ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:
ಪಸ್ಕದ ಕುರಿಯನ್ನು ನೈಸಾನ್ 14ರಂದು ಯಾವ ಹೊತ್ತಿನಲ್ಲಿ ಕೊಯ್ಯಬೇಕಿತ್ತು?
ಕುರಿಯನ್ನು “ಸಂಜೇ ವೇಳೆಯಲ್ಲಿ” ಕೊಯ್ಯಬೇಕಿತ್ತು. ಅಂದರೆ ಸೂರ್ಯಾಸ್ತದ ನಂತರ ಆದರೆ ಇನ್ನೂ ಬೆಳಕಿರುವಾಗ ಕಡಿಯಬೇಕಿತ್ತು. (ವಿಮೋ. 12:6)—12/15, ಪುಟ 18-19.
ಯುವಜನರು ಯಾವ ಬೈಬಲ್ ತತ್ವಗಳನ್ನು ಬಳಸಿ ವಿವೇಕಯುತ ನಿರ್ಣಯಗಳನ್ನು ಮಾಡಬಹುದು?
ಈ ಮೂರು ತತ್ವಗಳು: (1) ಮೊದಲು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. (ಮತ್ತಾ. 6:19-34) (2) ಇತರರ ಸೇವೆ ಮಾಡುವುದರಲ್ಲಿ ಸಂತೋಷ ಕಂಡುಕೊಳ್ಳಿರಿ. (ಅ. ಕಾ. 20:35) (3) ಯೌವನದಲ್ಲಿ ದೇವರ ಸೇವೆ ಮಾಡುವುದರಲ್ಲಿ ಆನಂದಿಸಿರಿ. (ಪ್ರಸಂ. 12:1)—1/15, ಪುಟ 19-20.
ಬೈಬಲ್ನಲ್ಲಿ ಬಣ್ಣಗಳ ಬಗ್ಗೆ ಆಗಾಗ್ಗೆ ತಿಳಿಸಲಾಗಿರುವ ಸಂಗತಿಯಿಂದ ಏನು ಗೊತ್ತಾಗುತ್ತದೆ?
ಮಾನವರು ಬಣ್ಣಗಳೆಡೆಗೆ ಭಾವನಾತ್ಮಕ ಪ್ರತಿಕ್ರಿಯೆ ತೋರಿಸುತ್ತಾರೆ ಮತ್ತು ಬಣ್ಣ ಅವರಿಗೆ ಸಂಗತಿಗಳನ್ನು ನೆನಪಿಡಲು ಸಹಾಯಮಾಡುತ್ತದೆ ಎಂಬುದು ದೇವರಿಗೆ ತಿಳಿದಿದೆ ಎನ್ನುವುದು ಗೊತ್ತಾಗುತ್ತದೆ.—1/1, ಪುಟ 14-15.
“ಕುರಿಮರಿಯ ವಿವಾಹ” ಯಾವಾಗ ನಡೆಯುತ್ತದೆ? (ಪ್ರಕ. 19:7)
ರಾಜನಾದ ಯೇಸು ಕ್ರಿಸ್ತನು ತನ್ನ ವಿಜಯವನ್ನು ಪೂರ್ಣಗೊಳಿಸಿದ ನಂತರ ಅಂದರೆ ಮಹಾ ಬಾಬೆಲಿನ ನಾಶನದ ಹಾಗೂ ಅರ್ಮಗೆದೋನ್ ಯುದ್ಧದ ನಂತರವೇ “ಕುರಿಮರಿಯ ವಿವಾಹ” ನಡೆಯಲಿದೆ.—2/15, ಪುಟ 10.
ಯೇಸುವಿನ ಕಾಲದ ಯೆಹೂದ್ಯರು ಮೆಸ್ಸೀಯನನ್ನು ‘ಎದುರುನೋಡುತ್ತಾ’ ಇದ್ದದ್ದೇಕೆ? (ಲೂಕ 3:15)
ಒಂದನೇ ಶತಮಾನದ ಯೆಹೂದ್ಯರು ಮೆಸ್ಸೀಯನ ಕುರಿತ ದಾನಿಯೇಲನ ಪ್ರವಾದನೆಯನ್ನು ನಾವಿಂದು ಅರ್ಥಮಾಡಿರುವಂತೆಯೇ ಅರ್ಥಮಾಡಿಕೊಂಡಿದ್ದರು ಎಂದು ನಿಶ್ಚಿತವಾಗಿ ಹೇಳಸಾಧ್ಯವಿಲ್ಲ. (ದಾನಿ. 9:24-27) ಆದರೆ ಕೆಲವು ಕುರುಬರಿಗೆ ದೇವದೂತರು ಮಾಡಿದ ಘೋಷಣೆ ಅಥವಾ ಪ್ರವಾದಿನಿ ಹನ್ನಳು ಆಲಯದಲ್ಲಿ ಕೂಸು ಯೇಸುವನ್ನು ನೋಡಿದಾಗ ಹೇಳಿದ ಮಾತುಗಳನ್ನು ಅವರು ಕೇಳಿಸಿಕೊಂಡಿರಬಹುದು. ಅಲ್ಲದೆ ಜ್ಯೋತಿಷಿಗಳು ‘ಯೆಹೂದ್ಯರ ಅರಸನಾಗಿ ಹುಟ್ಟಿದವನನ್ನು’ ಹುಡುಕಿಕೊಂಡು ಬಂದಿದ್ದರು. (ಮತ್ತಾ. 2:1, 2) ನಂತರ ಸ್ನಾನಿಕನಾದ ಯೋಹಾನನು ಕ್ರಿಸ್ತನು ಬೇಗನೆ ಬರಲಿದ್ದಾನೆಂದು ಸೂಚಿಸಿದನು.—2/15,ಪುಟ 26-27.
ನಮ್ಮ ಮಾತು ‘ಮೊದಲು ಹೌದು ನಂತರ ಅಲ್ಲ’ ಆಗದಂತೆ ಹೇಗೆ ನೋಡಿಕೊಳ್ಳಬಲ್ಲೆವು? (2 ಕೊರಿಂ. 1:18)
ಸನ್ನಿವೇಶಗಳು ಕೈಮೀರಿ ಹೋಗುವುದರಿಂದ ಕೆಲವೊಮ್ಮೆ ನಾವು ಕೊಟ್ಟ ಮಾತನ್ನು ಪಾಲಿಸಲು ಸಾಧ್ಯವಾಗದೆ ಇರಬಹುದು. ಆದರೆ ನಾವು ಕೊಟ್ಟ ಮಾತಿನಂತೆ ನಡೆಯಲು ಅಥವಾ ಮಾಡಿರುವ ಒಪ್ಪಂದವನ್ನು ಪಾಲಿಸಲು ಕೈಲಾದುದ್ದೆಲ್ಲವನ್ನೂ ಮಾಡಬೇಕು.—3/15, ಪುಟ 32.
ನಮಗೇಕೆ ದೇವರ ಅಗತ್ಯವಿದೆ?
ನಮಗೆ ಜೀವನದಲ್ಲಿ ಉತ್ತಮ ನಿರ್ದೇಶನ ಬೇಕು, ಸಮಸ್ಯೆಗಳಿಗೆ ಪರಿಹಾರ ಬೇಕು. ಇವೆರಡನ್ನೂ ದೇವರು ಕೊಡುತ್ತಾನೆ. ಚೆನ್ನಾಗಿ ಬಾಳಲು, ಸಂತೋಷವಾಗಿರಲು ಬೇಕಾದ ಸಹಾಯವನ್ನು ಆತನು ನೀಡುತ್ತಾನೆ. ಇಂಥ ಬಾಳನ್ನು ಸಾಧ್ಯಗೊಳಿಸಲು ತನ್ನ ವಾಕ್ಯದಲ್ಲಿರುವ ವಾಗ್ದಾನಗಳನ್ನು ನೆರವೇರಿಸುವನು.—1/1, ಪುಟ 4-6.
ದುಡಿಯಲಿಕ್ಕಾಗಿ ತಮ್ಮ ಕುಟುಂಬವನ್ನು ಬಿಟ್ಟು ವಿದೇಶಕ್ಕೆ ಹೋಗುವ ಕ್ರೈಸ್ತರಿಗೆ ನೆನಸಿರದ ಯಾವ ಪರಿಣಾಮಗಳು ಎದುರಾಗಬಹುದು?
ಯಾವಾಗ ತಂದೆತಾಯಿ ಮತ್ತು ಮಕ್ಕಳು ಒಟ್ಟಿಗೆ ಇರುವುದಿಲ್ಲವೋ ಆಗ ಮಕ್ಕಳು ಭಾವನಾತ್ಮಕವಾಗಿ ಮತ್ತು ನೈತಿಕವಾಗಿ ಗಂಡಾಂತರಕ್ಕೆ ಸಿಲುಕುತ್ತಾರೆ. ಹೆತ್ತವರ ಮೇಲೆ ದ್ವೇಷ ಹುಟ್ಟಬಹುದು. ಮಾತ್ರವಲ್ಲ ಸಂಗಾತಿ ದೂರವಿರುವುದರಿಂದ ಗಂಡ/ಹೆಂಡತಿಗೆ ಲೈಂಗಿಕ ಪ್ರಲೋಭನೆಗಳು ಎದುರಾಗಬಹುದು.—4/15, ಪುಟ 19-20.
ನಾವು ಜನರಿಗೆ ಸುವಾರ್ತೆ ಸಾರುವಾಗ ಯಾವ ನಾಲ್ಕು ಪ್ರಶ್ನೆಗಳನ್ನು ಮನಸ್ಸಿನಲ್ಲಿಡಬೇಕು?
ಯಾರನ್ನು ಭೇಟಿಯಾಗುತ್ತಿದ್ದೇನೆ? ಎಲ್ಲಿ ಭೇಟಿಮಾಡುತ್ತಿದ್ದೇನೆ? ಯಾವಾಗ ಭೇಟಿಮಾಡುತ್ತಿದ್ದೇನೆ? ಅವರನ್ನು ಹೇಗೆ ಮಾತಾಡಿಸಬೇಕು?—5/15, ಪುಟ 12-15.