ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 90

ಯೇಸು ಗೊಲ್ಗೊಥಾದಲ್ಲಿ ಸತ್ತನು

ಯೇಸು ಗೊಲ್ಗೊಥಾದಲ್ಲಿ ಸತ್ತನು

ಮುಖ್ಯ ಯಾಜಕರು ಯೇಸುವನ್ನು ರಾಜ್ಯಪಾಲನ ಅರಮನೆಗೆ ಕರೆದುಕೊಂಡು ಹೋದರು. ಆಗ ಪಿಲಾತನು ‘ಈ ಮನುಷ್ಯನ ಮೇಲೆ ಯಾವ ಆರೋಪ ಇದೆ?’ ಎಂದು ಕೇಳಿದನು. ಅದಕ್ಕೆ ಅವರು ‘ಇವನು ತನ್ನನ್ನೇ ರಾಜ ಎಂದು ಹೇಳಿಕೊಳ್ಳುತ್ತಿದ್ದಾನೆ!’ ಅಂದರು. ಆಗ ಪಿಲಾತನು ಯೇಸುವಿಗೆ “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ” ಅಂದನು.

ಆಮೇಲೆ ಪಿಲಾತನು, ಗಲಿಲಾಯದ ಅಧಿಪತಿ ಹೆರೋದನು ಯೇಸುವಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಬಹುದೆಂದು ಅವನ ಹತ್ತಿರ ಕಳುಹಿಸಿದನು. ಹೆರೋದನಿಗೆ ಸಹ ಯೇಸುವಿನಲ್ಲಿ ಯಾವ ತಪ್ಪೂ ಕಾಣಲಿಲ್ಲ. ಅದಕ್ಕೆ ಅವನು ಯೇಸುವನ್ನು ಮತ್ತೆ ಪಿಲಾತನ ಹತ್ತಿರ ಕಳುಹಿಸಿದನು. ಆಗ ಪಿಲಾತನು ಜನರಿಗೆ ‘ಹೆರೋದನಿಗಾಗಲಿ, ನನಗಾಗಲಿ ಯೇಸುವಿನಲ್ಲಿ ಯಾವ ತಪ್ಪೂ ಕಾಣಿಸಲಿಲ್ಲ. ಹಾಗಾಗಿ ಇವನನ್ನು ಬಿಟ್ಟು ಬಿಡುತ್ತೇನೆ’ ಅಂದನು. ಅದಕ್ಕೆ ಜನರ ಗುಂಪಿನಲ್ಲಿರುವವರು ‘ಅವನನ್ನು ಕೊಲ್ಲಿಸು! ಕೊಲ್ಲಿಸು!’ ಎಂದು ಗಟ್ಟಿಯಾಗಿ ಕೂಗಿದರು. ಸೈನಿಕರು ಯೇಸುವನ್ನು ಚಾಟಿಯಿಂದ ಹೊಡೆದರು, ಅವನ ಮೇಲೆ ಉಗುಳಿದರು, ಅವನನ್ನು ಗುದ್ದಿದರು. ಅವರು ಮುಳ್ಳಿನ ಕಿರೀಟ ಮಾಡಿ ಯೇಸುವಿನ ತಲೆಗೆ ಹಾಕಿ ‘ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ’ ಎಂದು ಗೇಲಿ ಮಾಡಿದರು. ಮತ್ತೆ ಪಿಲಾತನು ಜನರ ಗುಂಪಿಗೆ ‘ಇವನಲ್ಲಿ ಯಾವ ತಪ್ಪೂ ಕಾಣಲಿಲ್ಲ’ ಅಂದನು. ಅದಕ್ಕೆ ಅವರು ‘ಅವನನ್ನು ಶೂಲಕ್ಕೇರಿಸು!’ ಎಂದು ಕಿರುಚಿದರು. ಕೊನೆಗೆ ಪಿಲಾತನು ಯೇಸುವನ್ನು ಕೊಲ್ಲಲು ಒಪ್ಪಿಗೆ ಕೊಟ್ಟನು.

ಸೈನಿಕರು ಯೇಸುವನ್ನು ಗೊಲ್ಗೊಥಾ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಂಬಕ್ಕೆ ಏರಿಸಿದರು. ಆಗ ಯೇಸು ‘ತಂದೆಯೇ, ಇವರನ್ನು ಕ್ಷಮಿಸು, ಇವರು ಏನು ಮಾಡುತ್ತಿದ್ದಾರೆಂದು ಇವರಿಗೇ ಗೊತ್ತಿಲ್ಲ’ ಎಂದು ಪ್ರಾರ್ಥಿಸಿದನು. ಜನರು ಯೇಸುವನ್ನು ಗೇಲಿ ಮಾಡುತ್ತಾ ‘ನೀನು ದೇವರ ಮಗನಾಗಿದ್ದರೆ ಯಾತನಾ ಕಂಬದಿಂದ ಕೆಳಗೆ ಇಳಿದು ಬಾ! ನಿನ್ನನ್ನು ರಕ್ಷಿಸಿಕೋ ನೋಡೋಣ’ ಎಂದರು.

ಯೇಸುವಿನ ಜೊತೆ ಶೂಲಕ್ಕೇರಿಸಲ್ಪಟ್ಟ ಒಬ್ಬ ಅಪರಾಧಿ ಯೇಸುವಿನ ಹತ್ತಿರ ‘ನಿನ್ನ ರಾಜ್ಯ ಬರುವಾಗ ನೀನು ನನ್ನನ್ನು ಜ್ಞಾಪಿಸಿಕೋ’ ಅಂದನು. ಅದಕ್ಕೆ ಯೇಸು “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಮಾತು ಕೊಟ್ಟನು. ಮಧ್ಯಾಹ್ನದ ಹೊತ್ತಿಗೆ ಸುಮಾರು ಮೂರು ಗಂಟೆಗಳ ಕಾಲ ಎಲ್ಲಾ ಕಡೆ ಕತ್ತಲು ಕವಿಯಿತು. ಕೆಲವು ಶಿಷ್ಯರು ಯಾತನಾ ಕಂಬದ ಹತ್ತಿರವೇ ಇದ್ದರು. ಅವರಲ್ಲಿ ಯೇಸುವಿನ ತಾಯಿ ಮರಿಯಳೂ ಇದ್ದಳು. ಆಗ ಯೇಸು ಯೋಹಾನನಿಗೆ ಮರಿಯಳನ್ನು ತನ್ನ ಸ್ವಂತ ತಾಯಿಯಂತೆ ನೋಡಿಕೊಳ್ಳಲು ಹೇಳಿದನು.

ಕೊನೆಗೆ, ಯೇಸು “ನೆರವೇರಿತು!” ಎಂದು ಹೇಳಿ ತಲೆಬಾಗಿಸಿ ಕೊನೆಯುಸಿರೆಳೆದನು. ಆ ಕ್ಷಣವೇ ಒಂದು ದೊಡ್ಡ ಭೂಕಂಪವಾಯಿತು. ದೇವಾಲಯದ ಪವಿತ್ರ ಸ್ಥಳ ಮತ್ತು ಅತೀ ಪವಿತ್ರ ಸ್ಥಳದ ಮಧ್ಯೆ ಇದ್ದ ಪರದೆಯು ಎರಡು ಭಾಗವಾಯಿತು. ಆಗ ಸೈನ್ಯದ ಅಧಿಕಾರಿಯೊಬ್ಬ ‘ಇವನು ನಿಜವಾಗಲೂ ದೇವರ ಮಗನಾಗಿದ್ದನು’ ಅಂದನು.

“ದೇವರ ವಾಗ್ದಾನಗಳು ಎಷ್ಟೇ ಇರುವುದಾದರೂ ಅವು ಅವನ ಮೂಲಕ ಹೌದಾಗಿ ಪರಿಣಮಿಸಿವೆ.”—2 ಕೊರಿಂಥ 1:20