ಅಬ್ರಹಾಮ ನಮ್ರ ವ್ಯಕ್ತಿ

ಅಬ್ರಹಾಮ ನಮ್ರ ವ್ಯಕ್ತಿ

ಅಬ್ರಹಾಮ ನಮ್ರ ವ್ಯಕ್ತಿ

ಅಬ್ರಹಾಮ ಸುಡುಬಿಸಿಲಿನ ಒಂದು ಮಧ್ಯಾಹ್ನ ತನ್ನ ಡೇರೆಯ ನೆರಳಿನಲ್ಲಿ ಕೂತಿದ್ದಾನೆ. ಆಗ ಯಾರೋ ಮೂವರು ದೂರದಲ್ಲಿ ಬರುತ್ತಿದ್ದದ್ದನ್ನು ನೋಡುತ್ತಾನೆ. * ಆ ಕ್ಷಣವೇ ಎದ್ದು ಓಡಿಹೋಗಿ ಅವರನ್ನು ಸಂಧಿಸುತ್ತಾನೆ. ತನ್ನ ಡೇರೆಯಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಆತಿಥ್ಯ ಸ್ವೀಕರಿಸಿ ಪ್ರಯಾಣ ಮುಂದುವರಿಸುವಂತೆ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಾನೆ. “ಸ್ವಲ್ಪ ಆಹಾರ” ಅಂತ ಹೇಳಿ ಬಿಸಿಬಿಸಿ ರೊಟ್ಟಿ, ಮೊಸರು, ಹಾಲು, ಎಳೇ ಮಾಂಸದ ಭರ್ಜರಿ ಊಟವನ್ನೇ ಸಿದ್ಧಮಾಡುತ್ತಾನೆ. ಆತನೇ ನಿಂತು ಬಡಿಸುತ್ತಾನೆ. ಹೀಗೆ ಅಬ್ರಹಾಮ ವಿಶೇಷ ರೀತಿಯ ಅತಿಥಿಸತ್ಕಾರ ತೋರಿಸುತ್ತಾನೆ. ಅಲ್ಲದೆ, ಸಾಚಾ ನಮ್ರತೆಯನ್ನೂ ತೋರಿಸುತ್ತಾನೆ. ಅದು ಹೇಗೆ? ಓದೋಣ ಬನ್ನಿ.—ಆದಿಕಾಂಡ 18:1-8.

ನಮ್ರತೆ ಎಂದರೆ? ಹಮ್ಮು, ಅಹಂಕಾರ ಎಳ್ಳಷ್ಟೂ ಇಲ್ಲದಿರುವುದೇ. ಬೇರೆಯವರು ಒಂದಲ್ಲ ಒಂದು ವಿಧದಲ್ಲಿ ತನಗಿಂತ ಶ್ರೇಷ್ಠರೆಂದು ನಮ್ರ ವ್ಯಕ್ತಿ ಒಪ್ಪಿಕೊಳ್ಳುತ್ತಾನೆ. (ಫಿಲಿಪ್ಪಿ 2:3) ಇತರರು ಕೊಡುವ ಸಲಹೆಗಳನ್ನು ಸ್ವೀಕರಿಸುತ್ತಾನೆ. ಅಂತಸ್ತಿಗೆ ತಕ್ಕದ್ದಲ್ಲವೆಂದು ಜನರೆಣಿಸುವ ಕೆಲಸವನ್ನೂ ಬೇರೆಯವರಿಗೋಸ್ಕರ ಹಿಂಜರಿಯದೆ ಮಾಡುತ್ತಾನೆ.

ಅಬ್ರಹಾಮ ನಮ್ರತೆ ತೋರಿಸಿದ್ದು ಹೇಗೆ? ಸಂತೋಷದಿಂದ ಇತರರ ಸೇವೆ ಮಾಡಿದ. ಆರಂಭದಲ್ಲಿ ತಿಳಿಸಿದಂತೆ ಆ ಮೂವರ ಅತಿಥಿಸತ್ಕಾರಕ್ಕೆ ಸಿದ್ಧತೆಗಳನ್ನು ಮಾಡಿದ. ಆತನ ಪತ್ನಿ ಸಾರ ಬೇಗಬೇಗನೆ ಅಡಿಗೆ ಆರಂಭಿಸಿದಳು. ಹೆಚ್ಚಿನ ಕೆಲಸವನ್ನು ಮಾಡಿದವರು ಯಾರು? ಅಬ್ರಹಾಮನೇ! ಗಮನಿಸಿ: ಆ ಮೂವರು ಅತಿಥಿಗಳ ಬಳಿಗೆ ಓಡಿಹೋದ. ಊಟಮಾಡಲು ಬನ್ನಿ ಎಂದು ಕರೆದುಕೊಂಡು ಬಂದ. ಎಳೇ ಕರುವನ್ನು ಆಯ್ದುತಂದ. ಅತಿಥಿಗಳಿಗೆ ಉಣಬಡಿಸಿದ. ಈ ಎಲ್ಲ ಕೆಲಸವನ್ನು ಆಳುಗಳಿಗೆ ವಹಿಸಿಬಿಡುವ ಬದಲು ಈ ನಮ್ರ ವ್ಯಕ್ತಿ ಅದನ್ನು ತಾನೇ ಮಾಡಿದ. ಇತರರ ಸೇವೆ ಮಾಡುವುದು ತನ್ನ ಅಂತಸ್ತಿಗೆ ತಕ್ಕದ್ದಲ್ಲ ಎಂದಾತ ಭಾವಿಸಲಿಲ್ಲ.

ತನ್ನ ಅಧಿಕಾರದ ಕೆಳಗಿದ್ದವರು ಕೊಡುತ್ತಿದ್ದ ಸಲಹೆಗಳನ್ನು ಸ್ವೀಕರಿಸಿದ. ಅಬ್ರಹಾಮ ಸಾರಳ ನಡುವಿನ ಸಂಭಾಷಣೆಗಳಲ್ಲಿ ಬೆರಳೆಣಿಕೆಯಷ್ಟನ್ನೇ ಬೈಬಲಲ್ಲಿ ದಾಖಲಿಸಲಾಗಿದೆ. ಆ ಬೆರಳೆಣಿಕೆಯಷ್ಟು ದಾಖಲೆಗಳಲ್ಲೇ ಎರಡು ಬಾರಿ ಅಬ್ರಹಾಮನು ಸಾರಳು ಕೊಟ್ಟ ಸಲಹೆಯಂತೆಯೇ ಮಾಡಿದ್ದಾಗಿ ತಿಳಿಸಲಾಗಿದೆ. (ಆದಿಕಾಂಡ 16:2; 21:8-14) ಆ ಎರಡು ಸಂದರ್ಭಗಳಲ್ಲಿ ಒಮ್ಮೆ ಕೊಟ್ಟ ಸಲಹೆ “ಅಬ್ರಹಾಮನಿಗೆ ಬಹುದುಃಖವನ್ನು ಹುಟ್ಟಿಸಿತು.” ಆದರೂ ಯೆಹೋವ ದೇವರು ಆಕೆಯ ಸಲಹೆಯ ಔಚಿತ್ಯವನ್ನು ನೋಡಿ, ಅದರಂತೆ ಮಾಡು ಎಂದು ಅವನಿಗೆ ಹೇಳಿದನು. ಆಗ ಅಬ್ರಹಾಮ ನಮ್ರತೆಯಿಂದ ಆಕೆ ಹೇಳಿದಂತೆಯೇ ಮಾಡಿದ.

ನಮಗಿರುವ ಪಾಠ? ನಮ್ಮಲ್ಲಿ ನಮ್ರತೆ ಇದ್ದರೆ ಸಂತೋಷದಿಂದ ಇತರರ ಸೇವೆ ಮಾಡುವೆವು. ಬೇರೆಯವರಿಗೆ ಅನುಕೂಲವಾಗಲೆಂದು ಯಾವುದೇ ಕೆಲಸ ಮಾಡಲು ಸಿದ್ಧರಿರುವೆವು.

ಬೇರೆಯವರ ಸಲಹೆಗಳಿಗೆ ನಾವು ಸ್ಪಂದಿಸುವ ರೀತಿಯಿಂದಲೂ ನಮ್ರತೆ ವ್ಯಕ್ತವಾಗುತ್ತದೆ. ಒಂದು ವಿಚಾರ ನಮಗೆ ಹೊಳೆಯದೆ ಬೇರೊಬ್ಬರಿಗೆ ಹೊಳೆಯಿತಲ್ಲ ಎಂಬ ಕಾರಣ ಮಾತ್ರಕ್ಕೆ ನಾವದನ್ನು ತಳ್ಳಿಹಾಕುವುದಿಲ್ಲ ಬದಲಾಗಿ ಸ್ವೀಕರಿಸುವೆವು. (ಜ್ಞಾನೋಕ್ತಿ 15:22) ಈ ಗುಣ ಮುಖ್ಯವಾಗಿ ಅಧಿಕಾರದಲ್ಲಿರುವ ಜನರಿಗೆ ತುಂಬ ಪ್ರಯೋಜನ ತರುತ್ತದೆ. “ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುವ ವ್ಯಕ್ತಿ ಹೇಗಿರಬೇಕೆಂದರೆ ಅವನ ಕೆಳಗೆ ಕೆಲಸಮಾಡುವ ಜನರು ತಮ್ಮ ಸಲಹೆ/ಅಭಿಪ್ರಾಯಗಳನ್ನು ಅವನ ಬಳಿ ಬಂದು ಮುಕ್ತವಾಗಿ ತಿಳಿಸುವಂತಿರಬೇಕು. ಅವರ ಸಲಹೆ/ಅಭಿಪ್ರಾಯಗಳು ತನ್ನದಕ್ಕಿಂತ ಉತ್ತಮವಾಗಿವೆ ಎಂದು ಒಪ್ಪಿಕೊಳ್ಳಲು ಅವನಿಗೆ ನಮ್ರತೆ ಇರಲೇಬೇಕು. ಒಳ್ಳೊಳ್ಳೆ ಉಪಾಯಗಳು, ವಿಚಾರಗಳು ಮೇಲ್ವಿಚಾರಣೆ ಮಾಡುವವರಿಗೆ ಮಾತ್ರ ಹೊಳೆಯಬೇಕೆಂದೇನಿಲ್ಲ” ಎನ್ನುತ್ತಾರೆ ಜಾನ್‌ ಎಂಬ ಒಬ್ಬ ಅನುಭವೀ ಸೂಪರ್‌ವೈಸರ್‌.

ಅಬ್ರಹಾಮನನ್ನು ಅನುಕರಿಸೋಣ. ಬೇರೆಯವರು ಸಲಹೆ ಕೊಟ್ಟಾಗ ಸ್ವೀಕರಿಸೋಣ. ಅಂತಸ್ತಿಗೆ ತಕ್ಕದ್ದಲ್ಲವೆಂದು ಎಣಿಸಲಾಗುವ ಕೆಲಸವನ್ನೂ ಬೇರೆಯವರಿಗೋಸ್ಕರ ಮಾಡೋಣ. ಹೀಗೆ ಯೆಹೋವನ ಅನುಗ್ರಹಕ್ಕೆ ಪಾತ್ರರಾಗೋಣ. ಏಕೆಂದರೆ “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ [ನಮ್ರರಿಗೆ] ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5. (w12-E 01/01)

[ಪಾದಟಿಪ್ಪಣಿ]

^ ಪ್ಯಾರ. 2 ಆ ಮೂವರು ಯಾರೆಂದು ಅಬ್ರಹಾಮನಿಗೆ ಮೊದಲು ಗೊತ್ತಿರಲಿಲ್ಲ. ಆದರೂ ಸತ್ಕರಿಸಿದನು. ಅವರು ದೇವರ ಸಂದೇಶವನ್ನು ತಿಳಿಸಲು ಬಂದ ದೇವದೂತರಾಗಿದ್ದರು.—ಇಬ್ರಿಯ 13:2.