ತಮ್ಮ ನಂಬಿಕೆಯ ಬಗ್ಗೆ ಧೀರತೆಯಿಂದ ಮಾತನಾಡುವ ಯುವ ಜನರು
ತಮ್ಮ ನಂಬಿಕೆಯ ಬಗ್ಗೆ ಧೀರತೆಯಿಂದ ಮಾತನಾಡುವ ಯುವ ಜನರು
ಯೆಹೋವನ ಸಾಕ್ಷಿಗಳ ಮಧ್ಯೆ ಅನೇಕ ಯುವ ಜನರಿದ್ದಾರೆ. ಅವರು ದೇವರನ್ನು ಪ್ರೀತಿಸುತ್ತಾರೆ ಮತ್ತು ಆತನು ತನ್ನ ವಾಕ್ಯದಲ್ಲಿ ತಿಳಿಸಿರುವ ಮಟ್ಟಗಳಿಗನುಸಾರ ನಡೆಯಲು ಪ್ರಯತ್ನಿಸುತ್ತಾರೆ. ಈ ಯುವ ಜನರು ತಮ್ಮ ನಂಬಿಕೆಯ ಕುರಿತು ಹೆಮ್ಮೆಪಡುತ್ತಾರೆ, ಮತ್ತು ಅದರ ಕುರಿತು ಅವರು ಇತರರೊಂದಿಗೆ ಶಾಲೆಯಲ್ಲಿ ನಿರ್ಭಯವಾಗಿ ಮಾತನಾಡುತ್ತಾರೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
◼ಹೊಲೀ ಎಂಬವಳು ಆರನೇ ತರಗತಿಯಲ್ಲಿರುವಾಗ ಅವಳಿಗೆ ಮತ್ತು ಅವಳ ಸಹಪಾಠಿಗಳಿಗೆ, “ಹಿಂಸಾಚಾರವಿಲ್ಲದೆ ಭಯೋತ್ಪಾದನೆ ಎಂಬ ಸಮಸ್ಯೆಯನ್ನು ನೀವು ಹೇಗೆ ಬಗೆಹರಿಸುವಿರಿ?” ಎಂಬ ಪ್ರಶ್ನೆಯ ಕುರಿತು ಒಂದು ಪ್ರಬಂಧವನ್ನು ಬರೆಯುವ ನೇಮಕವು ಕೊಡಲ್ಪಟ್ಟಿತು. ಭವಿಷ್ಯತ್ತಿನ ಬಗ್ಗೆ ತನ್ನ ಬೈಬಲ್ ಆಧಾರಿತ ನಿರೀಕ್ಷೆಯ ಕುರಿತು ಬರೆಯಲು ಹೊಲೀ ಈ ಸಂದರ್ಭವನ್ನು ಉಪಯೋಗಿಸಿಕೊಂಡಳು. ಇತಿಹಾಸದಾದ್ಯಂತ ಮನುಷ್ಯನು “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆ ಎಂದು ಅವಳು ವಿವರಿಸಿದಳು. (ಪ್ರಸಂಗಿ 8:9) ಅನಂತರ, ಮಾನವಕುಲದ ಏಕಮಾತ್ರ ನಿರೀಕ್ಷೆಯಾದ ದೇವರ ರಾಜ್ಯದ ಕುರಿತು ಅವಳು ತಿಳಿಸಿದಳು. ಅವಳು ಬರೆದದ್ದು: “ಆ ರಾಜ್ಯದ ನೇಮಿತ ರಾಜನು ಯೇಸುವಾಗಿರುವುದರಿಂದ, ಭಯೋತ್ಪಾದನೆಯನ್ನು ಸೇರಿಸಿ ಎಲ್ಲಾ ಸಮಸ್ಯೆಗಳು ತೆಗೆದುಹಾಕಲ್ಪಡುವವು.” ಯಾವುದೇ ಮಾನವ ಅಧಿಕಾರಿಯು ಮಾಡಸಾಧ್ಯವಿಲ್ಲದ ವಿಷಯವನ್ನು ಯೇಸು ಹೇಗೆ ಮಾಡಲಿದ್ದಾನೆ ಎಂಬುದನ್ನು ಹೊಲೀ ವಿವರಿಸಿದಳು. ಅವಳು ಬರೆದದ್ದು: “ಯೇಸು ಈ ಭೂಮಿಯಲ್ಲಿದ್ದಾಗ ತಾನು ಯಾವ ರೀತಿಯ ಪ್ರಭುವಾಗಲಿದ್ದೇನೆ ಎಂಬುದನ್ನು ತೋರಿಸಿಕೊಟ್ಟನು. ಅವನು ಪ್ರೀತಿಪರನೂ ಜನರ ಕಡೆಗೆ ಕಾಳಜಿಯಿರುವವನೂ ಆಗಿದ್ದನು. ರೋಗಗಳನ್ನು ವಾಸಿಮಾಡುವ ಮತ್ತು ಸತ್ತವರನ್ನು ಪುನರುತ್ಥಾನಗೊಳಿಸುವ ಮೂಲಕ ತನಗಿದ್ದ ಶಕ್ತಿಯನ್ನು ಅವನು ತೋರಿಸಿದನು. ಸತ್ತವರನ್ನು ಪುನಃ ಜೀವಕ್ಕೆ ತರುವ ಸಾಮರ್ಥ್ಯ ಯಾವುದೇ ಮಾನವ ಸರಕಾರಕ್ಕೆ ಇಲ್ಲ. ಆದರೆ ದೇವರ ರಾಜ್ಯವು ಅದನ್ನು ಪೂರೈಸುವುದು.” ಹೊಲೀ ತನ್ನ ಪ್ರಬಂಧವನ್ನು ಈ ವಾಕ್ಯದೊಂದಿಗೆ ಮುಕ್ತಾಯಗೊಳಿಸಿದಳು: “ಪರಿಹಾರವು ದೇವರಲ್ಲಿದೆ, ಮಾನವರಲ್ಲಿ ಅಲ್ಲ.”
ಈ ಪ್ರಬಂಧದ ಕೊನೆಯಲ್ಲಿ ಅಧ್ಯಾಪಕಿಯು ಹೀಗೆ ಬರೆದಳು: “ಶಾಭಾಷ್! ಇದೊಂದು ಮನತಟ್ಟುವ ಲೇಖನ, ಹೊಲೀ. ಬಹು ಅರ್ಥಗರ್ಭಿತವೂ ಆಗಿದೆ.” ಹೊಲೀ ಕೊಟ್ಟ ಶಾಸ್ತ್ರೀಯ ಉಲ್ಲೇಖಗಳಿಂದಲೂ ಅಧ್ಯಾಪಕಿ ಪ್ರಭಾವಿತಳಾದಳು. ಯೆಹೋವನ ಸಾಕ್ಷಿಗಳಿಂದ ಸಾಪ್ತಾಹಿಕವಾಗಿ ನಡೆಸಲ್ಪಡುವ, ಮಾತಾಡುವ ಮತ್ತು ಬೋಧಿಸುವ ಕಾರ್ಯಕ್ರಮವಾದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಕುರಿತು ತನ್ನ ಅಧ್ಯಾಪಕಿಗೆ ತಿಳಿಸುವ ಅವಕಾಶವನ್ನು ಇದು ಹೊಲೀಗೆ ಒದಗಿಸಿಕೊಟ್ಟಿತು. ಅವಳ ಅಧ್ಯಾಪಕಿಯು, ಶುಶ್ರೂಷಾ ಶಾಲೆಯಲ್ಲಿ ಉಪಯೋಗಿಸಲ್ಪಡುವ ಪಠ್ಯಪುಸ್ತಕದ ಒಂದು ಪ್ರತಿಯನ್ನು ಸಂತೋಷದಿಂದ ಸ್ವೀಕರಿಸಿದಳು.
◼ ಜೆಸಿಕ ಎಂಬವಳು ಸಹ, ಶಾಲಾ ಪ್ರಬಂಧಗಳನ್ನು ಬರೆಯುವಾಗ ತನ್ನ ನಂಬಿಕೆಯ ಕುರಿತು ಮಾತಾಡಶಕ್ತಳಾಗಿದ್ದಾಳೆ. ಅವಳು ಹೇಳುವುದು: “ನನ್ನ ನಂಬಿಕೆಗಳ ಕುರಿತು ಮೂರು ಪ್ರಬಂಧಗಳನ್ನು ಬರೆಯಲು ಶಕ್ತಳಾದೆ. ಅದರಲ್ಲಿ ಒಂದು, ಯೆಹೋವನ ಸಾಕ್ಷಿಗಳ ಮತ್ತು ಧಾರ್ಮಿಕ ಹಕ್ಕುಗಳ ಕುರಿತಾಗಿತ್ತು. ಯಾರು ಅದನ್ನು ಓದಲು ಬಯಸುತ್ತಾರೋ ಅವರು ಹಾಗೆ ಮಾಡಸಾಧ್ಯವಾಗುವಂತೆ ಅಧ್ಯಾಪಕಿಯು ಅದನ್ನು ಶಾಲಾ ಲೈಬ್ರರಿಯಲ್ಲಿ ಪ್ರದರ್ಶಿಸಿದರು. ಇತ್ತೀಚೆಗೆ ನಾನು ನನ್ನ ದೀಕ್ಷಾಸ್ನಾನದ ದಿನವು ನನಗೆ ಎಷ್ಟು ಪ್ರಾಮುಖ್ಯವಾಗಿದೆ ಎಂಬುದರ ಕುರಿತಾಗಿಯೂ ಒಂದು ಪ್ರಬಂಧವನ್ನು ಬರೆದೆ. ವಿದ್ಯಾರ್ಥಿಗಳು ತಾವು ಬರೆದ ಪ್ರಬಂಧವನ್ನು—ಅದನ್ನು ಪೂರ್ಣಗೊಳಿಸುವ ಮುನ್ನವೇ—ಒಬ್ಬರಿಗೊಬ್ಬರು ದಾಟಿಸುತ್ತಾರೆ. ಇದರಿಂದಾಗಿ, ನನ್ನ ಸಹಪಾಠಿಗಳಿಗೆ ನನ್ನ ಪ್ರಬಂಧವನ್ನು ಓದುವ ಸಂದರ್ಭ ದೊರಕಿತು. ಒಬ್ಬ ಹುಡುಗಿಯು ಹೀಗೆ ಹೇಳಿದಳು: ‘ಉತ್ತಮ ಪ್ರಬಂಧ. ಒಬ್ಬ ಯೆಹೋವನ ಸಾಕ್ಷಿಯಾಗಿರುವುದರೊಂದಿಗೆ ಬರುವ ಜವಾಬ್ದಾರಿಗಳನ್ನು ತಿಳಿಯಲು ಇದು ಸಹಾಯಮಾಡಿತು. ನಿನ್ನ ದೀಕ್ಷಾಸ್ನಾನಕ್ಕಾಗಿ ಶುಭಾಶಯಗಳು!’ ಇನ್ನೊಬ್ಬ ಹುಡುಗಿಯು ಹೇಳಿದ್ದು: ‘ನಿನ್ನ ಕಥೆಯು ಬಹಳ ಮನತಟ್ಟುವಂಥದ್ದಾಗಿದೆ! ನಿನ್ನ ನಂಬಿಕೆಯು ಇಷ್ಟು ಬಲವಾದದ್ದಾಗಿರುವುದನ್ನು ಕಂಡು ನಾನು ಸಂತೋಷಪಡುತ್ತೇನೆ!’ ಒಬ್ಬ ಹುಡುಗನು ಬರೆದದ್ದು: ‘ನೀನು ಒಬ್ಬಾಕೆ ತಿಳಿವಳಿಕೆಯುಳ್ಳ ವ್ಯಕ್ತಿ. ಶುಭಾಶಯಗಳು.’”
◼ ಮೆಲಿಸ 11 ವರುಷ ಪ್ರಾಯದವಳಾಗಿದ್ದಾಗ, ತನ್ನ ನಂಬಿಕೆಯ ಕುರಿತು ಧೀರತೆಯಿಂದ ಮಾತಾಡುವ ಒಂದು ಅಪೂರ್ವ ಸಂದರ್ಭವು ಅವಳಿಗೆ ದೊರಕಿತ್ತು. “ಶಾಲಾ ನರ್ಸ್ ಸೋಂಕು ರಕ್ಷಾವ್ಯವಸ್ಥೆಯನ್ನು ಕುರಿತು ಮಾತಾಡಲು ನನ್ನ ವಿಜ್ಞಾನ ತರಗತಿಗೆ ಬಂದಳು. ರಕ್ತಪೂರಣಗಳ ಕುರಿತು ವಿಷಯವು ಚರ್ಚಿಸಲ್ಪಟ್ಟಿತು. ತರಗತಿಯ ಅನಂತರ ನಾನು ನನ್ನ ವಿಜ್ಞಾನ ಅಧ್ಯಾಪಕರಿಗೆ, ರಕ್ತದ ಕುರಿತಾದ ನಮ್ಮ ವಿಡಿಯೋಗಳಲ್ಲಿ ಒಂದರ ಬಗ್ಗೆ ತಿಳಿಸಿದೆ. ಮರುದಿನ ನಾನು ಅದನ್ನು ಶಾಲೆಗೆ ತಂದೆ, ಮತ್ತು ನನ್ನ ಅಧ್ಯಾಪಕರು ಅದನ್ನು ಅವರ ಮನೆಗೆ ಕೊಂಡೊಯ್ದು ತನ್ನ ಕುಟುಂಬದೊಂದಿಗೆ ವೀಕ್ಷಿಸಿದರು. ಮಾರನೇ ದಿನ ಅವರು ಅದನ್ನು ಶಾಲೆಗೆ ತಂದು, ನನ್ನ ತರಗತಿಯನ್ನು ಸೇರಿಸಿ ಇನ್ನೂ ಎರಡು ತರಗತಿಗಳಿಗೆ ಅದನ್ನು ತೋರಿಸಿದರು. ಅನಂತರ ಅವರು ಯೆಹೋವನ ಸಾಕ್ಷಿಗಳ ಬಗ್ಗೆ ಸಕಾರಾತ್ಮಕ ಹೇಳಿಕೆಗಳನ್ನು ಸಹ ಮಾಡಿದರು. ಯೆಹೋವನ ಸಾಕ್ಷಿಗಳು ಈ ಪ್ರಯತ್ನವನ್ನು ಮಾಡದೇ ಇರುತ್ತಿದ್ದರೆ, ರಕ್ತಪೂರಣದ ಬದಲಿಗಳು ಸುಲಭವಾಗಿ ದೊರಕುತ್ತಿರಲಿಲ್ಲ ಎಂದು ಅವರು ತರಗತಿಗೆ ತಿಳಿಸಿದರು. ವಿಡಿಯೋವನ್ನು ನನಗೆ ಹಿಂದಿರುಗಿಸುವಾಗ ಅವರು ಕೇಳಿದ್ದು, ‘ಶಾಲಾ ಲೈಬ್ರರಿಗಾಗಿ ಇದರ ಒಂದು ಪ್ರತಿಯನ್ನು ನಾನು ಹೇಗೆ ಪಡೆದುಕೊಳ್ಳಸಾಧ್ಯವಿದೆ?’ ನಾನು ಅವರಿಗೆ ಒಂದು ಪ್ರತಿಯನ್ನು ನೀಡಿದೆ. ಅವರಿಗೆ ಬಹಳ ಸಂತೋಷವಾಯಿತು, ಮತ್ತು ಅಂತೆಯೇ ನನಗೂ ಸಂತೋಷವಾಯಿತು!”
ಸೃಷ್ಟಿಕರ್ತನನ್ನು ಸ್ಮರಿಸಿರಿ ಎಂಬ ಬೈಬಲಿನ ಬುದ್ಧಿವಾದವನ್ನು ಅನುಸರಿಸುವ ಯೆಹೋವನ ಸಾಕ್ಷಿಗಳ ಅನೇಕ ಯುವ ಜನರಲ್ಲಿ ಹೊಲೀ, ಜೆಸಿಕ, ಮತ್ತು ಮೆಲಿಸರು ಕೆಲವರಾಗಿದ್ದಾರೆ. (ಪ್ರಸಂಗಿ 12:1) ನೀವು ಸಹ ಅದನ್ನು ಮಾಡುತ್ತಿದ್ದೀರೋ? ಹಾಗಿರುವಲ್ಲಿ, ನೀವು ಯೆಹೋವನ ಹೃದಯವನ್ನು ಸಂತೋಷಗೊಳಿಸುತ್ತಿದ್ದೀರೆಂದು ನಿಶ್ಚಯದಿಂದಿರಬಲ್ಲಿರಿ.—ಜ್ಞಾನೋಕ್ತಿ 27:11; ಇಬ್ರಿಯ 6:10.
ಯುವ ಜನರಾದ ನೀವು ನಿಮ್ಮ ಸಹಪಾಠಿಗಳೊಂದಿಗೆ ಮತ್ತು ಅಧ್ಯಾಪಕರೊಂದಿಗೆ ನಿಮ್ಮ ನಂಬಿಕೆಯ ಕುರಿತು ಮಾತನಾಡುವಾಗ, ಯೆಹೋವ ದೇವರ ಹಾಗೂ ಆತನ ಉದ್ದೇಶಗಳ ಕುರಿತಾಗಿ ಅದು ಒಂದು ಶಕ್ತಿಯುತ ಸಾಕ್ಷಿಯನ್ನು ನೀಡುತ್ತದೆ. ಇದು ನಿಮ್ಮ ನಂಬಿಕೆಯನ್ನು ಸಹ ಬಲಗೊಳಿಸುತ್ತದೆ, ಮತ್ತು ದೇವರ ಸೇವಕರಲ್ಲಿ ಒಬ್ಬರಾಗಿರುವ ಸುಯೋಗಕ್ಕಾಗಿ ನೀವು ಹೆಮ್ಮೆಪಡುವಂತೆ ಇದು ಮಾಡುತ್ತದೆ. (ಯೆರೆಮೀಯ 9:24) ಶಾಲೆಯಲ್ಲಿ ಸಾಕ್ಷಿನೀಡುವುದು ನಿಮಗೆ ಒಂದು ರಕ್ಷಣೆಯೋಪಾದಿಯೂ ಇರುತ್ತದೆ. ಜೆಸಿಕ ಅದನ್ನು ಈ ರೀತಿಯಾಗಿ ವರ್ಣಿಸುತ್ತಾಳೆ: “ನನ್ನ ನಂಬಿಕೆಗಳ ಕುರಿತು ಧೀರತೆಯಿಂದ ಮಾತಾಡುವುದರಿಂದ ಸಿಕ್ಕಿದ ಒಂದು ಪ್ರಯೋಜನವು, ಬೈಬಲಿಗೆ ಹೊಂದಿಕೆಯಲ್ಲಿರದ ವಿಷಯಗಳನ್ನು ಮಾಡುವಂತೆ ವಿದ್ಯಾರ್ಥಿಗಳು ನನ್ನನ್ನು ಒತ್ತಾಯಿಸದೆ ಇರುವುದೇ ಆಗಿದೆ.” (g04 9/8)
[ಪುಟ 14ರಲ್ಲಿರುವ ಚಿತ್ರಗಳು]
ಹೊಲೀ
[ಪುಟ 14, 15ರಲ್ಲಿರುವ ಚಿತ್ರಗಳು]
ಜೆಸಿಕ
[ಪುಟ 15ರಲ್ಲಿರುವ ಚಿತ್ರಗಳು]
ಮೆಲಿಸ