ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೋವನು ವಿಗ್ರಹಾರಾಧನೆಯನ್ನು ನಿಷೇಧಿಸುತ್ತಾನಾದರೂ, ಚಿನ್ನದ ಬಸವನನ್ನು ಮಾಡಿದ್ದಕ್ಕಾಗಿ ಆರೋನನನ್ನೇಕೆ ಶಿಕ್ಷಿಸಲಿಲ್ಲ?

ವಿಮೋಚನಕಾಂಡ 32ನೇ ಅಧ್ಯಾಯದಲ್ಲಿ ದಾಖಲಾಗಿರುವಂತೆ, ಆರೋನನು ಚಿನ್ನದ ಬಸವನನ್ನು ಮಾಡಿದಾಗ ವಿಗ್ರಹಾರಾಧನೆಯ ಕುರಿತಾದ ದೇವರ ನಿಯಮವನ್ನು ಮುರಿದನು. (ವಿಮೋ. 20:3-5) ಇದರಿಂದಾಗಿ ‘ಯೆಹೋವನು ಆರೋನನ ಮೇಲೆ ಬಹಳ ಸಿಟ್ಟುಗೊಂಡು ಅವನನ್ನು ನಾಶಮಾಡಬೇಕೆಂದಿದ್ದದರಿಂದ ಮೋಶೆಯು ಅವನಿಗೋಸ್ಕರವಾಗಿಯೂ ಆ ಕಾಲದಲ್ಲಿ ಪ್ರಾರ್ಥಿಸಿದನು.’ (ಧರ್ಮೋ. 9:19, 20) ಆರೋನನಿಗಾಗಿ ನೀತಿವಂತನಾದ ಮೋಶೆ ಮಾಡಿದ ಯಾಚನೆಗೆ ‘ಹೆಚ್ಚು ಬಲವಿತ್ತೊ?’ (ಯಾಕೋ. 5:16) ಹೌದು. ಆ ವಿಜ್ಞಾಪನೆಯ ಕಾರಣದಿಂದಾಗಿ ಹಾಗೂ ಕಡಿಮೆಪಕ್ಷ ಬೇರೆ ಎರಡು ಕಾರಣಗಳಿಂದಾಗಿ ಯೆಹೋವನು ಮೋಶೆಯ ಪ್ರಾರ್ಥನೆಯನ್ನು ಆಲಿಸಿದನು ಮತ್ತು ಆರೋನನನ್ನು ಶಿಕ್ಷಿಸಲಿಲ್ಲ ಎಂದು ತೋರುತ್ತದೆ.

ಒಂದು ಕಾರಣ ಆರೋನನ ನಂಬಿಗಸ್ತಿಕೆಯ ದಾಖಲೆಯೇ ಆಗಿದ್ದಿರಬೇಕು. ಮೋಶೆಗೆ ಫರೋಹನ ಮುಂದೆ ಹೋಗುವಂತೆ ಹಾಗೂ ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಹೊರತರುವಂತೆ ಯೆಹೋವನು ಆಜ್ಞಾಪಿಸಿದಾಗ ಆರೋನನನ್ನು ಮೋಶೆಯ ಜೊತೆಯಲ್ಲಿ ಹೋಗಿ ಅವನ ಪ್ರತಿನಿಧಿಯಾಗಿ ಮಾತನಾಡುವಂತೆ ಆತನು ನೇಮಿಸಿದನು. (ವಿಮೋ. 4:10-16) ಈ ಇಬ್ಬರು ಪುರುಷರು ವಿಧೇಯತೆಯಿಂದ ಅನೇಕ ಬಾರಿ ಈಜಿಪ್ಟಿನ ರಾಜನ ಸಮ್ಮುಖಕ್ಕೆ ಹೋದರು ಹಾಗೂ ಕಠಿಣ ಹೃದಯಿಯಾಗಿದ್ದ ಅವನ ದರ್ಪವನ್ನು ಸಹಿಸಿಕೊಂಡರು. ಹೀಗೆ ಇನ್ನೂ ಈಜಿಪ್ಟಿನಲ್ಲಿದ್ದಾಗಲೇ ಆರೋನನು ಯೆಹೋವನ ಸೇವೆಯಲ್ಲಿ ನಿಷ್ಠೆ ಹಾಗೂ ದೃಢಚಿತ್ತದ ದಾಖಲೆಯನ್ನು ಮಾಡಿದ್ದನು.—ವಿಮೋ. 4:21.

ಆರೋನನು ಚಿನ್ನದ ಬಸವನನ್ನು ಮಾಡುವ ಕೆಲಸಕ್ಕೆ ಕೈಹಾಕಲು ಯಾವುದು ನಡೆಸಿತೆಂಬುದನ್ನೂ ಪರಿಗಣಿಸಿರಿ. ಮೋಶೆಯು 40 ದಿನಗಳ ವರೆಗೆ ಸೀನಾಯಿಬೆಟ್ಟದ ಮೇಲಿದ್ದನು. “ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲ್ಯರು ನೋಡಿ” ತಮಗಾಗಿ ಒಂದು ವಿಗ್ರಹ ಮಾಡಿಕೊಡುವಂತೆ ಆರೋನನನ್ನು ಒತ್ತಾಯಿಸಿದರು. ಆರೋನನು ಅದಕ್ಕೆ ಸಹಕರಿಸಿ ಚಿನ್ನದಿಂದ ಬಸವನ ವಿಗ್ರಹ ಮಾಡಿಕೊಟ್ಟನು. (ವಿಮೋ. 32:1-6) ಆದರೆ ಆರೋನನ ನಂತರದ ಕ್ರಿಯೆಗಳು ಅವನು ನಿಜವಾಗಿಯೂ ಆ ವಿಗ್ರಹಾರಾಧನೆಗೆ ಸಮ್ಮತಿಸಿರಲಿಲ್ಲ ಎಂಬುದನ್ನು ಸೂಚಿಸುತ್ತವೆ. ಅವನು ಒತ್ತಡಕ್ಕೆ ಮಣಿದು ಹಾಗೆ ಮಾಡಿದನೆಂಬುದು ಸ್ಪಷ್ಟ. ಉದಾಹರಣೆಗೆ, ಈ ವಿಗ್ರಹಾರಾಧನೆಯ ವಿವಾದವನ್ನು ಮೋಶೆಯು ನಾಟಕೀಯ ಘಟನೆಯಿಂದ ಕೊನೆಗೊಳಿಸಿದಾಗ ಆರೋನನು ಸೇರಿದಂತೆ ಲೇವಿಯರೆಲ್ಲರೂ ಯೆಹೋವನ ಪಕ್ಷದಲ್ಲಿ ಸ್ಥಿರವಾಗಿ ನಿಂತರು. ಆ ವಿಗ್ರಹಾರಾಧಕ ಕ್ರಿಯೆಗೆ ಮುಖ್ಯವಾಗಿ ಜವಾಬ್ದಾರರಾಗಿದ್ದ ಮೂರು ಸಾವಿರ ವಿಗ್ರಹಾರಾಧಕರು ಸಂಹರಿಸಲ್ಪಟ್ಟರು.—ವಿಮೋ. 32:25-29.

ತದನಂತರ ಮೋಶೆಯು, “ನೀವು ಮಹಾಪಾಪವನ್ನು ಮಾಡಿದಿರಿ” ಎಂದು ಜನರಿಗೆ ಹೇಳಿದನು. (ವಿಮೋ. 32:30) ಹೀಗೆ ಆ ಕೆಟ್ಟ ಕೃತ್ಯಕ್ಕಾಗಿ ಸ್ವಲ್ಪಮಟ್ಟಿಗೆ ದೋಷಿಯಾಗಿದ್ದವನು ಆರೋನನು ಒಬ್ಬನೇ ಅಲ್ಲ. ಅವನೂ ಇತರ ಜನರೂ ಯೆಹೋವನ ಮಹಾ ಕರುಣೆಯಿಂದ ಪ್ರಯೋಜನ ಹೊಂದಿದರು.

ಚಿನ್ನದ ಬಸವನ ಆರಾಧನೆಯ ಘಟನೆಯು ನಡೆದ ತರುವಾಯ ಯೆಹೋವನು ಆರೋನನನ್ನು ಮುಖ್ಯ ಯಾಜಕನಾಗಿ ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನು. “ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು” ಎಂದು ದೇವರು ಮೋಶೆಗೆ ಹೇಳಿದನು. (ವಿಮೋ. 40:12, 13) ಯೆಹೋವನು ಆರೋನನ ಬಲಹೀನತೆಯನ್ನು ಕ್ಷಮಿಸಿದನು ಎಂಬುದು ಇದರಿಂದ ರುಜುವಾಗುತ್ತದೆ. ಆರೋನನು ಹೃದಯದಲ್ಲಿ ಶುದ್ಧಾರಾಧನೆಯನ್ನು ಎತ್ತಿಹಿಡಿಯುವವನಾಗಿದ್ದನೇ ಹೊರತು ದಂಗೆಕೋರ ವಿಗ್ರಹಾರಾಧಕನಾಗಿರಲಿಲ್ಲ.