ಮತ್ತಾಯ 17:1-27

  • ಯೇಸುವಿನ ರೂಪ ಬದಲಾಯ್ತು (1-13)

  • ಸಾಸಿವೆ ಕಾಳಿನಷ್ಟು ನಂಬಿಕೆ (14-21)

  • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (22, 23)

  • ಮೀನಿನ ಬಾಯಲ್ಲಿ ಸಿಕ್ಕಿದ ನಾಣ್ಯದಿಂದ ತೆರಿಗೆ ಕಟ್ಟಿದ್ರು (24-27)

17  ಯೇಸು ಆರು ದಿನ ಆದಮೇಲೆ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಕರ್ಕೊಂಡು ಎತ್ರದ ಒಂದು ಬೆಟ್ಟಕ್ಕೆ ಹೋದನು.+ 2  ಶಿಷ್ಯರ ಮುಂದೆ ಯೇಸುವಿನ ರೂಪ ಬದಲಾಯ್ತು. ಆತನ ಮುಖ ಸೂರ್ಯನ ತರ, ಆತನ ಬಟ್ಟೆ ಬೆಳಕಿನ ತರ* ಹೊಳಿತು.+ 3  ಆಗ ಅಚಾನಕ್ಕಾಗಿ ಮೋಶೆ, ಎಲೀಯ ಆತನ ಜೊತೆ ಮಾತಾಡ್ತಿರೋದು ಅವ್ರಿಗೆ ಕಾಣಿಸ್ತು. 4  ಆಗ ಪೇತ್ರ ಯೇಸುಗೆ “ಸ್ವಾಮಿ, ನಾವಿಲ್ಲಿ ಬಂದಿದ್ದು ಒಳ್ಳೇದಾಯ್ತು. ನಿನಗೆ ಇಷ್ಟ ಇದ್ರೆ, ಮೂರು ಡೇರೆ ಹಾಕ್ತೀನಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ. 5  ಪೇತ್ರ ಮಾತಾಡ್ತಾ ಇದ್ದಾಗಲೇ ಅವ್ರ ಮೇಲೆ ಬಿಳಿ ಮೋಡ ಕವಿಯಿತು. ಆ ಮೋಡದಿಂದ “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ ಕೇಳಿಸ್ತು. 6  ಶಿಷ್ಯರು ಇದನ್ನ ಕೇಳಿ ಹೆದ್ರಿ ನೆಲದಲ್ಲಿ ಅಡ್ಡಬಿದ್ರು. 7  ಆಗ ಯೇಸು ಹತ್ರ ಬಂದು ಅವ್ರನ್ನ ಮುಟ್ಟಿ “ಭಯಪಡಬೇಡಿ ಎದ್ದೇಳಿ” ಅಂದನು. 8  ಅವರು ತಲೆಯೆತ್ತಿ ನೋಡಿದಾಗ ಯೇಸು ಬಿಟ್ಟು ಬೇರೆ ಯಾರೂ ಕಾಣಲಿಲ್ಲ. 9  ಅವರು ಬೆಟ್ಟ ಇಳಿದು ಬರ್ತಿದ್ದಾಗ ಯೇಸು ಅವ್ರಿಗೆ “ಮನುಷ್ಯಕುಮಾರ ಸತ್ತು ಮತ್ತೆ ಎದ್ದು ಬರೋ ತನಕ ನೀವು ನೋಡಿದ್ದನ್ನ ಯಾರಿಗೂ ಹೇಳಬೇಡಿ”+ ಅಂತ ಅಪ್ಪಣೆ ಕೊಟ್ಟನು. 10  ಆಗ ಶಿಷ್ಯರು “ಹಾಗಾದ್ರೆ ಕ್ರಿಸ್ತನಿಗಿಂತ ಮೊದಲು ಎಲೀಯ ಬರಬೇಕು ಅಂತ ಪಂಡಿತರು ಯಾಕೆ ಹೇಳ್ತಾರೆ?”+ ಅಂತ ಕೇಳಿದ್ರು. 11  ಅದಕ್ಕೆ ಯೇಸು “ಎಲೀಯ ಖಂಡಿತ ಬರ್ತಾನೆ. ಎಲ್ಲ ವಿಷ್ಯವನ್ನ ಸರಿ ಮಾಡ್ತಾನೆ.+ 12  ನಾನು ನಿಮಗೆ ಹೇಳ್ತೀನಿ, ಎಲೀಯ ಬಂದಿದ್ದ. ಆದ್ರೆ ಅವರು ಗುರುತಿಸಲಿಲ್ಲ. ಅವನ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಕೊಂದುಬಿಟ್ರು.+ ಅದೇ ತರ ನನ್ನನ್ನೂ ಕೊಂದುಬಿಡ್ತಾರೆ”+ ಅಂದನು. 13  ಯೇಸು ಮಾತಾಡಿದ್ದು ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ಬಗ್ಗೆ ಅಂತ ಶಿಷ್ಯರಿಗೆ ಗೊತ್ತಾಯ್ತು. 14  ಅವರು ಜನ್ರ ಹತ್ರ ಹೋದಾಗ+ ಒಬ್ಬ ಮನುಷ್ಯ ಯೇಸುವಿಗೆ ಮೊಣಕಾಲೂರಿ 15  “ಸ್ವಾಮಿ, ನನ್ನ ಮಗನಿಗೆ ಕರುಣೆ ತೋರಿಸು. ಅವನಿಗೆ ಹುಷಾರಿಲ್ಲ, ಮೂರ್ಛೆರೋಗ ಇದೆ. ಅವನು ಆಗಾಗ ಬೆಂಕಿಯಲ್ಲಿ, ನೀರಲ್ಲಿ ಬೀಳ್ತಾನೆ.+ 16  ಅವನನ್ನ ನಿನ್ನ ಶಿಷ್ಯರ ಹತ್ರ ಕರ್ಕೊಂಡು ಬಂದೆ. ಆದ್ರೆ ಅವ್ರಿಗೆ ವಾಸಿಮಾಡೋಕೆ ಆಗ್ಲಿಲ್ಲ” ಅಂದ. 17  ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ, ಪಾಪಿಗಳೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರ್ಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೋಬೇಕು? ಅವನನ್ನ ಕರ್ಕೊಂಡು ಬನ್ನಿ” ಅಂದನು. 18  ಯೇಸು ಆ ಹುಡುಗನನ್ನ ಹಿಡಿದಿದ್ದ ಕೆಟ್ಟ ದೇವದೂತನಿಗೆ ಜೋರು ಮಾಡಿದಾಗ ಅವನು ಬಿಟ್ಟುಹೋದ. ಆ ಹುಡುಗನಿಗೆ ತಕ್ಷಣ ವಾಸಿ ಆಯ್ತು.+ 19  ಯೇಸು ಒಬ್ಬನೇ ಇದ್ದಾಗ ಶಿಷ್ಯರು ಬಂದು “ನಮ್ಮಿಂದ ಯಾಕೆ ಆ ಕೆಟ್ಟ ದೇವದೂತನನ್ನ ಬಿಡಿಸೋಕೆ ಆಗ್ಲಿಲ್ಲ?” ಅಂತ ಕೇಳಿದ್ರು. 20  ಅದಕ್ಕೆ ಆತನು “ಯಾಕಂದ್ರೆ ನಿಮಗೆ ನಂಬಿಕೆ ಕಮ್ಮಿ ಇದೆ. ನಿಜ ಹೇಳ್ತೀನಿ, ಸಾಸಿವೆ ಕಾಳಷ್ಟು ನಂಬಿಕೆ ಇದ್ರೂ ಸಾಕು, ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿ ಹೋಗು’ ಅಂತ ಹೇಳಿದ್ರೆ ಅದು ಹೋಗುತ್ತೆ. ನಿಮಗೆ ಏನು ಬೇಕಾದ್ರೂ ಮಾಡೋಕಾಗುತ್ತೆ”+ ಅಂದನು. 21  *—— 22  ಯೇಸು ಮತ್ತು ಶಿಷ್ಯರು ಗಲಿಲಾಯಕ್ಕೆ ಬಂದಾಗ ಯೇಸು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ.+ 23  ಅವರು ಅವನನ್ನ ಕೊಲ್ತಾರೆ. ಆದ್ರೆ ಮೂರನೇ ದಿನ ಅವನು ಬದುಕಿ ಬರ್ತಾನೆ”+ ಅಂದನು. ಇದನ್ನ ಕೇಳಿ ಶಿಷ್ಯರಿಗೆ ತುಂಬ ಬೇಜಾರಾಯ್ತು. 24  ಅವರು ಕಪೆರ್ನೌಮಿಗೆ ಬಂದಾಗ ದೇವಾಲಯದ ತೆರಿಗೆ* ವಸೂಲಿ ಮಾಡುವವರು ಪೇತ್ರನ ಹತ್ರ ಬಂದು “ನಿಮ್ಮ ಗುರು ದೇವಾಲಯದ ತೆರಿಗೆ ಕೊಡಲ್ವಾ?”+ ಅಂತ ಕೇಳಿದ್ರು. 25  ಅದಕ್ಕೆ ಪೇತ್ರ “ಕೊಡ್ತಾನೆ” ಅಂದ. ಅವನು ಮನೆಯೊಳಗೆ ಬಂದು ಮಾತಾಡೋ ಮುಂಚೆನೇ ಯೇಸು “ಸೀಮೋನ, ನಿನ್ನ ಅಭಿಪ್ರಾಯ ಏನು? ರಾಜರು ಯಾರಿಂದ ತೆರಿಗೆ, ಕಂದಾಯ* ತಗೊಳ್ತಾರೆ? ಅವ್ರ ಮಕ್ಕಳಿಂದನಾ ಅಥವಾ ಬೇರೆಯವ್ರಿಂದನಾ?” ಅಂತ ಕೇಳಿದನು. 26  ಅದಕ್ಕೆ ಪೇತ್ರ “ಬೇರೆಯವ್ರಿಂದ” ಅಂತ ಹೇಳಿದ. ಯೇಸು “ಹಾಗಾದ್ರೆ ಮಕ್ಕಳು ತೆರಿಗೆ ಕಟ್ಟಬೇಕಾಗಿಲ್ಲ. 27  ಆದ್ರೂ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರೋದು ಬೇಡ.+ ನೀನು ಸಮುದ್ರಕ್ಕೆ ಹೋಗಿ ಗಾಳಹಾಕು. ಅಲ್ಲೊಂದು ಮೀನು ಸಿಗುತ್ತೆ. ಅದ್ರ ಬಾಯಲ್ಲಿ ಒಂದು ಬೆಳ್ಳಿ ನಾಣ್ಯ ಇರುತ್ತೆ.* ಅದನ್ನ ತಗೊಂಡು ನಮ್ಮಿಬ್ಬರ ತೆರಿಗೆ ಕಟ್ಟು” ಅಂದನು.

ಪಾದಟಿಪ್ಪಣಿ

ಅಥವಾ “ಬೆಳ್ಳಗೆ.”
ಅಕ್ಷ. “ಎರಡು ದ್ರಾಕ್ಮಾ ನಾಣ್ಯಗಳು.” ಇದು ಎರಡು ದಿನದ ಕೂಲಿಗೆ ಸಮ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ತಲೆಗಂದಾಯ.” ಇದು ಪ್ರತಿಯೊಬ್ಬ ವ್ಯಕ್ತಿನೂ ಕಟ್ಟಬೇಕಾಗಿದ್ದ ತೆರಿಗೆಯನ್ನ ಸೂಚಿಸುತ್ತೆ.
ಅಕ್ಷ. “ಒಂದು ಸ್ಟೇಟರ್‌ ನಾಣ್ಯ.” ಇದಕ್ಕೆ ನಾಲ್ಕು ದ್ರಾಕ್ಮಾ ನಾಣ್ಯಗಳಷ್ಟು ಬೆಲೆ ಇದೆ. ಪರಿಶಿಷ್ಟ ಬಿ14 ನೋಡಿ.