ ಆಕ್ರಮಿಸಿಕೊಳ್ಳುತ್ತಾರೆ, ಮನೆಗಳನ್ನು ಲೋಭದಿಂದ ಅಪಹರಿಸುತ್ತಾರೆ; ಮನೆಯನ್ನೂ ಮನೆಯವನನ್ನೂ ಸ್ವಾಸ್ತ್ಯವನ್ನೂ ಸ್ವಾಸ್ತ್ಯದವನನ್ನೂ ತುಳಿದುಬಿಡುತ್ತಾರೆ.”

16 ಲೋಭಿಗಳು ತಮ್ಮ ನೆರೆಯವರ ಹೊಲಗಳನ್ನೂ ಮನೆಗಳನ್ನೂ ಹೇಗೆ ಅಪಹರಿಸಬಹುದೆಂದು ನಿದ್ದೆಬಿಟ್ಟು ಸಂಚುಹೂಡುತ್ತಾರೆ. ಬೆಳಿಗ್ಗೆ ಎದ್ದು ಅವರು ಒಡನೆ ತಮ್ಮ ಸಂಚುಗಳನ್ನು ಕಾರ್ಯರೂಪಕ್ಕೆ ಹಾಕಲು ತ್ವರೆಪಡುತ್ತಾರೆ. ಒಂದುವೇಳೆ ಅವರು ಯೆಹೋವನ ಒಡಂಬಡಿಕೆಯನ್ನು ನೆನಪಿನಲ್ಲಿಡುತ್ತಿದ್ದಲ್ಲಿ ಹಾಗೆ ಮಾಡುತ್ತಿರಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಬಡವರನ್ನು ಸಂರಕ್ಷಿಸುವ ಏರ್ಪಾಡುಗಳಿದ್ದವು. ಅದಕ್ಕನುಸಾರ, ಯಾವುದೇ ಕುಟುಂಬವು ಅದರ ಸ್ವಾಸ್ತ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳಬಾರದಿತ್ತು. ಆದರೆ, ಆ ಲೋಭಿಗಳಿಗೆ ಅದರ ಬಗ್ಗೆ ಎಳ್ಳಷ್ಟು ಚಿಂತೆಯಿರಲಿಲ್ಲ. ಯಾಜಕಕಾಂಡ 19:18ರ, “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ಮಾತುಗಳನ್ನು ಅವರು ಅಲಕ್ಷಿಸುತ್ತಾರೆ.

17. ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುವವರು, ತಮ್ಮ ಜೀವನದಲ್ಲಿ ಪ್ರಾಪಂಚಿಕ ವಿಷಯಗಳನ್ನು ಪ್ರಥಮವಾಗಿಡುವುದಾದರೆ ಏನು ಸಂಭವಿಸಸಾಧ್ಯವಿದೆ?

17 ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುವವರು ಆತ್ಮಿಕ ಗುರಿಗಳನ್ನು ಅಸಡ್ಡೆಮಾಡಿ ಪ್ರಾಪಂಚಿಕ ವಿಷಯಗಳನ್ನು ಪ್ರಥಮವಾಗಿ ಹುಡುಕುವಲ್ಲಿ ಏನಾಗಬಲ್ಲದೆಂಬುದನ್ನು ಇದು ತೋರಿಸುತ್ತದೆ. ಪೌಲನು ತನ್ನ ದಿನದ ಕ್ರೈಸ್ತರನ್ನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” (1 ತಿಮೊಥೆಯ 6:9) ಒಬ್ಬನು ತನ್ನ ಜೀವಿತದಲ್ಲಿ ಹಣ ಸಂಪಾದನೆಯನ್ನು ಮುಖ್ಯ ಗುರಿಯನ್ನಾಗಿ ಮಾಡುವಲ್ಲಿ, ಅವನು ಕಾರ್ಯತಃ, ಒಂದು ಸುಳ್ಳು ದೇವರನ್ನು, ಮಮೋನ ಇಲ್ಲವೆ ಧನವನ್ನು ಆರಾಧಿಸುತ್ತಾನೆ. ಆ ಸುಳ್ಳು ದೇವರು ಭವಿಷ್ಯಕ್ಕೆ ಯಾವ ನಿಶ್ಚಯವಾದ ನಿರೀಕ್ಷೆಯನ್ನೂ ಕೊಡುವುದಿಲ್ಲ.​—ಮತ್ತಾಯ 6:​24, ಪಾದಟಿಪ್ಪಣಿ.

18. ಮೀಕನ ದಿನಗಳ ಪ್ರಾಪಂಚಿಕ ಮನಸ್ಕರಿಗೆ ಏನಾಗಲಿತ್ತು?

18 ಮೀಕನ ದಿನಗಳಲ್ಲಿ ಅನೇಕರು, ಪ್ರಾಪಂಚಿಕ ವಸ್ತುಗಳ ಮೇಲೆ ಹೊಂದಿಕೊಂಡಿರುವುದು ವ್ಯರ್ಥವೆಂಬುದನ್ನು ಕಹಿಯಾದ ಅನುಭವದಿಂದ ಕಲಿತುಕೊಂಡರು. ಮೀಕ 2:4ಕ್ಕನುಸಾರ ಯೆಹೋವನು ಹೇಳುವುದು: “ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಪದ್ಯವನ್ನೆತ್ತಿ​—ಅಯ್ಯೋ, ನಾವು ತೀರಾ ಸೂರೆಹೋದೆವಲ್ಲಾ! [ಯೆಹೋವನು] ನಮ್ಮವರ ಸ್ವಾಸ್ತ್ಯವನ್ನು ಪರಾಧೀನಮಾಡಿದ್ದಾನೆ; ಅಕಟಾ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ! ನಮ್ಮ ಭೂಮಿಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ ಎಂದು ಶೋಕಗೀತವಾಗಿ ಹಾಡುವರು.” ಹೌದು, ಮನೆ ಮತ್ತು ಹೊಲಗಳನ್ನು ಸುಲುಕೊಂಡ ಆ ಕಳ್ಳರು ತಮ್ಮ ಸ್ವಂತ ಕುಟುಂಬದ ಸ್ವಾಸ್ತ್ಯವನ್ನು ಕಳೆದುಕೊಳ್ಳುವರು. ಅವರು ಪರದೇಶಕ್ಕೆ ಗಡೀಪಾರುಮಾಡಲ್ಪಡುವರು ಮತ್ತು ಅವರ ಸ್ವತ್ತುಗಳು “ದೇವದ್ರೋಹಿ”ಗಳ, ಅಥವಾ ಅನ್ಯಜನಾಂಗಗಳವರ ಕೊಳ್ಳೆಯಾಗುವುದು. ಸುಖಸಮೃದ್ಧಿಯಿಂದ ಕೂಡಿದ ಭವಿಷ್ಯದ ಕುರಿತು ಅವರಿಗಿದ್ದ ಎಲ್ಲಾ ನಿರೀಕ್ಷೆಗಳು ನುಚ್ಚುನೂರಾಗುವುವು.

19, 20. ಯೆಹೋವನ ಮೇಲೆ ಭರವಸವಿಟ್ಟಿದ್ದ ಯೆಹೂದ್ಯರಿಗೆ ಏನು ಸಂಭವಿಸಿತು?

19 ಆದರೆ ಯೆಹೋವನಲ್ಲಿ ಭರವಸೆಯಿಡುವವರ ನಿರೀಕ್ಷೆಯು ಭಂಗಗೊಳ್ಳದು. ಯೆಹೋವನು ತಾನು ಅಬ್ರಹಾಮ ಮತ್ತು ದಾವೀದರೊಂದಿಗೆ ಮಾಡಿದ ಒಡಂಬಡಿಕೆಯ ಸಂಬಂಧದಲ್ಲಿ ನಂಬಿಗಸ್ತನಾಗಿದ್ದಾನೆ ಮತ್ತು ಮೀಕನಂತೆ ತನ್ನನ್ನು ಪ್ರೀತಿಸುವವರಿಗೆ ಮತ್ತು ತಮ್ಮ ದೇಶಸ್ಥರು ದೇವರಿಂದ ತೊಲಗಿರುವುದಕ್ಕೆ ದುಃಖಿಸುವವರಿಗೆ ಆತನು ಕರುಣೆ ತೋರಿಸುತ್ತಾನೆ. ಪ್ರಾಮಾಣಿಕ ಜನರ ನಿಮಿತ್ತವಾಗಿ ದೇವರ ಕ್ಲುಪ್ತ ಸಮಯದಲ್ಲಿ ಒಂದು ಪುನಸ್ಸ್ಥಾಪನೆಯು ಸಂಭವಿಸುವುದು.

20 ಅದು ಸಾ.ಶ.ಪೂ. 537ರಲ್ಲಿ, ಬಾಬೆಲು ಪತನಗೊಂಡ ಮೇಲೆ ಯೆಹೂದಿ ಜನಶೇಷವೊಂದು ಸ್ವದೇಶಕ್ಕೆ ಹಿಂದಿರುಗಿದಾಗ ಸಂಭವಿಸುತ್ತದೆ. ಆ ಸಮಯದಲ್ಲಿ, ಮೀಕ 2:12ರ ಮಾತುಗಳು ಪ್ರಥಮ ನೆರವೇರಿಕೆಯನ್ನು ಹೊಂದುವವು. ಯೆಹೋವನು ಹೇಳುವುದು: “ಯಾಕೋಬೇ, ನಿನ್ನವರನ್ನೆಲ್ಲಾ ಕೂಡಿಸೇ ಕೂಡಿಸುವೆನು; ಇಸ್ರಾಯೇಲಿನ ಜನಶೇಷವನ್ನು ಸೇರಿಸೇ ಸೇರಿಸುವೆನು, ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು, ಕಾವಲ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಹಾಕುವೆನು; ಜನರು ಗಿಜಿಗುಟ್ಟುವರು.” ಯೆಹೋವನು ಎಷ್ಟು ಪ್ರೀತಿಪರ ದೇವರಾಗಿದ್ದಾನೆ! ತನ್ನ ಜನರನ್ನು ಶಿಸ್ತಿಗೊಳಪಡಿಸಿದ ಬಳಿಕ ಅವರಲ್ಲಿ ಉಳಿಕೆಯವರು ಹಿಂದಿರುಗಿ ಬಂದು, ಅವರ ಪಿತೃಗಳಿಗೆ ಕೊಟ್ಟಿದ್ದ ದೇಶದಲ್ಲಿ ತನ್ನನ್ನು ಸೇವಿಸುವಂತೆ ಆತನು ಅನುಮತಿಸುತ್ತಾನೆ.

ನಮ್ಮ ದಿನಗಳಲ್ಲಿ ಗಮನಾರ್ಹ ಹೋಲಿಕೆಗಳು

21. ಇಂದಿನ ಪರಿಸ್ಥಿತಿಗಳು ಮೀಕನ ದಿನಗಳಿಗೆ ಹೇಗೆ ಹೋಲುತ್ತವೆ?

21 ಮೀಕನ ಪುಸ್ತಕದ ಮೊದಲ ಎರಡು ಅಧ್ಯಾಯಗಳನ್ನು ನಾವು ಪರಿಗಣಿಸುತ್ತಿದ್ದಾಗ, ಇಂದು ಸಹ ವಿಷಯಗಳು ಹೇಗೆ ಅಂದಿನಂತೆಯೇ ಇವೆಯೆಂಬುದು ನಿಮ್ಮ ಮನಸ್ಸಿಗೆ ಹೊಳೆದಿದೆಯೊ? ಮೀಕನ ದಿನಗಳಂತೆಯೇ, ಇಂದು ಸಹ ಅನೇಕರು ತಾವು ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಯೆಹೂದ ಮತ್ತು ಇಸ್ರಾಯೇಲಿನಂತೆ ವಿಭಾಜಿತರಾಗಿದ್ದು, ಒಬ್ಬರ ಮೇಲೊಬ್ಬರು ಯುದ್ಧವನ್ನು ಸಹ ಹೂಡಿದ್ದಾರೆ. ಕ್ರೈಸ್ತಪ್ರಪಂಚದ ಅನೇಕ ಧನಿಕರು ಬಡವರ ಮೇಲೆ ದಬ್ಬಾಳಿಕೆ ನಡೆಸಿರುತ್ತಾರೆ. ಧಾರ್ಮಿಕ ಮುಖಂಡರಲ್ಲಿ ಹೆಚ್ಚೆಚ್ಚು ಮಂದಿ ಬೈಬಲು ಸ್ಪಷ್ಟವಾಗಿ ಖಂಡಿಸಿರುವ ಆಚಾರಗಳನ್ನು ಸಹಿಸಿಕೊಳ್ಳುತ್ತಾರೆ. ಆದುದರಿಂದ ಬೇಗನೆ, ಮಹಾ ಬಾಬೆಲಿನಲ್ಲಿರುವ ಮಿಕ್ಕ ಭಾಗದೊಂದಿಗೆ ಕ್ರೈಸ್ತಪ್ರಪಂಚವು ಅಂತ್ಯಗೊಳ್ಳುವುದೆಂಬುದರಲ್ಲಿ ಆಶ್ಚರ್ಯವೇನಿಲ್ಲ! (ಪ್ರಕಟನೆ 18:​1-5) ಹಾಗಿದ್ದರೂ, ಮೀಕನ ದಿನಗಳ ನಮೂನೆಯಂತೆ, ಯೆಹೋವನ ನಂಬಿಗಸ್ತ ಸೇವಕರು ಈ ಭೂಮಿಯಲ್ಲಿ ಉಳಿಯುವುದಂತೂ ಖಂಡಿತ.

22. ದೇವರ ರಾಜ್ಯದ ಮೇಲೆ ಯಾವ ಎರಡು ಗುಂಪುಗಳು ತಮ್ಮ ನಿರೀಕ್ಷೆಯನ್ನಿಟ್ಟಿವೆ?

22 ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು, 1919ರಲ್ಲಿ ಕ್ರೈಸ್ತಪ್ರಪಂಚದಿಂದ ಅಂತಿಮವಾಗಿ ತಮ್ಮನ್ನು ಬೇರ್ಪಡಿಸಿಕೊಂಡು, ಎಲ್ಲಾ ಜನಾಂಗಗಳಿಗೆ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ತೊಡಗಿದರು. (ಮತ್ತಾಯ 24:14) ಆರಂಭದಲ್ಲಿ, ಆತ್ಮಿಕ ಇಸ್ರಾಯೇಲ್ಯರಲ್ಲಿ ಉಳಿದಿರುವವರನ್ನು ಅವರು ಹುಡುಕತೊಡಗಿದರು. ಬಳಿಕ, ಬೇರೆ ಕುರಿಗಳ ಒಂದು ಮಹಾ ಸಮೂಹವು ಅವರನ್ನು ಸೇರಿಕೊಂಡು, ಈ ಎರಡೂ ಗುಂಪುಗಳು, ‘ಒಬ್ಬನೇ ಕುರುಬನಿರುವ ಒಂದೇ ಹಿಂಡು’ ಆಗಿ ಪರಿಣಮಿಸಿತು. (ಯೋಹಾನ 10:16) ಈಗ ಅವರು 234 ದೇಶದ್ವೀಪಗಳಲ್ಲಿ ದೇವರ ಸೇವೆ ಮಾಡುತ್ತಿದ್ದಾರಾದರೂ, ಯೆಹೋವನ ಈ ಎಲ್ಲಾ ನಂಬಿಗಸ್ತ ಆರಾಧಕರು ‘ಒಟ್ಟಿಗಿದ್ದಾರೆ.’ ಮತ್ತು ಈಗ, ಈ ಕುರಿ ಹಟ್ಟಿಯು, ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಂದ ‘ಗಿಜಿಗುಟ್ಟುತ್ತಿದೆ.’ ಅವರ ನಿರೀಕ್ಷೆಯು ಈ ವಿಷಯಗಳ ವ್ಯವಸ್ಥೆಯಲ್ಲಿಲ್ಲ, ಬದಲಿಗೆ ಯಾವುದು ಈ ಭೂಮಿಗೆ ಪರದೈಸನ್ನು ಶೀಘ್ರವೇ ಪುನಸ್ಸ್ಥಾಪಿಸಲಿದೆಯೊ ಆ ದೇವರ ರಾಜ್ಯದಲ್ಲಿದೆ.

23. ನಿಮ್ಮ ನಿರೀಕ್ಷೆಯು ನಿಶ್ಚಿತವಾದದ್ದೆಂದು ನಿಮಗೆ ಮನವರಿಕೆಯಾಗಿರುವುದೇಕೆ?

23 ಯೆಹೋವನ ನಂಬಿಗಸ್ತ ಆರಾಧಕರ ಕುರಿತು ಮೀಕ 2ನೆಯ ಅಧ್ಯಾಯದ ಕೊನೆಯ ವಚನ ಹೇಳುವುದು: “ಅವರ ಅರಸನು ಅವರ ಮುಂದೆ ತೆರಳಿದ್ದಾನೆ, ಯೆಹೋವನು ಅವರ ಮುಂಭಾಗದಲ್ಲಿ ನಡೆಯುತ್ತಿದ್ದಾನೆ.” ಸ್ವತಃ ಯೆಹೋವನನ್ನು ಮುಂಭಾಗದಲ್ಲಿ ಹೊಂದಿರುವ ಆ ವಿಜಯೋತ್ಸವದ ಮೆರವಣಿಗೆಯಲ್ಲಿ ನೀವು ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತಾ ಹೋಗುವುದನ್ನು ಕಾಣಬಲ್ಲಿರೊ? ಹಾಗಿರುವಲ್ಲಿ, ವಿಜಯವು ಖಚಿತ ಮತ್ತು ನಿಮ್ಮ ನಿರೀಕ್ಷೆಯು ನಿಶ್ಚಿತ ಎಂಬ ವಿಷಯದಲ್ಲಿ ನೀವು ದೃಢಭರವಸೆಯಿಂದಿರಬಲ್ಲಿರಿ. ಮೀಕನ ಪ್ರವಾದನೆಯ ಮುಖ್ಯಾಂಶಗಳಲ್ಲಿ ಇನ್ನೂ ಹೆಚ್ಚನ್ನು ನಾವು ಪರಿಗಣಿಸುವಾಗ ಇದು ನಮಗೆ ಇನ್ನೂ ಸ್ಪಷ್ಟವಾಗುವುದು.

ನೀವು ಹೇಗೆ ಉತ್ತರ ಕೊಡುವಿರಿ?

• ಮೀಕನ ದಿನದಲ್ಲಿ, ಯೆಹೂದ ಮತ್ತು ಇಸ್ರಾಯೇಲಿನ ವಿರುದ್ಧ ಕ್ರಮಕೈಕೊಳ್ಳುವ ತೀರ್ಮಾನವನ್ನು ಯೆಹೋವನು ಏಕೆ ಮಾಡಿದನು?

• ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುವವರು ಜೀವನದಲ್ಲಿ ಪ್ರಾಪಂಚಿಕ ವಿಷಯಗಳನ್ನು ಪ್ರಥಮವಾಗಿಡುವಾಗ ಏನು ಸಂಭವಿಸಬಲ್ಲದು?

ಮೀಕ 1 ಮತ್ತು 2ನೆಯ ಅಧ್ಯಾಯಗಳನ್ನು ಪರಿಗಣಿಸಿದ ಬಳಿಕ, ನಿಮ್ಮ ನಿರೀಕ್ಷೆಯು ನಿಶ್ಚಿತವಾದದ್ದೆಂದು ನಿಮಗೆ ಮನವರಿಕೆಯಾಗಿರುವುದೇಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಮೀಕನ ಪ್ರವಾದನೆ ನಮ್ಮನ್ನು ಆತ್ಮಿಕವಾಗಿ ಬಲಪಡಿಸಬಲ್ಲದು

[ಪುಟ 10ರಲ್ಲಿರುವ ಚಿತ್ರಗಳು]

ಸಾ.ಶ.ಪೂ. 537ರಲ್ಲಿ ಯೆಹೂದಿ ಜನಶೇಷವು ಮಾಡಿದಂತೆ, ಆತ್ಮಿಕ ಇಸ್ರಾಯೇಲ್ಯರೂ ಅವರ ಸಂಗಾತಿಗಳೂ ಸತ್ಯಾರಾಧನೆಗೆ ಒತ್ತಾಸೆ ಕೊಡುತ್ತಾರೆ